ಮನೆ ಅಪರಾಧ ಪ್ರಿಯಕರನೊಂದಿಗೆ ಪರಾರಿಯಾಗಿದ್ದ ನವವಧು ಆತ್ಮಹತ್ಯೆ

ಪ್ರಿಯಕರನೊಂದಿಗೆ ಪರಾರಿಯಾಗಿದ್ದ ನವವಧು ಆತ್ಮಹತ್ಯೆ

0

ಮೈಸೂರು(Mysuru) : ಆಷಾಢ ಮಾಸದಲ್ಲಿ ತವರು ಮನೆಗೆ ಬಂದಿದ್ದ ನವವಧು ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಳು. ಬಳಿಕ ಆತನಿಂದ ಬೇರ್ಪಟ್ಟ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.
ಮೃತಳನ್ನು ವರ್ಷಿತಾ (20) ಎಂದು ಗುರುತಿಸಲಾಗಿದೆ.
ವರ್ಷಿತಾ ತನ್ನ ಮನೆಯ ಪಕ್ಕದಲ್ಲಿದ್ದ ಕಿರಣ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಈ ಬಗ್ಗೆ ಆಕೆಯ ಪೋಷಕರು ಮಗಳ ಮನವೊಲಿಸಿ ಚಾಮರಾಜನಗರದ ಯುವಕನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಆಷಾಢ ಮಾಸ ಹಿನ್ನೆಲೆ ವರ್ಷಿತಾ ತವರು ಮನೆಗೆ ಬಂದಿದ್ದು, ಈ ವೇಳೆ ಪ್ರಿಯತಮ ಕಿರಣ್ ಜೊತೆ ಓಡಿಹೋಗಿದ್ದರು.
ವರ್ಷಿತಾ ಕಾಣೆಯಾದ ಬಗ್ಗೆ ಪೋಷಕರು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪರಾರಿಯಾಗಿದ್ದ ವರ್ಷಿತಾ ಹಾಗೂ ಕಿರಣ್ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದು, ವಾಪಸ್ ಕರೆತಂದ ಪೊಲೀಸರು ಇಬ್ಬರಿಗೂ ಬುದ್ಧಿವಾದ ಹೇಳಿ ಬೇರ್ಪಡಿಸಿದ್ದರು.
ಬಳಿಕ ವರ್ಷಿತಾ ಮೈಸೂರಿನಲ್ಲಿದ್ದ ಸಂಬಂಧಿಕರ ಮನೆಯಲ್ಲಿ 3 ದಿನ ಇದ್ದು ಬಳಿಕ ರಾಂಪುರದಲ್ಲಿರುವ ತಾತನ ಮನೆಗೆ ಬಂದಿದ್ದರು. ಪ್ರಿಯಕರನನ್ನು ದೂರ ಮಾಡಿದ್ದಕ್ಕೆ ಮನನೊಂದಿದ್ದ ವರ್ಷಿತಾ ತಾತನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.