ಮನೆ ಕಾನೂನು ಅನ್ಯ ಧರ್ಮದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ ಷರತ್ತು ಬದ್ಧ ಜಾಮೀನು

ಅನ್ಯ ಧರ್ಮದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ ಷರತ್ತು ಬದ್ಧ ಜಾಮೀನು

0

ಬೆಂಗಳೂರು(Bengaluru): ಅನ್ಯ ಧರ್ಮೀಯ ಅಪ್ರಾಪ್ತ ಬಾಲಕಿಯನ್ನು ಆಕೆಯ ಮನೆಯವರ ಒಪ್ಪಿಗೆಯಿಲ್ಲದೇ ಬಲವಂತವಾಗಿ ವಿವಾಹವಾಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ  ಬಂಧನಕ್ಕೊಳಗಾದ ವ್ಯಕ್ತಿಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ಆರೋಪಿ ಸೈಯದ್‌ ಶಬಾಜ್‌ (23) ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾ.ಎಚ್‌ಪಿ ಸಂದೇಶ್‌ ಅವರಿದ್ದ ಏಕಸದಸ್ಯ ಪೀಠ, ಆರೋಪಿ 2 ಲಕ್ಷ ರೂ. ವೈಯಕ್ತಿಕ ಬಾಂಡ್‌ ಹಾಗೂ ಅಷ್ಟೇ ಮೊತ್ತದ ಇಬ್ಬರ ಶ್ಯೂರಿಟಿ ಒದಗಿಸಬೇಕು. ಸಾಕ್ಷ್ಯಾಧಾರ ನಾಶಪಡಿಸಬಾರದು, ವಿಚಾರಣೆಗೆ ತಪ್ಪದೇ ಹಾಜರಾಗಬೇಕು, ವಿಚಾರಣಾ ನ್ಯಾಯಾಲಯದ ಅನುಮತಿ ಇಲ್ಲದೆ ವ್ಯಾಪ್ತಿ ಬಿಟ್ಟು ತೆರಳಬಾರದು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದೆ.

ಆರೋಪಿಯೊಂದಿಗೆ ತಾನೇ ತೆರಳಿರುವುದಾಗಿ ಸಂತ್ರಸ್ತೆಯೇ ಮ್ಯಾಜಿಸ್ಪ್ರೇಟ್‌ ಮುಂದೆ ಹೇಳಿಕೆ ನೀಡಿದ್ದಾಳೆ. ಆತನೊಂದಿಗೆ ತೆರಳಿ, ಮದುವೆಯಾದ ಬಳಿಕ ಇಬ್ಬರ ನಡುವೆ ಲೈಂಗಿಕ ಕ್ರಿಯೆ ನಡೆದಿದೆ ಎಂದು ತಿಳಿಸಿದ್ದಾಳೆ. ಮದುವೆಗೂ ಮೊದಲೇ ಆರೋಪಿ ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಯಾವುದೇ ಆರೋಪಗಳಿಲ್ಲ. ವೈದ್ಯರ ಮುಂದೆ ನೀಡಿರುವ ಹೇಳಿಕೆಯಲ್ಲೂ ಮದುವೆಯ ನಂತರವೇ ಲೈಂಗಿಕ ಸಂಪರ್ಕ ಬೆಳೆಸಿರುವುದಾಗಿ ಹೇಳಿದ್ದಾಳೆ. ಆದ್ದರಿಂದ, ಈ ವಿಚಾರ ಪರಿಗಣಿಸಿ ಆರೋಪಿಗೆ ಷರತ್ತು ಬದ್ಧ ಜಾಮೀನು ನೀಡಲಾಗುತ್ತಿದೆ ಎಂದು ನ್ಯಾಯಪೀಠ ಆದೇಶಿಸಿದೆ.

ಆರೋಪಿ ಪರ ವಕೀಲರು, ಅಂತರ ಧರ್ಮೀಯರಾಗಿರುವ ಅರ್ಜಿದಾರ ಹಾಗೂ ಸಂತ್ರಸ್ತೆ ಪರಸ್ಪರ ಪ್ರೀತಿಸುತ್ತಿದ್ದರು. ಧರ್ಮ ಬೇರೆಯಾಗಿರುವುದರಿಂದ ಮದುವೆಗೆ ಪಾಲಕರು ಒಪ್ಪಿಗೆ ನೀಡುವುದಿಲ್ಲವೆಂದು 2021ರ ಅ.15ರಂದು ಇಬ್ಬರೂ ಮನೆ ಬಿಟ್ಟು ತೆರಳಿದ್ದರು. ಅ.17ರಂದು ರಾಮನಗರಕ್ಕೆ ತೆರಳಿ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಾರೆ. ಆ ಬಳಿಕ ಪರಸ್ಪರ ಒಪ್ಪಿಗೆಯಿಂದ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಇಬ್ಬರೂ ಮದುವೆಯಾಗಿರುವುದರಿಂದ ಇದು ಒತ್ತಾಯಪೂರ್ವಕ ಲೈಂಗಿಕ ಕ್ರಿಯೆ ಅಲ್ಲ. ಆದ್ದರಿಂದ, ಆರೋಪಿಗೆ ಜಾಮೀನು ನೀಡಬೇಕು ಎಂದು ಕೋರಿದ್ದರು.

ಆದರೆ ಸರಕಾರಿ ವಕೀಲರು, ಸಂತ್ರಸ್ತೆ ಅಪ್ರಾಪ್ತಳಾಗಿದ್ದು, ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವುದರಿಂದ ಅರ್ಜಿದಾರನ ವಿರುದ್ಧದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ. ಆದ್ದರಿಂದ, ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದರು.

ಸಂತ್ರಸ್ತೆಯ ತಾಯಿ ದಾಖಲಿಸಿದ್ದ ದೂರು ಆಧರಿಸಿ ಕೋಣನಕುಂಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಾಲಕಿಗೆ 15 ವರ್ಷವಾಗಿದ್ದು, ಆಕೆ ಅಪ್ರಾಪ್ತೆ ಎಂಬ ವಿಚಾರ ತಿಳಿದಿದ್ದರೂ ಆಕೆಯನ್ನು ಕರೆದೊಯ್ದು ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಅಪ್ರಾಪ್ತೆಯ ಅಪಹರಣ, ಅತ್ಯಾಚಾರ ಆರೋಪ ಹಾಗೂ ಪೋಕ್ಸೋ ಕಾಯಿದೆಯ ಸೆಕ್ಷನ್‌ 5(ಎಲ್‌), 6 ಮತ್ತು ಬಾಲ್ಯವಿವಾಹ ತಡೆ ಕಾಯಿದೆಯ ಸೆಕ್ಷನ್‌ 4ರ ಅಡಿ ಪ್ರಕರಣ ದಾಖಲಿಸಿದ್ದರು. ಆರೋಪಿ ಜಾಮೀನು ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದನು.