ಬೆಂಗಳೂರು : ದೆಹಲಿ ನಾಯಕರ ಸೂಚನೆ ಮೇರೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಇದರಲ್ಲಿ ವೈಯಕ್ತಿಕ ವಿಚಾರ ಏನಿಲ್ಲ ಎಂದು ಅಲ್ಪಸಂಖ್ಯಾತ ನಾಯಕರ ವಿರುದ್ಧ ಕ್ರಮವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.
ಮಾತನಾಡಿದ ಡಿಕೆಶಿ, ನೋಡಿ, ನನ್ನ ವೈಯಕ್ತಿಕ ವಿಚಾರ ಯಾವುದೂ ಇಲ್ಲ. ಎಲ್ಲವೂ ಪಾರ್ಟಿ ನಿರ್ಧಾರ, ಪಾರ್ಟಿಗೆ ತನ್ನದೇ ಆದ ವರದಿ ಇದೆ. ದೆಹಲಿ ಅವರ ಸೂಚನೆ, ಸಲಹೆ ಮೇರೆಗೆ ನಾವು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ನಾವು ಮಾರ್ಗದರ್ಶನ ಮಾಡಬೇಕಾಗುತ್ತದೆ. ಎಲ್ಲರೂ ನನ್ನ ಮೇಲೆಯೇ ಹೇಳಬಹುದು. ಆದರೆ, ಹೇಳಿದರೂ ಚಿಂತೆ ಇಲ್ಲ ನನಗೆ. ಪಕ್ಷದ ಶಿಸ್ತಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ. ನಮ್ಮ ಪಕ್ಷ ಇರೋದೇ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತ, ಅಹಿಂದ ಸಮುದಾಯದ ಪರ. ಎಲ್ಲಾ ವರ್ಗಕ್ಕೆ ನ್ಯಾಯ ಕೋಡೋಕೆ ಇರೋದೇ ಕಾಂಗ್ರೆಸ್ ಪಕ್ಷ ಎಂದು ತಿಳಿಸಿದರು.
ಸಿದ್ದರಾಮಯ್ಯ ಗುಂಪು, ಡಿಕೆಶಿ ಗುಂಪು ಅಂತಾ ಯಾವುದೂ ಇಲ್ಲ. ನಾವು 146 ಶಾಸಕರು ಒಂದೇ ಗುಂಪು. ನಾನು, ಸಿಎಂ ಕೂತು ಎಷ್ಟು ಮಾತಾಡ್ತೇವೆ ಅಂತಾ ನಿಮಗೇನು ಗೊತ್ತು. ದಿನವೂ ಕುಳಿತುಕೊಳ್ಳುತ್ತೇವೆ, ದಿನಾ ಕೂಡ ಮಾತಾಡುತ್ತೇವೆ. ಎಲ್ಲಿ ಅವರೇನು ಸಿದ್ದರಾಮಯ್ಯ ಅವರ ಗುಂಪು ಅಂತ ಬೋರ್ಡ್ ಹಾಕಿಕೊಂಡಿದ್ದಾರಾ? ನನ್ನ ಗುಂಪು ಅಂತ ನಾನು ಬೋರ್ಡ್ ಹಾಕಿಕೊಂಡಿದ್ದೀನಾ? 140 ಶಾಸಕರು ಕೂಡ ನನ್ನ ಮತ್ತು ಸಿಎಂ ಅವರ ಗುಂಪೇ. ಯಾವ ಗುಂಪು, ಬೋರ್ಡ್ ಇಲ್ಲ. ಯಾವ ಸ್ಟೇಟ್ಮೆಂಟ್ ಇಲ್ಲ. ಒಂದೇ ಗುಂಪು, ಅದು ಕಾಂಗ್ರೆಸ್ ಗುಂಪು ಎಂದು ಸ್ಪಷ್ಟಪಡಿಸಿದರು.
ಸತೀಶ್ ಜಾರಕಿಹೊಳಿ ಭೇಟಿ ವಿಚಾರವಾಗಿ ಮಾತನಾಡಿ, ರೋಡ್ ಬಗ್ಗೆ ಮಾತಾಡಿದ್ದೇವೆ. ನೆಲಮಂಗಲದಲ್ಲಿ ಸಮಸ್ಯೆ ಆಗ್ತಿದೆ ಅಂದಿದ್ದಾರೆ. ಅರ್ಧ ಮುಕ್ಕಾಲು ಗಂಟೆ ಟ್ರಾಫಿಕ್ ಆಗುತ್ತೆ. ಬೆಂಗಳೂರು ಸಿಟಿಗೆ ವಹಿಕಲ್ ಅವೈಡ್ ಮಾಡಬೇಕು. ಏನು ಮಾಡೋಕೆ ಸಾಧ್ಯ ಅಂತ ನೋಡಬೇಕು. ಈಗಾಗಲೇ ನಾವು ಬುಸಿನೆಸ್ ಕಾರಿಡಾರ್ ಮಾಡಿದ್ದೇವೆ. ನಾವು ಈ ಎಲ್ಲಾ ವಿಚಾರದ ಬಗ್ಗೆ ಮಾತಾಡಿದ್ದೇವೆ. ಎರಡನೇದಾಗಿ ರಾಜಕಾರಣದ ಬಗ್ಗೆ ಮಾತಾಡಿದ್ದೇವೆ. ರಾಜ್ಯದ ಅಭಿವೃದ್ಧಿ, ಪಕ್ಷದ ಅಭಿವೃದ್ಧಿಗೆ ಏನು ಬೇಕು ಅದನ್ನ ಚರ್ಚೆ ಮಾಡಿದ್ದೇವೆ ಎಂದರು.















