ಮನೆ ರಾಜ್ಯ ಅಭಿವೃದ್ಧಿ ಹೆಸರಿನಲ್ಲಿ ಬಿಜೆಪಿ ಸರ್ಕಾರದಿಂದ ಜನರ ತೆರಿಗೆ ಹಣ ಲೂಟಿ: ಹೆಚ್.ಡಿ.ಕುಮಾರಸ್ವಾಮಿ

ಅಭಿವೃದ್ಧಿ ಹೆಸರಿನಲ್ಲಿ ಬಿಜೆಪಿ ಸರ್ಕಾರದಿಂದ ಜನರ ತೆರಿಗೆ ಹಣ ಲೂಟಿ: ಹೆಚ್.ಡಿ.ಕುಮಾರಸ್ವಾಮಿ

0

ಬೇಂಗಳೂರು(Bengaluru): ಅಭಿವೃದ್ಧಿ ಹೆಸರಿನಲ್ಲಿ ಬಿಜೆಪಿ ಸರ್ಕಾರ ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದೆ. ನಾನು ಯಾವುದೇ ಲೂಟಿ ಹೊಡೆಯುವ ಸಂಸ್ಥೆಗಳನ್ನು ನಡೆಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಭಾನುವಾರ ದಾಸರಹಳ್ಳಿಯ ಅಬ್ಬಿಗೆರೆ ಹಾಗೂ ಹೊಸಕೆರೆಹಳ್ಳಿಯಲ್ಲಿ ನಡೆದ ಜನತಾ ಮಿತ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಡವರನ್ನು ಹಿಂಸೆ ಮಾಡುವ ಕೆಲಸ ನಡೆದರೆ ಶ್ರೀಲಂಕಾದ ಪರಿಸ್ಥಿತಿ ಇಲ್ಲಿಯೂ ನಡೆಯುತ್ತದೆ. ಇನ್ನೊಂದು ಶ್ರೀಲಂಕಾ ಸೃಷ್ಟಿ ಮಾಡುವ ಪಕ್ಷಗಳು ನಿಮಗೆ ಬೇಕಾ ಎಂದು ಮಾಜಿ ಮುಖ್ಯಮಂತ್ರಿಗಳು ಜನರನ್ನು ಪ್ರಶ್ನೆ ಮಾಡಿದರು.

ಮೋದಿ ಅವರನ್ನು ನಂಬಬೇಡಿ:

ಪ್ರಧಾನಿ ನರೇಂದ್ರ ಮೋದಿ ಅವರನ್ನು ನಂಬಬೇಡಿ. ನರೇಂದ್ರ ಮೋದಿ ಮಾತಿಗೆ ನೀವು ಮರುಳಾಗಬೇಡಿ. ಮೋದಿ ಹಾಗೂ ಬಿಜೆಪಿ ಪಕ್ಷ ಇರುವುದೇ ಶ್ರೀಮಂತರಿಗಾಗಿ, ಚುನಾವಣೆ ಸಂದರ್ಭದಲ್ಲಿ ಹಣ ಕೊಟ್ಟು ಮತ ಪಡೆಯಲು ಬರುತ್ತಾರೆ. ನಿಮ್ಮ ದುಡ್ಡನ್ನು ಲೂಟಿ ಮಾಡಿ ಮಜಾ ಮಾಡುತ್ತಿದ್ದಾರೆ. ಅವರು ಶ್ರೀಮಂತರ ಪರವಾಗಿದ್ದಾರೆ. ಬಡವರ ಪರ ಇಲ್ಲ ಎಂದು ಟೀಕಿಸಿದರು.

ಪಿಎಸ್‌ಐ ಹುದ್ದೆ ಪಡೆಯಲು ಲಕ್ಷಾಂತರ ರೂ. ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ಜನರ ಹಣ ರಾಜ್ಯದಲ್ಲಿ ಲೂಟಿಯಾಗುತ್ತಿದೆ ಎಂದು ಅವರು ಹೇಳಿದರು.

ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ:

ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಬಿಜೆಪಿ ಸರಕಾರವೇ ಇಂಥ ತಪ್ಪು ಮಾಡುತ್ತಿದೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ನೀಡಲಾಗಿದ್ದ 750 ಕೋಟಿ ಹಣವನ್ನು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಿಲ್ಲಿಸಿದೆ ಎಂದು ಅವರು ಆರೋಪಿಸಿದರು.

ನಿಮಗೆ ದ್ರೋಹ ಮಾಡುವ ಪಕ್ಷಗಳ ಮೊದಲ ಸ್ಥಾನದಲ್ಲಿ ಬಿಜೆಪಿ ಇದೆ. ವಿದ್ಯುತ್, ಅನಿಲ ಬೆಲೆ ಏರಿಕೆ ಮಾಡಲಾಗುತ್ತಿದೆ. ಇದು ಜನಸಾಮಾನ್ಯರಿಗೆ ಹೊರೆ. ಮಹಾನಗರದಲ್ಲಿ ಮಾಡಬೇಕಾದ ಕೆಲಸಗಳ ಮಾಹಿತಿ ಪಡೆಯಲು ಈ ಜನತಾಮಿತ್ರ ವಾಹನ ನಿಮ್ಮ ಮನೆ ಮುಂದೆ ಕಳಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಇಂಗ್ಲಿಷ್ ಮೀಡಿಯಂ ವಿದ್ಯಾಭ್ಯಾಸಕ್ಕೆ ಹಣ ನೀಡದೆ ಮಕ್ಕಳು ಉಚಿತವಾಗಿ ಕಲಿಯುವ ವ್ಯವಸ್ಥೆ ಮಾಡುತ್ತೇವೆ. ಆರೋಗ್ಯಮಿತ್ರ ಅಡಿಯಲ್ಲಿ ಉಚಿತ ಆರೋಗ್ಯ ಒದಗಿಸುತ್ತೇವೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ಬದುಕಲು ಬೇಕಾಗಿರುವ ಎಲ್ಲ ಅಗತ್ಯ ಸೌಲಭ್ಯಗಳನ್ನೂ ಒದಗಿಸುವುದಾಗಿ ಕುಮಾರಸ್ವಾಮಿ ಅವರು ಭರವಸೆ ನೀಡಿದರು.

ಬಡ ಕುಟುಂಬಗಳಿಗೆ ಉಚಿತ ವಿದ್ಯುತ್:

ಬಡ ಕುಟುಂಬಗಳಿಗೆ ಉಚಿತವಾಗಿ ವಿದ್ಯುಚ್ಛಕ್ತಿ ಕೊಡಲು ಚಿಂತನೆ ಮಾಡಲಾಗಿದೆ. ಲೂಟಿ ಆಗುತ್ತಿರುವ ನಿಮ್ಮ ಹಣ ನಿಮಗೇ ತಲುಪಬೇಕು. ನಿಮ್ಮ ಕಷ್ಟಗಳು ಏನೇ ಇದ್ದರೂ ಜನತಾ ಮಿತ್ರ ವಾಹನದ ಬಾಕ್ಸ್‌ನಲ್ಲಿ ಹಾಕಿ, ಯಾವ ರೀತಿಯ ಯೋಜನೆ ಬೇಕು ಅದನ್ನು ಮಾಡುತ್ತೇವೆ ಎಂದು ಅವರು ಹೇಳಿದರು.

ಜೆಡಿಎಸ್ ಶಕ್ತಿನೆಂದು ತೋರಿಸುತ್ತೇನೆ:

ಬೆಂಗಳೂರು ನಗರದಲ್ಲಿ ಜೆಡಿಎಸ್‌ ನೆಲೆ ಇಲ್ಲ ಅನ್ನುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಭವಿಷ್ಯವಿಲ್ಲ ಅಂತಾರೆ. ಇಂತಹವರಿಗೆ ಇಟ್ಟಮಡುವಿನ ಜನತೆ ಉತ್ತರ ಕೊಟ್ಟಿದ್ದಾರೆ. ನಮ್ಮ ಪಕ್ಷದ ಶಕ್ತಿ ಏನು ಎಂಬುದನ್ನು ತೋರಿಸುತ್ತೇನೆ ಎಂದರು.

ಕೆಂಪೇಗೌಡರು ಕಟ್ಟ ಕೆರೆಗಳಿಗೆ ಕೊಳಚೆ ನೀರು ತುಂಬಿಸುತ್ತಿದ್ದಾರೆ. ಅದೇ ವಿಷಪೂರಿತ ನೀರನ್ನು ನೀವು ಈಗಲೂ ಕುಡಿಯಬೇಕಿತ್ತು. ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರ ಕಾವೇರಿ ನೀರು ತರಲು ಒಪ್ಪಿಗೆ ಕೊಡಲಿಲ್ಲ. ದೇವೇಗೌಡರು ಪ್ರಧಾನಿ ಆದಾಗ ನಗರಕ್ಕೆ 9 ಟಿಎಂಸಿ ನೀರು ಕೊಟ್ಟರು. ಬೆಂಗಳೂರಿನ ರಿಂಗ್‌ ರೋಡ್‌ಗೆ 95 ಎಕರೆ ಭೂಮಿ ಕೊಟ್ಟವರು ದೇವೇಗೌಡರು. ನಾನು ಬಿಬಿಎಂಪಿ ರಚನೆ ಮಾಡಿದೆ. 198 ವಾರ್ಡ್‌ ರಚನೆ ಮಾಡಿದೆ. ಮೆಟ್ರೋ ಯೋಜನೆಯ ಚಾಲನೆ ನೀಡಿದೆ ಎಂದು ಅವರು ಮಾಹಿತಿ ನೀಡಿದರು.