ಮನೆ ರಾಷ್ಟ್ರೀಯ ತಮ್ಮ ವಿರುದ್ಧದ ಎಲ್ಲಾ ಪ್ರಕರಣ ಸಮಾಪ್ತಿ ಮಾಡುವುದಾಗಿ ಬಿಜೆಪಿ ಆಫರ್ ನೀಡಿತ್ತು: ಮನೀಷ್ ಸಿಸೋಡಿಯಾ

ತಮ್ಮ ವಿರುದ್ಧದ ಎಲ್ಲಾ ಪ್ರಕರಣ ಸಮಾಪ್ತಿ ಮಾಡುವುದಾಗಿ ಬಿಜೆಪಿ ಆಫರ್ ನೀಡಿತ್ತು: ಮನೀಷ್ ಸಿಸೋಡಿಯಾ

0

ನವದೆಹಲಿ(New Delhi): ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದರೆ ತಮ್ಮ ವಿರುದ್ಧದ ಎಲ್ಲ ಪ್ರಕರಣಗಳನ್ನು ಸಮಾಪ್ತಿ ಮಾಡುವುದಾಗಿ ಬಿಜೆಪಿ ಆಫರ್ ನೀಡಿತ್ತು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಗಂಭೀರ ಆರೋಪ ಮಾಡಿದ್ದಾರೆ.

ಎಎಪಿ ಸರ್ಕಾರದ ಹಿಂದಿನ ಅಬಕಾರಿ ನೀತಿ ಕುರಿತಾಗಿ ಸಿಸೋಡಿಯಾ ಅವರನ್ನು ಸಿಬಿಐ ತೀವ್ರ ವಿಚಾರಣೆಗೊಳಪಡಿಸಿರುವ ಬೆನ್ನಲ್ಲೇ ಸಿಸೋಡಿಯಾ ಅವರ ಆರೋಪ ರಾಜಕೀಯವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ.

ಆಪ್ ತೊರೆದು ಬಿಜೆಪಿಗೆ ಬನ್ನಿ ಎಂದು ಬಿಜೆಪಿಯಿಂದ ನನಗೆ ಸಂದೇಶ ಬಂದಿದೆ. ನಿಮ್ಮ ವಿರುದ್ಧದ ಎಲ್ಲ ಸಿಬಿಐ ಮತ್ತು ಇಡಿ ಕೇಸುಗಳನ್ನು ಮುಕ್ತಾಯಗೊಳಿಸುವ ಭರವಸೆ ನೀಡುತ್ತೇವೆ ಎಂದು ಸಂದೇಶ ಬಂದಿದೆ ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

ನಾನೊಬ್ಬ ರಜಪೂತನಾಗಿದ್ದು, ಮಹಾರಾಣಾ ಪ್ರತಾಪ್​ ಅವರ ವಂಶಜನಾಗಿದ್ದೇನೆ. ನನ್ನ ತಲೆ ಕತ್ತರಿಸಿದರೂ ಸರಿ, ಭ್ರಷ್ಟರು ಮತ್ತು ಸಂಚುಕೋರರ ಎದುರು ತಲೆ ಬಾಗಿಸಲಾರೆ. ನನ್ನ ವಿರುದ್ಧದ ಎಲ್ಲ ಪ್ರಕರಣಗಳು ಸುಳ್ಳು ಎಂದಿರುವ ಸಿಸೋಡಿಯಾ, ಬಿಜೆಪಿ ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.

ರೂಪಾಯಿ ಮೌಲ್ಯ ಕುಸಿಯುತ್ತಿದೆ, ಜನತೆ ಹಣದುಬ್ಬರದಿಂದ ತೊಂದರೆಗೀಡಾಗಿದ್ದಾರೆ, ನಿರುದ್ಯೋಗ ಹೆಚ್ಚಾಗಿದೆ. ಇದರ ಮಧ್ಯೆ ಈ ಜನ ‘ಸಿಬಿಐ-ಇಡಿ’ ಆಟ ಆಡುತ್ತಿದ್ದಾರೆ ಮತ್ತು ಜನರಿಂದ ಆಯ್ಕೆಯಾದ ಸರ್ಕಾರಗಳನ್ನು ಉರುಳಿಸುವಲ್ಲಿ ಮತ್ತು ಬರೀ ಟೀಕೆ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.