ದರ್ಬೆ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಸವಣೂರು ಸಮೀಪದ ಕುದ್ಮಾರು ಗ್ರಾಮದ ಚಾಪಲ್ಲ ಎಂಬಲ್ಲಿ ಮಂಗಳವಾರ (ಮೇ 5) ರಂದು ಸಂಜೆ ನೀರಿನ ಟ್ಯಾಂಕರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತವೊಂದು ಸಂಭವಿಸಿದ್ದು ಈ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದ್ದೆ.
ಯುವಕರು ಬಂಟ್ವಾಳ ತಾಲೂಕಿನ ಮಿತ್ತೂರು ಬೊಳ್ಳರಮಜಲು ನಿವಾಸಿ ಪುರಂದರ ಮೂಲ್ಯ ಎಂಬವರ ಪುತ್ರ ಯಜ್ಞೇಶ್ (21 ವ.) ಮತ್ತು ಆರ್ಲಪದವು ನೋಣಯ್ಯ ಭರಣ್ಯ ಅವರ ಪುತ್ರ ಜಗನ್ (20 ವ.) ಮೃತಪಟ್ಟ ದುರ್ದೈವಿಗಳು ಎಂದು ತಿಳಿದುಬಂದಿದೆ. ಯಜ್ಞೇಶ್ ಮತ್ತು ಜಗನ್ ಕೆಲಸದ ನಿಮಿತ್ತ ಕಡಬ ತಾಲೂಕಿನ ಆಲಂಕಾರಿಗೆ ತೆರಳಿ ವಾಪಸಾಗುತ್ತಿದ್ದರು. ಸವಣೂರು ಕಡೆಯಿಂದ ಆಲಂಕಾರಿನಲ್ಲಿ ನಡೆಯುತ್ತಿರುವ ಕಾಮಗಾರಿಗೆ ನೀರು ಕೊಂಡೊಯ್ಯುತ್ತಿದ್ದ ಟ್ಯಾಂಕರ್, ಚಾಪಲ್ಲ ತಿರುವಿನಲ್ಲಿ ಬೈಕ್ಗೆ ಎದುರಾಗಿದೆ ಎನ್ನಲಾಗಿದೆ.
ಸ್ಕೂಟರ್ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಟ್ಯಾಂಕರ್ ಚಾಲಕ ಎಡಕ್ಕೆ ತಿರುಗಿಸಿದಾಗ ನಿಯಂತ್ರಣ ತಪ್ಪಿದ ಟ್ಯಾಂಕರ್ ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದಿದೆ. ದುರದೃಷ್ಟವಶಾತ್ ಈ ವೇಳೆ ಬೈಕ್ ಟ್ಯಾಂಕರ್ನ ಚಕ್ರದಡಿಯಲ್ಲಿ ಸಿಲುಕಿಕೊಂಡಿದೆ. ಘಟನೆಯ ತೀವ್ರತೆಗೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಹಿಂಬದಿ ಸವಾರನನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ ಎನ್ನಲಾಗುತ್ತಿದೆ.
ಮೃತರಲ್ಲಿ ಒಬ್ಬರಾದ ಜಗನ್ ಅವರು ಸಂಪ್ಯ ಕಾಲೇಜಿನ ಹೋಟೆಲ್ ಮ್ಯಾನೇಜ್ಮೆಂಟ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದರು. ಇತ್ತೀಚೆಗಷ್ಟೇ ಇಂಟರ್ನ್ಶಿಪ್ಗಾಗಿ ಮಾರಿಷಸ್ಗೆ ತೆರಳಿದ್ದ ಅವರು ಕೆಲವು ದಿನಗಳ ಹಿಂದೆಯಷ್ಟೇ ಸ್ವದೇಶಕ್ಕೆ ಮರಳಿದ್ದರು. ಪ್ರೌಢ ಶಿಕ್ಷಣದಿಂದಲೇ ಆತ್ಮೀಯ ಸ್ನೇಹಿತರಾಗಿದ್ದ ಇಬ್ಬರೂ ಒಂದೇ ಅಪಘಾತದಲ್ಲಿ ಸಾವನ್ನಪ್ಪಿರುವುದು ಗ್ರಾಮಸ್ಥರಲ್ಲಿ ಶೋಕ ಸಾಗರ ಮೂಡಿಸಿದೆ. ಘಟನಾ ಸ್ಥಳಕ್ಕೆ ಬೆಳ್ಳಾರೆ ಠಾಣಾ ಪೊಲೀಸ್ ಉಪನಿರೀಕ್ಷಕ ಈರಯ್ಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ ಎನ್ನಲಾಗಿದೆ.















