ಮನೆ ದೇಶ ಅಟಲ್‌ ಬಿಹಾರಿ ವಾಜಪೇಯಿ ಪುಣ್ಯಸ್ಮರಣೆ: ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ಗಣ್ಯರಿಂದ ಗೌರವ ನಮನ

ಅಟಲ್‌ ಬಿಹಾರಿ ವಾಜಪೇಯಿ ಪುಣ್ಯಸ್ಮರಣೆ: ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ಗಣ್ಯರಿಂದ ಗೌರವ ನಮನ

0
ಚಿತ್ರ ಕೃಪೆ: ಎಎನ್‌ ಐ

ನವದೆಹಲಿ (New Delhi): ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ 4ನೇ ವರ್ಷದ ಪುಣ್ಯತಿಥಿ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್ ಸೇರಿದಂತೆ ಗಣ್ಯರು ಇಂದು ಮುಂಜಾನೆ ದೆಹಲಿಯಲ್ಲಿರುವ ವಾಜಪೇಯಿ ಅವರ ಸಮಾಧಿ ‘ಸದೈವ್ ಅಟಲ್’ಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜನಾಥ್‌ ಸಿಂಗ್, ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿದಂತೆ ಇತರೆ ಗಣ್ಯರು ಭೇಟಿ ನೀಡಿ ಗೌರವ ಸಲ್ಲಿಸಿದರು. ವಾಯಪೇಯಿ ಅವರ ಪುತ್ರಿ ನಮಿತಾ ಕೌಲ್ ಭಟ್ಟಾಚಾರ್ಯ ಮತ್ತು ಮೊಮ್ಮಗಳಾದ ನಿಹಾರಿಕಾ ಕೂಡ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ದೇಶದ ಪ್ರಮುಖ ನಾಯಕರಲ್ಲಿ ಒಬ್ಬರು ಮತ್ತು ಭಾರತೀಯ ಜನತಾ ಪಕ್ಷದ ಸ್ಥಾಪಕ ಸದಸ್ಯರಾದ ವಾಜಪೇಯಿ ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ 2018ರ ಆಗಸ್ಟ್ 16 ವಿಧಿವಶರಾಗಿದ್ದರು.

1998-2004ರವರೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸರ್ಕಾರವನ್ನು ಮುನ್ನಡೆಸಿದ ವಾಜಪೇಯಿ, ಬಿಜೆಪಿಯಿಂದ ರಾಷ್ಟ್ರದ ಪ್ರಧಾನ ಮಂತ್ರಿಯಾದ ಮೊದಲ ನಾಯಕ. ಅವರು ಮೂರು ಬಾರಿ ದೇಶದ ಪ್ರಧಾನಿಯಾಗಿದ್ದರು. 1996 ರಲ್ಲಿ ಮತ್ತು 1998 ರಿಂದ 2004 ರ ನಡುವೆ ಎರಡು ಅವಧಿಗೆ ಪ್ರಧಾನಿಯಾಗಿ ಸೇವೆ‌ ಸಲ್ಲಿಸಿದ್ದಾರೆ. ಡಿಸೆಂಬರ್ 25ರ ಅವರ ಜನ್ಮದಿನವನ್ನು ಪಕ್ಷವು ‘ಉತ್ತಮ ಆಡಳಿತ ದಿನ’ ಎಂದು ಆಚರಿಸುತ್ತದೆ. 2014 ರಲ್ಲಿ ಅವರಿಗೆ ಭಾರತ ರತ್ನ ದೊರಕಿತ್ತು.