ಮನೆ ರಾಜ್ಯ ಬೆಳ್ತಂಗಡಿಯ ದೇಗುಲಕ್ಕೆ ನುಗ್ಗಿ ದಾಂಧಲೆ – ದೈವದ ಪರಿಕರ ಚೆಲ್ಲಾಪಿಲ್ಲಿ..!

ಬೆಳ್ತಂಗಡಿಯ ದೇಗುಲಕ್ಕೆ ನುಗ್ಗಿ ದಾಂಧಲೆ – ದೈವದ ಪರಿಕರ ಚೆಲ್ಲಾಪಿಲ್ಲಿ..!

0

ಮಂಗಳೂರು : ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಬಳಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ತಡರಾತ್ರಿ ಅಮಾನವೀಯ ಘಟನೆಯೊಂದು ನಡೆದಿದೆ. ವ್ಯಕ್ತಿಯೋರ್ವ ದೇಗುಲಕ್ಕೆ ನುಗ್ಗಿ ದಾಂಧಲೆ ಮಾಡಿದ್ದಲ್ಲದೇ ದೇವರ ಮೂರ್ತಿ ಭಗ್ನಗೊಳಿಸಿ ವಿಕೃತಿ ಮೆರೆದಿರುವಂತಹ ಘಟನೆ ನಡೆದಿದೆ. ಈ ಸ್ಥಳೀಯ ನಿವಾಸಿ ಅಜೇಯ್ ಎಂಬಾತನಿಂದ ಕೃತ್ಯವೆಸಗಲಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು? – ಮೊದಲು ದೇಗುಲದ ಕೆರೆಗೆ ಹಾರಿದ ಅಜೇಯ್, ಬಳಿಕ ದೇವಸ್ಥಾನದ ಹೆಂಚುಗಳನ್ನು ತೆಗೆದು ಒಳನುಗ್ಗಿದ್ದಾನೆ. ದೇಗುಲದ ಒಳಗಿದ್ದ ಪೂಜಾ ಪರಿಕರಗಳು ಹಾಗೂ ದೈವದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಲ್ಲದೆ, ದೇವರ ಮೂರ್ತಿಯನ್ನು ಭಗ್ನಗೊಳಿಸಿ ವಿಕೃತಿ ಮೆರೆದಿದ್ದಾನೆ. ಇನ್ನು ಅಜೇಯ್ ಇಂಜಿನಿಯರಿಂಗ್ ಪದವೀಧರನಾಗಿದ್ದು, ಈ ಕೃತ್ಯದ ಹಿಂದೆ ಮಾನಸಿಕ ಅಸ್ವಸ್ಥತೆಯ ಶಂಕೆ ವ್ಯಕ್ತವಾಗಿದೆ. ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

ಕಾಲೇಜು ವಿದ್ಯಾರ್ಥಿಗೆ ಗುಂಪೊಂದರಿಂದ ಮಾರಣಾಂತಿಕ ಹಲ್ಲೆ – ಕಾಲೇಜು ವಿದ್ಯಾರ್ಥಿಗೆ ಐವರ ತಂಡದಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಸ್ ನಿಲ್ದಾಣದ ಬಳಿ ನಡೆದಿದೆ. ಆದಿಲ್ ಹುಸೈನ್(21) ಹಲ್ಲೆಗೊಳಗಾದ ಬಿಕಾಂ ವಿದ್ಯಾರ್ಥಿ. ತಲೆ ಹಾಗೂ ಮುಖದ ಭಾಗಕ್ಕೆ ತಂಡದಿಂದ ದಾಳಿ ಮಾಡಲಾಗಿದ್ದು, ಮೊಹಿಯುದ್ದೀನ್, ಮೋಹದ್ ಸೇರಿ ಐವರ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ.

ನಡೆದಿದ್ದೇನು? – ಪುತ್ತೂರು ಖಾಸಗಿ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ ಆದಿಲ್ ಹುಸೈನ್, ಬಸ್ ನಿಲ್ದಾಣದ ಬಳಿಯ ಅಂಗಡಿಯೊಂದರಲ್ಲಿ ಚಹಾ ಕುಡುಯುತ್ತ ನಿಂತಿದ್ದ ವೇಳೆ ಕಲ್ಲಿನಿಂದ ದಾಳಿ ಮಾಡಲಾಗಿದೆ. ಇತ್ತೀಚೆಗೆ ಕಾಲೇಜಿನಲ್ಲಿ ಮೊಹಿಯುದ್ದೀನ್ ತಂಡದಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲಾಗಿತ್ತು. ಹಳೇ ದ್ವೇಷ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ್ದಾರೆಂದು ಪುತ್ತೂರು ನಗರ ಪೊಲೀಸ್ ಠಾಣೆಗೆ ವಿದ್ಯಾರ್ಥಿ ಆದಿಲ್ ದೂರು ನೀಡಿದ್ದಾನೆ.