ಮನೆ ರಾಜ್ಯ ಗನ್ ಮ್ಯಾನ್‌ ಯಾರಿಗೂ ಬೇಕಿಲ್ಲ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹೆಚ್ಡಿಕೆ ಕಿಡಿ

ಗನ್ ಮ್ಯಾನ್‌ ಯಾರಿಗೂ ಬೇಕಿಲ್ಲ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹೆಚ್ಡಿಕೆ ಕಿಡಿ

0

ಮೈಸೂರು (Mysuru): ಪ್ರತಿಯೊಬ್ಬರಿಗೂ ರಕ್ಷಣೆ ನೀಡಲು ಸಾಧ್ಯವಿಲ್ಲ, ಗನ್‌ ಮ್ಯಾನ್‌ ಕೊಡಲು ಸಾಧ್ಯವಿಲ್ಲ ಎಂದಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಯಾರಿಗೂ ಗನ್ ಮ್ಯಾನ್ ಬೇಕಿಲ್ಲ. ಆದರೆ ನೆಮ್ಮದಿಯಾಗಿ ಬದುಕಲು ವಾತಾವರಣ ಬೇಕಷ್ಟೇ. ಸರಕಾರ ಅಷ್ಟು ಮಾಡಿದರೆ ಸಾಕು ಎಂದಿದ್ದಾರೆ.

ಬೆಂಗಳೂರು ನಗರಕ್ಕೆ ಹಾಗೂ ರಾಜ್ಯಕ್ಕೆ ತೇಜಸ್ವಿ ಸೂರ್ಯ ಅವರ ಕೊಡುಗೆ ಏನು ಎಂಬುದು ಗೊತ್ತಿಲ್ಲ. ಜನರು ಅಂಥವರಿಗೆ ಮತ ಕೊಟ್ಟು ಗೆಲ್ಲಿಸಿ ಅಂಥವರಿಂದ ಇಂಥ ಮಾತುಗಳನ್ನು ಕೇಳಬೇಕಾಗಿ ಬಂದಿದೆ. ಜನರಿಗೆ ಇದೆಲ್ಲವನ್ನು ಸಹಿಸಿಕೊಳ್ಳದೇ ಬೇರೆ ವಿಧಿ ಇಲ್ಲ ಎಂದು ಹೇಳಿದ್ದಾರೆ.

ಅಧಿಕಾರಿಗಳ ವರ್ಗಾವರ್ಗಿಯಲ್ಲಿ ಹಣದ ಹೊಳೆಯೇ ಹರಿಯುತ್ತಿದೆ ಎಂದು ದೂರಿದ ಮಾಜಿ ಮುಖ್ಯಮಂತ್ರಿಗಳು, ಒಬ್ಬ ಸರ್ಕಲ್ ಇನ್ಸ್ಪೆಕ್ಟರ್ 75 ಲಕ್ಷದಿಂದ 1 ಕೋಟಿ ರೂ.ವರೆಗೂ ಲಂಚ ನೀಡಿ ಹುದ್ದೆಗೆ ಬರುತ್ತಾರೆ. ಹಾಗೆ ಬರುವ ಅಧಿಕಾರಿಯಿಂದ ಉತ್ತಮ ಕರ್ತವ್ಯ ನಿರ್ವಹಣೆ ನಿರೀಕ್ಷಿಸಲು ಸಾಧ್ಯವೇ? ನೀವು ಸರಿಯಾಗಿ ಆಡಳಿತ ಮಾಡಿದ್ದರೆ ಯಾಕೆ ಸಾವುಗಳು ಸಂಭವಿಸುತ್ತಿದ್ದವು? ಎಂದು ಪ್ರಶ್ನಿಸಿದ್ದಾರೆ.

ಎರಡು ಬಾರಿ ಆಪರೇಷನ್ ಕಮಲವೆಂಬ ಅನೈತಿಕ ಮಾರ್ಗದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮುಂದೆ, ನಡುರಸ್ತೆಗಳಲ್ಲಿ ಅಮಾಯಕರ ನೆತ್ತರು ಹರಿಸಿ ಪಾಪದ ಮಾರ್ಗದಲ್ಲಿ ಅಧಿಕಾರಕ್ಕೆ ಬರಲು ಹೊಂಚು ಹಾಕಿದೆ ಎಂದರು.

ಮಾಜಿ ಸಚಿವ ಸಾ.ರಾ. ಮಹೇಶ್, ಶಾಸಕ ಅಶ್ವಿನ್ ಕುಮಾರ್ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.