ನಾಗ್ಪುರ (ಜೂ.16): ಭಾರತೀಯ ವಾಯುಪಡೆಯ (IAF) ಅಧಿಕಾರಿಯೊಬ್ಬರ ಪತ್ನಿಯನ್ನು ವಂಚಿಸಿ ಅ*ತ್ಯಾಚಾ*ರ ಎಸಗಿ, ಬ್ಲಾಕ್ಮೇಲ್ ಮಾಡುವ ಮೂಲಕ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದ ಮುಖ್ಯ ಆರೋಪಿ ಆಯಾಜ್ ತಾಜ್ ಮದಾರೆ ಎಂಬಾತ ಸಂತ್ರಸ್ತೆಯ ಶಾಲಾ ದಿನಗಳ ಸ್ನೇಹಿತನಾಗಿದ್ದ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮತಾಂತರದ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಆರೋಪಿ ಆಯಾಜ್ ಸಂತ್ರಸ್ತೆಯ ಕೈಹಿಡಿದು ಧಾರ್ಮಿಕ ಶ್ಲೋಕಗಳನ್ನು ಪಠಿಸುತ್ತಿರುವುದು ಕಂಡುಬಂದಿದೆ. ಆ ವಿಡಿಯೋದಲ್ಲಿ ಮಹಿಳೆಯು ಅಳುತ್ತಾ, “ನನ್ನ ಕೈ ಬಿಡು… ನನ್ನನ್ನು ಬಿಟ್ಟುಬಿಡು!” ಎಂದು ಪ್ರತಿಭಟಿಸುತ್ತಿರುವುದು ಮತ್ತು ಆರೋಪಿ ಆಕೆಯ ಕೈಗಳನ್ನು ಬಲವಾಗಿ ಹಿಡಿದುಕೊಂಡಿರುವುದು ದಾಖಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, 24 ವರ್ಷದ ಸಂತ್ರಸ್ತೆಯ ಪತಿ ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿದ್ದು, ಸದ್ಯ ಬೇರೆ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಮಹಿಳೆಯು ನಾಗ್ಪುರದಲ್ಲಿ ಪ್ರಾಪರ್ಟಿ ಡೀಲಿಂಗ್ (ರಿಯಲ್ ಎಸ್ಟೇಟ್) ಉದ್ಯಮ ನಡೆಸುತ್ತಿದ್ದರು. 2025ರ ಫೆಬ್ರವರಿಯಲ್ಲಿ ಆರೋಪಿ ಆಯಾಜ್ ಜಮೀನು (ಪ್ಲಾಟ್) ಖರೀದಿಸುವ ನೆಪದಲ್ಲಿ ಈಕೆಯನ್ನು ಸಂಪರ್ಕಿಸಿದ್ದ. ಪ್ರಥಮ ಮಾಹಿತಿ ವರದಿ (FIR) ಪ್ರಕಾರ, ಆರೋಪಿಯು ಮಹಿಳೆಯನ್ನು ವರ್ಧಾ ರಸ್ತೆಯಲ್ಲಿರುವ ಹೋಟೆಲ್ವೊಂದಕ್ಕೆ ಪುಸಲಾಯಿಸಿ ಕರೆದೊಯ್ದಿದ್ದ. ಅಲ್ಲಿ ಆಕೆಗೆ ನೀಡಿದ ಜ್ಯೂಸ್ನಲ್ಲಿ ಪ್ರಜ್ಞೆ ತಪ್ಪಿಸುವ ಮಾದಕ ದ್ರವ್ಯ ಬೆರೆಸಲಾಗಿತ್ತು. ಮಹಿಳೆ ಪ್ರಜ್ಞೆ ಕಳೆದುಕೊಂಡಾಗ ಆಕೆಯ ಮೇಲೆ ಅ*ತ್ಯಾಚಾ*ರ ಎಸಗಿ, ಆಕ್ಷೇಪಾರ್ಹ ಫೋಟೋ ಮತ್ತು ವೀಡಿಯೋಗಳನ್ನು ತೆಗೆದುಕೊಳ್ಳಲಾಗಿತ್ತು. ಅದಾದ ನಂತರ ಆಕ್ಷೇಪಾರ್ಹ ವೀಡಿಯೋಗಳನ್ನು ತೋರಿಸಿ ಮಹಿಳೆಯನ್ನು ನಿರಂತರವಾಗಿ ಬ್ಲಾಕ್ಮೇಲ್ ಮಾಡಲು ಆರಂಭಿಸಿದ ಆರೋಪಿ, ಆಕೆಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಸುಮಾರು 4 ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಿದ್ದ. ಇದರೊಂದಿಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಡ ಹೇರಿ, ಧಾರ್ಮಿಕ ಆಚರಣೆಗಳ ನೆಪದಲ್ಲಿ ಮಾಟಮಂತ್ರ ಹಾಗೂ ವಿವಿಧ ವಿಧಿವಿಧಾನಗಳನ್ನು ಬಲವಂತವಾಗಿ ಮಾಡಿಸಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಸಂತ್ರಸ್ತೆಯ ದೂರಿನ ಪ್ರಕಾರ, ಮೇ 31 ರಂದು ಆಯಾಜ್ ಆಕೆಯನ್ನು ನಾಗ್ಪುರ ಸಮೀಪದ ಕಲ್ಮೇಶ್ವರ್ಗೆ ಬಲವಂತವಾಗಿ ಕರೆದೊಯ್ದಿದ್ದ. ಅಲ್ಲಿ ಆಕೆಗೆ ಅಮೀನ್ ಶೇಖ್ ಮತ್ತು ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ತಮಿಯಾ ಗ್ರಾಮದ ನಿವಾಸಿಯಾದ ಹಜರತ್ ಮೌಲಾನಾ ಎಂಬುವವರ ಪರಿಚಯ ಮಾಡಿಸಲಾಗಿತ್ತು.

ನಂತರ ಅಲ್ಲಿಂದ ಈ ಮೂವರು ಸೇರಿ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಮೌಲಾನಾ ಆಕೆಯ ಮೇಲೆ ಕೆಲವು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿ, ಬಲವಂತವಾಗಿ “ಖುಬೂಲ್ ಹೈ” ಎಂದು ಹೇಳಿಸಿದ್ದಾರೆ. ಆ ನಂತರ ನಿನ್ನ ಮತಾಂತರ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆಯಾಜ್ ಮದಾರೆ ಜೊತೆ ನಿನಗೆ ಮದುವೆಯಾಗಿದೆ ಎಂದು ಹೆದರಿಸಿದ್ದಾರೆ. ಈ ಘಟನೆಯ ನಂತರವೂ ಮಹಿಳೆಯ ಮೇಲೆ ಮತ್ತೆ ಅ*ತ್ಯಾಚಾ*ರ ಎಸಗಲಾಗಿತ್ತು. ಜೂನ್ 12 ರಂದು ಆಕೆಯ ಪತಿ ಕರ್ತವ್ಯ ಮುಗಿಸಿ ಮನೆಗೆ ಮರಳಿದಾಗ, ಮಹಿಳೆ ತನಗೆ ಎದುರಾದ ಇಡೀ ನರಕಯಾತನೆಯನ್ನು ಅವರ ಮುಂದೆ ಬಿಚ್ಚಿಟ್ಟಿದ್ದಾರೆ. ತಕ್ಷಣವೇ ದಂಪತಿ ನಾಗ್ಪುರದ ಸೋನೆಗಾಂವ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಆರೋಪಿಗಳ ವಿರುದ್ಧ ಅ*ತ್ಯಾಚಾ*ರ, ನಿರಂತರ ಲೈಂಗಿಕ ದೌರ್ಜನ್ಯ, ಬ್ಲಾಕ್ಮೇಲ್, ಸುಲಿಗೆ, ಬಲವಂತದ ಧಾರ್ಮಿಕ ಮತಾಂತರ ಮತ್ತು ಮಹಾರಾಷ್ಟ್ರ ಮಾಟಮಂತ್ರ ಹಾಗೂ ಮೂಢನಂಬಿಕೆ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಖ್ಯ ಆರೋಪಿಯ ಎಲೆಕ್ಟ್ರಾನಿಕ್ ಸಾಧನ ಹಾಗೂ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ವಿಧಿವಿಜ್ಞಾನ (Forensic) ತನಿಖೆ ಆರಂಭಿಸಿದ್ದಾರೆ ಎಂಬುದ್ದಾಗಿದೆ.















