ಮೈಸೂರು : ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಕುಖ್ಯಾತ ರೌಡಿ ಹಬೀದ್ ಪಾಷಾ ಇದೀಗ ಸುಫಾರಿ ಹಂತಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ. ಆರ್ಎಸ್ಎಸ್ ಕಾರ್ಯಕರ್ತ ರಾಜು ಕೊಲೆ ಪ್ರಕರಣ ಹಾಗೂ ಶಾಸಕ ತನ್ವೀರ್ ಸೇಠ್ ಕೊಲೆಗೆ ಯತ್ನ ಪ್ರಕರಣದಲ್ಲಿ ಹಬೀದ್ ಪಾಷಾ ಪ್ರಮುಖ ಆರೋಪಿಯಾಗಿದ್ದಾನೆ. ಅಲ್ಲದೆ, ಕೆಎಫ್ಡಿ ಮತ್ತು ಪಿಎಫ್ಐ ಸಂಘಟನೆಗಳಲ್ಲೂ ಸಕ್ರಿಯನಾಗಿದ್ದ ಎನ್ನಲಾಗಿದೆ.
ಪಿರಿಯಾಪಟ್ಟಣದಲ್ಲಿ ಯುವಕನೊಬ್ಬನ ಹತ್ಯೆಗೆ ಹಬೀದ್ ಪಾಷಾ 30 ಲಕ್ಷ ರೂಪಾಯಿ ಸುಫಾರಿ ಪಡೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆಸ್ತಿ ಗಲಾಟೆ ಹಿನ್ನೆಲೆ ಪಿರಿಯಾಪಟ್ಟಣದ ಸೌಧೆ ವ್ಯಾಪಾರಿ ರಾಜು ಎಂಬುವರಿಂದ ಸುಪಾರಿ ಪಡೆದು, ಅವರ ಸೋದರ ಅಳಿಯ ಪ್ರವೀಣ್ ಕುಮಾರ್ ಹತ್ಯೆಗೆ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣವನ್ನು ಭೇದಿಸಿರುವ ಮೈಸೂರು ಜಿಲ್ಲಾ ಪೊಲೀಸರು, ಹಬೀದ್ ಪಾಷಾ ಗ್ಯಾಂಗ್ ಅನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಹಬೀದ್ ಪಾಷಾ ವಿರುದ್ಧ ಈಗಾಗಲೇ 12 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.


















