ಮನೆ ರಾಷ್ಟ್ರೀಯ ಇಂದು ಎಕ್ಸಿಟ್ ಪೋಲ್ – ಪಂಚ ರಾಜ್ಯಗಳ ಕಜ್ಜಾಯ ಯಾರಿಗೆ..?

ಇಂದು ಎಕ್ಸಿಟ್ ಪೋಲ್ – ಪಂಚ ರಾಜ್ಯಗಳ ಕಜ್ಜಾಯ ಯಾರಿಗೆ..?

0

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ ಇಂದು ಅಂತ್ಯವಾಗಲಿದ್ದು, ಸಂಜೆ ವೇಳೆಗೆ ಮತದಾನೋತ್ತರ ಸಮೀಕ್ಷೆಗಳು ಹೊರ ಬೀಳಲಿದೆ. ಎಲ್ಲಾ ಐದು ರಾಜ್ಯಗಳ ಅಧಿಕೃತ ಮತ ಎಣಿಕೆ ಪ್ರಕ್ರಿಯೆ ಮೇ 4ರಂದು ನಡೆಯಲಿದ್ದು, ಅಂದೇ ಯಾರು ಅಧಿಕಾರ ಹಿಡಿಯಲಿದ್ದಾರೆ ಎಂಬ ಅಂತಿಮ ಚಿತ್ರಣ ಸ್ಪಷ್ಟವಾಗಲಿದೆ. ಇಡೀ ದೇಶದ ಚಿತ್ತ ಈಗ ಮತದಾನೋತ್ತರ ಸಮೀಕ್ಷೆಗಳ ಕಡೆಗೆ ನೆಟ್ಟಿದೆ.

ಕಳೆದೊಂದು ತಿಂಗಳಿಂದ ಐದು ರಾಜ್ಯಗಳ ನಡೆಯುತ್ತಿದ್ದ ಚುನಾವಣೆ ಇಂದಿಗೆ ಅಂತ್ಯವಾಗಲಿದೆ. ಚುನಾವಣೆ ಐದು ರಾಜ್ಯಗಳಲ್ಲಿ ನಡೆದರೂ ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿತ್ತು. ಪಶ್ಚಿಮ ಬಂಗಾಳ, ತಮಿಳುನಾಡು ಅಸ್ಸಾಂ, ಕೇರಳದಂತಹ ರಾಜ್ಯಗಳ ಹೈವೋಲ್ಟೇಜ್ ಚುನಾವಣೆ ಎಲ್ಲರ ಆಸಕ್ತಿಗೆ ಕಾರಣವಾಗಿತ್ತು. ಇಂದು ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ಮೂಲಕ ಚುನಾವಣಾ ಉತ್ಸವಕ್ಕೆ ತೆರೆ ಬೀಳಲಿದ್ದು, ಇನ್ನೇನಿದ್ರು ಮೇ 4ರ ಫಲಿತಾಂಶಕ್ಕೆ ಕಾಯಬೇಕಿದೆ.

ಈ ಅಂತಿಮ ಫಲಿತಾಂಶಕ್ಕೂ ಮುನ್ನ ದಿಕ್ಸೂಚಿಯಂತೆ ಹೊರ ಬರಲಿರುವ ಚುನಾವಣೋತ್ತರ ಸಮೀಕ್ಷೆಗಳು ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇಂದು ಸಂಜೆ 7 ಗಂಟೆ ಬಳಿಕ ಎಕ್ಸಿಟ್ ಪೋಲ್ ಬಿಡುಗಡೆಯಾಗಲಿದ್ದು, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದಚೇರಿ ರಾಜ್ಯಗಳ ಜನರ ಮನಸ್ಸಿನಲ್ಲಿ ಯಾರಿದ್ದರು ಎನ್ನುವ ಬಗ್ಗೆ ಒಂದು ಸುಳಿವು ಸಿಗಲಿದೆ.

ಚುನಾವಣೋತ್ತರ ಸಮೀಕ್ಷೆ ಎನ್ನುವುದು ಮತದಾನ ಮುಗಿದ ನಂತರ ನಡೆಸುವ ಪ್ರಕ್ರಿಯೆಯಾಗಿದೆ. ಮತದಾರರು ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿ ಹೊರಬಂದ ತಕ್ಷಣ ಸಮೀಕ್ಷಕರು ಅವರನ್ನು ಭೇಟಿ ಮಾಡಿ ನೀವು ಯಾರಿಗೆ ಮತ ಹಾಕಿದ್ದೀರಿ? ಎಂದು ಕೇಳುತ್ತಾರೆ. ಇಲ್ಲಿ ವ್ಯಕ್ತಿ ಈಗಾಗಲೇ ಮತದಾನದ ಕ್ರಿಯೆಯನ್ನು ಮುಗಿಸಿರುವುದರಿಂದ, ಈ ಮಾಹಿತಿ ಹೆಚ್ಚು ನಿಖರವಾಗಿರುವ ಸಾಧ್ಯತೆ ಇರುತ್ತದೆ.

ಈ ಸಮೀಕ್ಷೆಗಳು ಮತದಾರರ ವಯಸ್ಸು, ಲಿಂಗ ಮತ್ತು ಜಾತಿಯಂತಹ ಜನಸಂಖ್ಯಾ ದತ್ತಾಂಶಗಳನ್ನು ಸಹ ಸಂಗ್ರಹಿಸುತ್ತವೆ. ಇದು ಯಾವ ವರ್ಗದ ಮತಗಳು ಯಾರ ಪರವಾಗಿ ಬಿದ್ದಿವೆ ಎಂದು ವಿಶ್ಲೇಷಿಸಲು ಸಹಾಯ ಮಾಡುತ್ತದೆ. ಹೀಗಾಗೀ ಈ ಸಮೀಕ್ಷೆಯೂ ಅಂತಿಮ ಫಲಿತಾಂಶಕ್ಕೆ ಹತ್ತಿರವಾಗಿರುತ್ತದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ, ಕೇರಳದಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್, ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ನೇರ ಪೈಪೊಟಿ ಇದ್ದು, ತಮಿಳುನಾಡಿನಲ್ಲಿ ಡಿಎಂಕೆ, ಎಐಡಿಎಂಕೆ ಮತ್ತು ಟಿವಿಕೆ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇಂದು ಯಾರಿಗೆ ಅದೃಷ್ಟ ಒಲಿಯಲಿದೆ ಎಂದು ಕಾದು ನೋಡಬೇಕಿದೆ.