ಮನೆ ರಾಜ್ಯ ಸಾರಿಗೆ ಸಂಘಟನೆ ನೌಕರರಲ್ಲೇ ಒಡಕು; ಮುಷ್ಕರದಿಂದ ಹಿಂದೆ ಸರಿದ KSRTC ನೌಕರರ ಸಂಘ..!

ಸಾರಿಗೆ ಸಂಘಟನೆ ನೌಕರರಲ್ಲೇ ಒಡಕು; ಮುಷ್ಕರದಿಂದ ಹಿಂದೆ ಸರಿದ KSRTC ನೌಕರರ ಸಂಘ..!

0

ಬೆಂಗಳೂರು : ಸಾರಿಗೆ ನೌಕರರು ಕರೆ ಕೊಟ್ಟ ಮುಷ್ಕರದ ಡೆಡ್‌ಲೈನ್ ಇಂದಿಗೆ ಅಂತ್ಯವಾಗುತ್ತಿದೆ. ವಿವಿಧ ಬೇಡಿಕರಗಳಿಗೆ ಆಗ್ರಹಿಸಿ ಸಾರಿಗೆ ನೌಕರರು ಮೇ 20 ರಿಂದ ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಸರ್ಕಾರಕ್ಕೆ ಸಂಜೆಯೊಳಗೆ ಡೆಡ್‌ಲೈನ್‌ ನೀಡಲಾಗಿದೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಅಂದುಕೊಂಡಿರುವಾಗಲೇ ಮುಷ್ಕರಕ್ಕೆ ಕರೆಕೊಟ್ಟ ಜಂಟಿ ಕ್ರಿಯಾ ಸಮಿತಿಗೆ ಶಾಕ್‌ ಎದುರಾಗಿದೆ.

ಮುಷ್ಕರದಿಂದ ಹಿಂದೆ ಸರಿಯಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ನಿರ್ಧರಿಸಿದೆ. ಈ ಬಗ್ಗೆ ಅಧ್ಯಕ್ಷ ಕೆ.ಆರ್‌ ಜಗದೀಶ್ ಅಧಿಕೃತ ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ. ನಿನ್ನೆ ಸಂಧಾನ ಸಭೆಯಲ್ಲೂ ಭಾಗಿಯಾಗಿದ್ದ ಕೆಎಸ್‌ಆರ್‌ಟಿಸಿ ನೌಕರರ ಸಂಘ ಇಂದು ಏಕಾಏಕಿ ಮುಷ್ಕರದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದೆ. ಅಲ್ಲದೇ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರನ್ನ ಭೇಟಿಯಾಗಿ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದೆ. ಜೊತೆಗೆ ತನ್ನ ಸಂಘಟನೆ ನೌಕರರಿಗೆ ಮುಷ್ಕರದಲ್ಲಿ ಭಾಗಿಯಾಗದಂತೆ ಮನವಿ ಮಾಡಿದೆ.

ನಮ್ಮ ಸಂಘವು ಸುಮಾರು ನಾಲ್ಕು ವರ್ಷಗಳಿಂದ ಸಾರಿಗೆ ನೌಕರರ ಹಿತಾಸಕ್ತಿಗಾಗಿ ಹಲವು ಹೋರಾಟ ಮಾಡಿಕೊಂಡು ಬಂದಿದೆ. 2020-24 ವೇತನ ಒಪ್ಪಂದದ ಸಂಬಂಧ ಸದರಿ ಜಂಟಿ ಕ್ರಿಯಾ ಸಮಿತಿಗೆ ಸಂಪೂರ್ಣ ಬೆಂಬಲ ನೀಡಿ, ಜಂಟಿ ಸಮಿತಿಯ ಒಂದು ಕ್ರಿಯಾಶೀಲ ಭಾಗವಾಗಿ ಕಾರ್ಮಿಕರ ಹಿತಕ್ಕಾಗಿ ಕೆಲಸ ಮಾಡುತ್ತಿದೆ. ಮೇ 29 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ನಂತರ ಜಂಟಿ ಕ್ರಿಯಾ ಸಮಿತಿಯ ಒಳಗೆ ಭಿನ್ನಾಭಿಪ್ರಾಯಗಳು/ ಅಸಮಾಧಾನಗಳು ಭುಗಿಲೆದ್ದಿರುವುದು ಎಲ್ಲರಿಗೂ ತಿಳಿದ ವಿಷಯವಾಗಿರುತ್ತದೆ.

ಯಾವ ಉದ್ದೇಶಕ್ಕಾಗಿ ಜಂಟಿ ಕ್ರಿಯಾ ಸಮಿತಿಗೆ ನಾವು ಬೆಂಬಲ ನೀಡಿದ್ದೇವೋ ಆ ಉದ್ದೇಶಗಳು ಈಡೇರುತ್ತಿಲ್ಲ, ನೌಕರರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲವೆನ್ನುವುದು ನಮಗೆ ತಿಳಿದಿದೆ. ಮುಂದುವರೆದು, ಈಗಾಗಲೇ ಜಂಟಿ ಕ್ರಿಯಾ ಸಮಿತಿಯು ಕರೆ ನೀಡಿರುವ ಮುಷ್ಕರ ಸಂಬಂಧ ಮೇ 18 ರಂದು ಕಾರ್ಮಿಕ ಆಯುಕ್ತರು ಸಂಧಾನ ಸಭೆ ನಡೆಸಿ, ಜಂಟಿ ಕ್ರಿಯಾ ಸಮಿತಿಯ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು, ಆದಷ್ಟು ಬೇಗ ಬಗೆಹರಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ ಕಾಲಾವಕಾಶ ಕೋರಿ ಮುಂದಿನ ಸಭೆಯನ್ನು ಮೇ 25 ಕ್ಕೆ ನಿಗದಿಪಡಿಸಿದ್ದಾರೆ.

ಅಲ್ಲದೇ ಸಂಧಾನ ಸಭೆಯ ಬಳಿಕ ಸರ್ಕಾರದ ಕಾರ್ಯಕ್ರಮಗಳು ಮುಗಿದ ನಂತರ ಮುಖ್ಯಮಂತ್ರಿಗಳು, ಸಾರಿಗೆ ಸಚಿವರಿಗೆ ನಾನೇ ಮನವೊಲಿಸಿ, ತಮ್ಮ ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸಲು ಅವಕಾಶ ಕಲ್ಪಿಸುವುದಾಗಿ ಗಟ್ಟಿ ಭರವಸೆ ನೀಡಿದ್ದರು. ಹಾಗಾಗಿ ವ್ಯವಸ್ಥಾಪಕ ನಿರ್ದೇಶಕರ ಮೇಲೆ ನಂಬಿಕೆ ಮತ್ತು ಭರವಸೆಯಿಟ್ಟು, ನಮ್ಮ ಸಂಘದ ಪದಾಧಿಕಾರಿಗಳೆಲ್ಲರೂ ಜಂಟಿ ಕ್ರಿಯಾ ಸಮಿತಿಗೆ ನೀಡಿರುವ ಬೆಂಬಲವನ್ನು ತಕ್ಷಣದಿಂದಲೇ ಹಿಂಪಡೆಯಲು ನಿರ್ಧರಿಸಿದ್ದಾರೆ ಎಂದು ಅಧ್ಯಕ್ಷ ಹೆಚ್‌.ಆರ್‌ ಜಗದೀಶ್‌ ತಿಳಿಸಿದ್ದಾರೆ.