ನವದೆಹಲಿ : ವಿನಯ್ ಕುಲಕರ್ಣಿ ಅವರು ಯಾವುದೇ ತಪ್ಪು ಮಾಡಿಲ್ಲವೆಂದು ನಾನು ಭಾವಿಸುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಸಂಬಂಧ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ.
ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಆದರೆ ಇದರಲ್ಲಿ ಒಳಸಂಚು ಇದೆ. ʻಬಿ ರಿಪೊರ್ಟ್ʼ ಫೈಲ್ ಮಾಡುವ ಹಂತದಲ್ಲಿ ಅವರನ್ನ ಮತ್ತೆ ಸಿಲುಕಿಸಲಾಯಿತು. ಇದರಲ್ಲಿ ಒಳಸಂಚು ಇದೆ. ನಾನು ಅವರ ಕುಟುಂಬದ ಹತ್ತಿರ ಮಾತನಾಡಿದ್ದೇನೆ. ಅವರು ತಪ್ಪು ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. ವಿನಯ್ ಕುಲಕರ್ಣಿ ತಪ್ಪು ಮಾಡಿಲ್ಲ ಅಂತ ನಾನು ಭಾವಿಸಿದ್ದೇನೆ. ಕಾನೂನಿನಲ್ಲಿ ಇನ್ನು ಅವಕಾಶ ಇದೆ. ಅವರ ನಂಬಿದ ದೇವರು ಇದ್ದಾನೆ, ಕಾರ್ಯಕರ್ತರು ಆತಂಕಗೊಳ್ಳುವುದು ಬೇಡ ಎಂದು ಹೇಳಿದ್ದಾರೆ.
ನಂಗೂ ಕಿರುಕುಳ ಕೊಟ್ಟಿದ್ರು. ಸುಪ್ರೀಂ ಕೋರ್ಟ್ ನಲ್ಲಿ ನನಗೆ ನ್ಯಾಯ ಸಿಕ್ಕಿತು. ರಾಜಕೀಯವಾಗಿ ಉತ್ತರ ಕರ್ನಾಟಕದಲ್ಲಿ ದೊಡ್ಡ ಶಕ್ತಿಯಾಗಿ ಕುಲಕರ್ಣಿ ಬೆಳೆಯುತ್ತಿದ್ದರು. ಬಿಜೆಪಿ ಅವರು ತಡೆಯಲು ಈ ಒಳ ಸಂಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹಿರಿಯ ಶಾಸಕರಿಂದ ಸಚಿವ ಸ್ಥಾನಕ್ಕೆ ಒತ್ತಾಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅದೆಲ್ಲ ಹಿರಿಯ ಶಾಸಕರಿಗೆ ಬಿಟ್ಟಿದ್ದು, ಇಲ್ಲಿ ಯಾವ ತಂಡವೂ ಇಲ್ಲ. ಸಿದ್ದರಾಮಯ್ಯ ಅವರ ತಂಡ ಅಥವಾ ನನ್ನ ತಂಡ ಅಂತ ಇದ್ರಲ್ಲಿ ಇಲ್ಲ. ದೆಹಲಿ ತನಕ ಯಾಕೆ ಬರಬೇಕಾಯ್ತು ಅನ್ನೋದಕ್ಕೆ ಸಿಎಂ ಉತ್ತರ ಕೊಡ್ತಾರೆ ಎಂದು ಜಾರಿಕೊಂಡಿದ್ದಾರೆ.














