ಮನೆ ರಾಜ್ಯ ಬೆಂಗಳೂರಲ್ಲಿ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಮುನಾವರ್ ಫಾರುಕಿ ಶೋಗೆ ವಿರೋಧ..

ಬೆಂಗಳೂರಲ್ಲಿ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಮುನಾವರ್ ಫಾರುಕಿ ಶೋಗೆ ವಿರೋಧ..

0

ಬೆಂಗಳೂರು : ನಗರದಲ್ಲಿ ಶನಿವಾರ (ನಾಳೆ) ನಡೆಯಲಿರುವ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಮುನಾವರ್ ಫಾರುಕಿ ಕಾರ್ಯಕ್ರಮಕ್ಕೆ ಹಿಂದೂ ಸಂಘಟನೆಗಳಿಂದ ಆಕ್ಷೇಪ ಕೇಳಿಬಂದಿದೆ. ಶೋ ರದ್ದು ಪಡಿಸುವಂತೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್​​ ಅವರಿಗೆ ಹಿಂದೂ ಜನಜಾಗೃತಿ ಸಮಿತಿ ಮನವಿ ಸಲ್ಲಿಸಿದೆ. ಮುನಾವರ್ ಫಾರುಕಿ ಹಳೆಯ ವಿವಾದಗಳು ಮತ್ತು ಕಾನೂನು ಸುವ್ಯವಸ್ಥೆ ಸಮಸ್ಯೆಗಳ ಆತಂಕವನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

2021ರಲ್ಲಿ ಇಂದೋರ್‌ನಲ್ಲಿ ಫಾರುಕಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನೂ ಹಿಂದೂ ಜನಜಾಗೃತಿ ಸಮಿತಿ ಉಲ್ಲೇಖಿಸಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್‌ಗಳಡಿ ಅವರ ಮೇಲೆ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದೆ. ಆ ಪ್ರಕರಣ ಸಂಬಂಧ ಫಾರುಕಿ ಬಂಧನಕ್ಕೊಳಗಾಗಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ನಂತರ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆಯಾದರೂ, ಆ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಬಾಕಿಯಿದೆ ಎಂದು ಸಮಿತಿ ಹೇಳಿದೆ.

ಪ್ರಯಾಗರಾಜ್ ಮತ್ತು ಮುಂಬೈ ಸೇರಿದಂತೆ ವಿವಿಧ ನಗರಗಳಲ್ಲಿ ಅವರ ಕಾರ್ಯಕ್ರಮಗಳ ವಿಷಯಕ್ಕೆ ಸಂಬಂಧಿಸಿದಂತೆ ವಿವಾದಗಳು ಮತ್ತು ಆಕ್ಷೇಪಣೆಗಳು ಬಂದಿದ್ದವು. ಮುಂಬೈ, ದೆಹಲಿ, ಪುಣೆ, ಹೈದರಾಬಾದ್, ಗೋವಾ, ರಾಯ್ಪುರ್ ಮತ್ತು ಗುರುಗ್ರಾಂ ಸೇರಿದಂತೆ ಬೆಂಗಳೂರಲ್ಲೂ ಅವರ ಶೋಗಳು ಈ ಹಿಂದೆ ಕಾನೂನು ಸುವ್ಯವಸ್ಥೆ ಆತಂಕದಿಂದ ರದ್ದಾಗಿದ್ದವು ಅಥವಾ ಅನುಮತಿ ನಿರಾಕರಿಸಲಾಗಿತ್ತು.

ಹೀಗಾಗಿ ಬೆಂಗಳೂರಿನಲ್ಲಿ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದರೆ ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ಉಂಟಾಗಿ, ಪ್ರತಿಭಟನೆಗಳು, ಅಶಾಂತಿ ಮತ್ತು ಶಾಂತಿ ಭಂಗ ಸಂಭವಿಸುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಮಾಜದಲ್ಲಿ ಸೌಹಾರ್ದತೆ ಉಳಿಸಿಕೊಳ್ಳುವ ದೃಷ್ಟಿಯಿಂದ ಮಾತ್ರ ಈ ಮನವಿ ಮಾಡಿರೋದಾಗಿ ಸಮಿತಿ ಸ್ಪಷ್ಟಪಡಿಸಿರುವ ಬಗ್ಗೆ ವರದಿಯಾಗಿದೆ.