ಮನೆ ಭಾವನಾತ್ಮಕ ಲೇಖನ ಭಾವನಾತ್ಮಕ ಸ್ವಾತಂತ್ರ್ಯದಿಂದ ಸಂತೃಪ್ತಿ

ಭಾವನಾತ್ಮಕ ಸ್ವಾತಂತ್ರ್ಯದಿಂದ ಸಂತೃಪ್ತಿ

0

ಮನುಷ್ಯಜನ್ಮದಲ್ಲಿ ಸುಖೀ ಜೀವನ ನಮ್ಮದಾಗಿಸಿಕೊಳ್ಳಬೇಕು ಎಂದುಕೊಂಡು ಸಂತೋಷ, ಭದ್ರತೆ, ಬಯಕೆಗಳ ಈಡೇರಿಕೆಗೆ ಒಂದು ವಸ್ತು ಅಥವಾ ವ್ಯಕ್ತಿಯ ಮೇಲೆ ತುಂಬಾ ಅಟ್ಯಾಚ್‌ಮೆಂಟ್‌ ಬೆಳೆಸಿಕೊಂಡು ಬಿಟ್ಟಿರುತ್ತೇವೆ. ಸಾಮಾಜಿಕವಾಗಿ, ಭಾವನಾತ್ಮಕವಾಗಿ ಎಲ್ಲದಕ್ಕೂ ಅವುಗಳನ್ನೇ ಅವಲಂಬಿಸಿರುತ್ತೇವೆ. ಆದರೆ ಕೆಲವೊಮ್ಮೆ ಆ ವ್ಯಕ್ತಿ ಅಥವಾ ವಸ್ತು ನಮ್ಮ ಕೈತಪ್ಪಿ ಹೋದಾಗ, ಅದರ ಜತೆಗೇ ಸಂತೋಷವೂ ಕಿತ್ತುಕೊಂಡು ಹೋಗಿಬಿಡುತ್ತದೆ. ಆಗ ಅವಿಲ್ಲದಿದ್ದರೆ ಬದುಕೇ ಇಲ್ಲವೇನೋ ಎಂದುಕೊಂಡುಬಿಡುತ್ತೇವೆ. ಅಷ್ಟರಮಟ್ಟಿಗೆ ಅವಲಂಬಿತರಾಗಿರುತ್ತೇವೆ.

ವಸ್ತು ಅಥವಾ ವ್ಯಕ್ತಿಯೊಂದಿಗಿನ ಅವಲಂಬನೆ ಕೆಲವೊಮ್ಮೆ ಬದುಕಿಗೆ ಅನಿವಾರ್ಯವಾಗಿರುತ್ತದೆ. ಆ ಅವಲಂಬನೆ ನಮ್ಮನ್ನು ಸ್ವಾರ್ಥಿಗಳನ್ನಾಗಿ ಮಾಡುತ್ತದೆ ಎಂಬುದೂ ಅಷ್ಟೇಸತ್ಯ. ಆ ಸ್ವಾರ್ಥದಿಂದ ಅಹಂ ಉಂಟಾಗುತ್ತದೆ. ಅಹಂ ಅಂದರೆ ನಾನು, ನನಗೆ ಮಾತ್ರ ಎನ್ನುವ ಭಾವ ಆವರಿಸಿಬಿಡುತ್ತದೆ. ಯಾವಾಗ ಮನುಷ್ಯ ತನ್ನನ್ನು ಇಂತಹ ಬಂಧನಗಳಿಂದ ಮುಕ್ತನಾಗಿಸುತ್ತಾನೆಯೋ ಅರ್ಥಾತ್‌ ಭಾವನಾತ್ಮಕ ವಿಷಯಗಳಿಂದ ದೂರವಾಗಿರುತ್ತಾನೆಯೋ ಆತ ಎಲ್ಲೆಡೆಯೂ ನೆಮ್ಮದಿಯಿಂದ ಇರುತ್ತಾನೆ. ಕಾಣುವ ಪ್ರತಿಯೊಂದರಲ್ಲಿಯೂ ಸಂತೋಷವನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಬಿಸಿಲು, ಗಾಳಿ, ಮಳೆಗೆ ಮೈಯೊಡ್ಡಿ ನಿಂತ ಮರದಿಂದ ಅಟ್ಯಾಚ್‌ಮೆಂಟ್‌ ಇಲ್ಲದೇ ಬದುಕುವುದನ್ನು ಕಲಿತುಕೊಳ್ಳಬಹುದು. ಮರವಾಗಿ ಬೆಳೆದು ನಿಂತಿದ್ದರೂ ಇತರ ಮರವನ್ನು ಅದು ಆಶ್ರಯಿಸುವುದಿಲ್ಲ. ಅಥವಾ ಮರದಲ್ಲಿಯೇ ಮನೆಯ ಮಾಡಿ ಆಶ್ರಯ ಪಡೆಯುವ ಹಕ್ಕಿಗಳೊಂದಿಗಾಗಲೀ, ತನ್ನ ನೆರಳಲ್ಲಿ ಆಶ್ರಯ ಪಡೆದ ಮನುಷ್ಯರ ಅವಲಂಬನೆಯನ್ನಾಗಲಿ, ಆಪ್ತತೆಯನ್ನಾಗಲಿ ಬೆಳೆಸಿಕೊಂಡಿರುವುದಿಲ್ಲ. ಭೂಮಿಯೊಡಲಲ್ಲಿ ಹುದುಗಿ ಹೋಗಿರುವ ತನ್ನ ಬೇರುಗಳೊಂದಿಗೆ ಮಾತ್ರ ಭದ್ರವಾದ ಬಂಧವನ್ನು ಬೆಳೆಸಿಕೊಂಡಿರುತ್ತದೆ. ಅದು ಪ್ರಕೃತಿತತ್ತ್ವ. ಹಾಗೆಯೇ ನಾವು ಕೂಡಾ ಯಾರಿಗೂ ಅವಲಂಬಿತರಾಗದೆ ಸ್ವಂತಿಕೆಯಲ್ಲಿ ಬದುಕುವುದನ್ನು ಕಲಿತುಕೊಳ್ಳಬೇಕು. ಯಾವುದೇ ವಸ್ತು ಅಥವಾ ವ್ಯಕ್ತಿಗಳಿಂದ ನಿರೀಕ್ಷೆಯನ್ನಿಟ್ಟುಕೊಳ್ಳಬಾರದು.

ಮನಸ್ಸಿನ ಖುಷಿಗೆ: ಸಂಬಂಧಗಳು ಹಾಗೂ ಅವರೊಂದಿಗಿನ ಆಪ್ತತೆಗಳಿಂದ ಖುಷಿ ಸಿಗುತ್ತದೆ ನಿಜ. ಅದರಂತೆ ಆಗಾಗ್ಗೆ ದುಃಖವೂ ಆಗುವುದು ಸಹಜ. ಅಂದರೆ ವ್ಯಕ್ತಿ ಅಥವಾ ವಸ್ತುವಿಗೆ ಅವಲಂಬಿತರಾಗುವುದರಿಂದ ಸಿಗುವ ಖುಷಿ, ಬೇಸರಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದು ವಸ್ತುವಿನಿಂದ ಕಂಡುಕೊಳ್ಳುವ ಸಂತೋಷ ಅದು ಕ್ಷಣಿಕವಷ್ಟೇ. ಆದರೆ ಪ್ರತಿನಿತ್ಯ ಮಾಡುವ ಕೆಲಸದಲ್ಲಿ, ನೋಡುವ ವಸ್ತುವಿನಲ್ಲಿ (ಅದು ಪ್ರಕೃತಿಯೇ ಆಗಿರಬಹುದು), ಮಾತನಾಡಿಸುವ ವ್ಯಕ್ತಿಯಲ್ಲಿ ಖುಷಿಯನ್ನು ಕಂಡುಕೊಂಡರೆ ಇಡೀ ಜೀವನ ಖುಷಿಂದ ಕೂಡಿರುತ್ತದೆ.

ಮನಸ್ಸೇ ಎಲ್ಲ: ಮನಸ್ಸಿನಲ್ಲಿರುವ ನಕಾರಾತ್ಮಕ ಅಂಶಗಳನ್ನು ತೆಗೆದುಹಾಕಿ. ಯಾವುದೇ ಕಾರಣಕ್ಕೂ ನನ್ನಿಂದ ಸಾಧ್ಯವಿಲ್ಲ, ನನ್ನಿಂದ ಅದು ಆಗುವುದಿಲ್ಲ ಎಂಬ ‘ಇಲ್ಲ’ಗಳ ಪಟ್ಟಿಯನ್ನು ತೆಗೆದು ಹಾಕಿ. ಎಲ್ಲವೂ ಮನಸ್ಸಿನ ಆಲೋಚನೆ ಮೇಲೆಯೇ ಅವಲಂಬಿತವಾಗಿರುವುದರಿಂದ ನಮ್ಮನ್ನು ನಾವು ಗಟ್ಟಿ ಮಾಡಿಕೊಳ್ಳಬೇಕು. ಸಾಧಿಧಿಸಲು ಪ್ರಯತ್ನ ಮಾಡಿದರೆ ಸಬಳವನ್ನು ನುಂಗಬಹುದು ಎನ್ನುತ್ತಾರೆ. ಅದಕ್ಕೆ ಪ್ರಯತ್ನ ಮತ್ತು ಸಕಾರಾತ್ಮಕ ಮನೋಭಾವ ಇರಲೇಬೇಕು. ಅಂತಹ ಗುಣಗಳು ನಮ್ಮಲ್ಲಿದ್ದಾಗ ಯಾರನ್ನೂ ಅವಲಂಬಿತರಾಗಬೇಕಿಲ್ಲ.

ಹೊಸತನ್ನು ಕಲಿಯುವ ಹಂಬಲ: ಜಗತ್ತಿನಲ್ಲಿ ತಿಳಿದುಕೊಳ್ಳುವಂಥದ್ದು ಸಾಕಷ್ಟು ಇರುತ್ತದೆ. ಪ್ರತಿನಿತ್ಯ ಹೊಸತನ್ನೇನಾದರೂ ಕಲಿಯಲು ಆರಂಭಿಸಿ. ಹೊಸತನ ಮನಸ್ಸನ್ನು ಸಕಾರಾತ್ಮಕವಾಗಿ ಇರುವಂತೆ ಮಾಡುವುದು. ಜ್ಞಾನವನ್ನು ವೃದ್ಧಿಸುವುದು. ಆ ಜ್ಞಾನ ವ್ಯಕ್ತಿಯಲ್ಲಿ ಆತ್ಮವಿಶ್ವಾಸ ಮೂಡಿಸುವುದು. ಅದರಿಂದ ವಿಲ್‌ಪವರ್‌ ಹೆಚ್ಚಿಸುವುದು, ಸಾಧನೆಯ ಹಾದಿಗೆ ಕರೆದೊಯ್ಯುವುದು.

ನಮ್ಮಲ್ಲಿರುವ ಭಾವನೆಗಳೇ ನಮಗಿರುವ ಶಕ್ತಿ. ಆ ಭಾವನೆಗಳು ಪ್ರತಿಯೊಬ್ಬರಲ್ಲೂ ಸಕಾರಾತ್ಮಕ ಹಾಗೂ ನಕಾರಾತ್ಮಕವಾಗಿ ಎರಡು ರೂಪದಲ್ಲಿರುತ್ತವೆ. ಈ ಎರಡು ರೀತಿಯ ಭಾವನೆಗಳಿಗೆ ನಮ್ಮ ಮನಸ್ಸು ಮತ್ತು ದೇಹ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಹೋಲಿಕೆ ಮಾಡಿನೋಡಿ.

ಏಕಾಂಗಿಯಾಗಿ ಇರುವುದನ್ನು ರೂಢಿ ಮಾಡಿಕೊಳ್ಳಿ. ಅಂತಹ ಸಂದರ್ಭದಲ್ಲಿ ನಿಮ್ಮ ಮನಸ್ಸು ಯಾವ ರೀತಿಯ ಭಾವನೆಗಳನ್ನು ಹೊರಹಾಕುತ್ತದೆ ಎಂಬುದನ್ನು ಗಮನಿಸಿ ನೋಡಿ.

ಸ್ವಂತಿಕೆಯಿಂದ ಹೇಗೆ ಗುರುತಿಸಿಕೊಳ್ಳಬೇಕು ಎಂಬುದನ್ನು ಗೊತ್ತು ಮಾಡಿಕೊಳ್ಳಿ. ನಮ್ಮೊಳಗಿನ ಯಾವ ಗುಣಗಳು ಜನರಿಗೆ ಹೆಚ್ಚು ಇಷ್ಟವಾಗುತ್ತವೆ, ಜನರು ಯಾವ ಗುಣಗಳನ್ನು ಹಿಂದಿನಿಂದಲೂ ಆಡಿಕೊಳ್ಳುವಂತೆ ಆಗುತ್ತದೆ ಎಂಬುದನ್ನು ಗಮನಿಸುತ್ತಿರಿ. ಇತರರು ಒಪ್ಪಿಕೊಳ್ಳುವಂತಹ ಸ್ವಪ್ರಜ್ಞೆಯನ್ನು ಬೆಳೆಸಿಕೊಳ್ಳುವುದಕ್ಕಾಗಿ ಪ್ರಯತ್ನಿಸಿ. ಸ್ವತಿಕೆಯಿಂದ ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲವಾದರೆ ಕಂಫರ್ಟ್‌ ವಲಯದಿಂದ ಹೊರಬಂದು ಹೊಸತನ್ನು ಕಂಡುಕೊಳ್ಳಿ.

ಇತರರನ್ನು ನಿಯಂತ್ರಣದಲ್ಲಿರಿಸುವ ಪ್ರಯತ್ನ ಸಲ್ಲದು. ಯಾವಾಗ ಇತರವ್ಯಕ್ತಿಗಳಿಗೆ ಅವಲಂಬಿತರಾಗಿರುತ್ತಿರೋ ಅವರನ್ನೂ ನಿಯಂತ್ರಿಸುವ ಪ್ರಯತ್ನ ಮಾಡದಿರಿ. ಯಾಕಂದರೆ ಅದು ನಿಮ್ಮಿಂದ ಸಾಧ್ಯವಿಲ್ಲ. ಅವರವರ ಆಲೋಚನೆಗಳನ್ನು , ಭಾವನೆಗಳನ್ನು, ಆಯ್ಕೆಗಳನ್ನುಅವರವರಿಗೇ ಬಿಟ್ಟು ಬಿಡಿ. ಅಂತಹ ವಿಚಾರಗಳಿಗೆ ತಲೆ ಹಾಕುವುದನ್ನು ಬಿಟ್ಟುಬಿಡಿ.

ಉದಾಹರಣೆ, ನಿಮ್ಮದೇ ಸ್ನೇಹಿತ/ಸ್ನೇಹಿತ ಮತ್ಯಾರೋ ಜತೆ ಸಮಯ ಕಳೆಯಬೇಕೆಂದುಕೊಂಡಿರುತ್ತಾರೆ. ಆಗ ಅವರನ್ನು ತಡೆಹಿಡಿಯುವ, ನಿಯಂತ್ರಿಸುವ ಪ್ರಯತ್ನ ಮಾಡಬಾರದು.