ಮನೆ ರಾಜ್ಯ ಆಡಿಯೋದಲ್ಲಿರುವ ಧ್ವನಿ ನನ್ನದೇ, ಸಿಎಂ ರಾಜೀನಾಮೆ ಕೇಳಿದರೆ ಕೊಡಲು ಸಿದ್ಧ: ಸಚಿವರ ಮಾಧುಸ್ವಾಮಿ

ಆಡಿಯೋದಲ್ಲಿರುವ ಧ್ವನಿ ನನ್ನದೇ, ಸಿಎಂ ರಾಜೀನಾಮೆ ಕೇಳಿದರೆ ಕೊಡಲು ಸಿದ್ಧ: ಸಚಿವರ ಮಾಧುಸ್ವಾಮಿ

0

ತುಮಕೂರು (Tumakuru): ವೈರಲ್‌ ಆಗಿರುವ ಆಡಿಯೋದಲ್ಲಿ ಮಾತನಾಡಿರುವ ಧ್ವನಿ ನನ್ನದೇ. ಈ ವಿಚಾರವಾಗಿ ಸಿಎಂ ರಾಜೀನಾಮೆ ಕೇಳಿದರೆ ಕೊಡಲು ಸಿದ್ಧ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ಆಡಿಯೋ ವೈರಲ್‌ ವಿಚಾರವಾಗಿ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆ.ಸಿ ಪುರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಅದು ಹಳೆಯ ಆಡಿಯೋ. ಅದನ್ನ ಯಾವಾಗ ಮಾತನಾಡಿದ್ದೇನೆ ಅಂತಾ ನೆನಪಿಲ್ಲ. ನನ್ನ ವಿರುದ್ಧ ಯಾರೂ ಕೂಡ ಷಡ್ಯಂತರ ಮಾಡಿಲ್ಲ. ನಾನು ಯಾರ ಮೇಲೂ ದೂಷಣೆ ಮಾಡಲ್ಲ. ಈಗಾಗಲೇ ಈ ಆಡಿಯೋ ವಿವಾದದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸ್ಪಷ್ಟನೆ ನೀಡಿದ್ದೇನೆ. ಅವರು ನಮ್ಮ ನಾಯಕರು. ಈ ವಿಚಾರಕ್ಕಾಗಿ ನಾನು ರಾಜೀನಾಮೆ ಕೊಡುವ ಪ್ರಮೇಯವೇ ಇಲ್ಲ. ಆದರೂ ಸಿಎಂ ರಾಜೀನಾಮೆ ಕೇಳಿದರೆ ಕೊಡುತ್ತೇನೆ ಎಂದು ಹೇಳಿದರು.

ಗೊತ್ತಿಲ್ಲದೆ ರೆಕಾರ್ಡ್ ಮಾಡೋದು ಅಪರಾಧ. ಹಾಗಾಗಿ ರೆಕಾರ್ಡಿಂಗ್ ಮಾಡಿದ ವ್ಯಕ್ತಿಯ ವಿರುದ್ಧ ದೂರು ನೀಡುತ್ತೇನೆ. ಜೊತೆಗೆ ಪ್ರಸಾರ ಮಾಡಿದ ಮಾಧ್ಯಮದ ಮೇಲೂ ದೂರು ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಅನಾಮಿಕ ವ್ಯಕ್ತಿ ನನ್ನನ್ನು ಪ್ರೊವೋಕ್‌ ಮಾಡಿದ. ಹಾಗಾಗಿ ನಾನು ಮ್ಯಾನೇಜ್ ಮಾಡುತ್ತಿದ್ದೇನೆ ಎಂದು ಹೇಳಿದೆ ಎಂದ ಮಾಧುಸ್ವಾಮಿ, ಸಚಿವ ಎಸ್‌ಟಿ ಸೋಮಶೇಖರ್ ಕುರಿತು ನಾನು ಗೌರವಯುತವಾಗಿ ಮಾತನಾಡಿದ್ದೇನೆ. ಸರ್ಕಾರದ ಭಾಗವಾಗಿ ಯಾರಾದರೂ ನೆಗೆಟಿವ್ ಆಗಿ ಮಾತಾಡ್ತಾರಾ? ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡ್ತಿದೆ. ಸರ್ಕಾರದ ಕಾರ್ಯ ವೈಖರಿ ಬಗ್ಗೆ ಎರಡು ಮಾತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡ್ತಿದ್ದಾರೆ. ಮುಂದೆ ಸಿ.ಎಂ ಬದಲಾವಣೆಯೂ ಇಲ್ಲ, ಸಂಪುಟ ಪುನಾರಚನೆ ಕೂಡ ಆಗೋದಿಲ್ಲ ಎಂದು ಸ್ಪಷ್ಟನೆ ನೀಡಿದರು.