ಮನೆ ರಾಜ್ಯ ಕೆಪಿಟಿಸಿಎಲ್‌ ಪರೀಕ್ಷಾ ಅಕ್ರಮ: 9 ಮಂದಿಯ ಬಂಧನ

ಕೆಪಿಟಿಸಿಎಲ್‌ ಪರೀಕ್ಷಾ ಅಕ್ರಮ: 9 ಮಂದಿಯ ಬಂಧನ

0

ಬೆಳಗಾವಿ (Belagavi): ಕೆಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ, ಪೊಲೀಸರು ಒಟ್ಟು 9 ಮಂದಿಯನ್ನು ಬಂಧಿಸಿದ್ದಾರೆ.

ಗೋಕಾಕ ತಾಲ್ಲೂಕಿನ ನಾಗನೂರು ಗ್ರಾಮದ ಸಿದ್ದಪ್ಪ ಕೆಂಪಣ್ಣ ಮದಿಹಳ್ಳಿ, ಮಾಲದಿನ್ನಿಯ ಸುನೀಲ ಅಜ್ಜಪ್ಪ ಭಂಗಿ, ಶಿರಹಟ್ಟಿ ಬಿ.ಕೆ. ಗ್ರಾಮದ ಬಸವಣ್ಣಿ ಶಿವಪ್ಪ ಡೊಣವಾಡ, ವೀರನಗಡ್ಡಿಯ ಸಂತೋಷ ಪ್ರಕಾಶ ಮಾಣಗಾವಿ, ಬೆಣಚಿನಮರಡಿಯ ಸಿದ್ಧಪ್ಪ ಕೆಂಚಪ್ಪ ಕೊತ್ತಲ, ಮಾಲದಿನ್ನಿಯ ರೇಣುಕಾ ವಿಠಲ ಜವಾರಿ, ಗದಗ– ಬೆಟಗೇರಿಯ ಅಮರೇಶ ಚಂದ್ರಶೇಖರಯ್ಯ ರಾಜೂರ, ಮಾರುತಿ ಶಂಕರ ಸೋನವಣೆ (ಉಪಪ್ರಾಂಶುಪಾಲ), ಸಮಿತ್‌ಕುಮಾರ ಮಾರುತಿ ಸೋನವಣೆ (ಉಪಪ್ರಾಂಶುಪಾಲರ ಪುತ್ರ) ಬಂಧಿತ ಆರೋಪಿಗಳು.

ಬಂಧಿತರಲ್ಲಿ ಮೂವರು ಅಭ್ಯರ್ಥಿಗಳು, ಪ್ರಶ್ನೆ ಪತ್ರಿಕೆ ಬಹಿರಂಗ ಮಾಡಿದವರು, ಉತ್ತರ ಸಿದ್ಧಪಡಿಸಿ ಹೇಳಿದವರು, ಇದಕ್ಕೆ ಅನುಕೂಲ ಮಾಡಿಕೊಟ್ಟವರೂ ಸೇರಿದ್ದಾರೆ. ಇವರಲ್ಲಿ ಒಬ್ಬ ಸರ್ಕಾರಿ ಶಾಲೆ ಶಿಕ್ಷಕ ಹಾಗೂ ಕೆಲವರು ಸರ್ಕಾರಿ ನೌಕರಿಯಲ್ಲಿದ್ದಾರೆ. ಗೋಕಾಕ ನಗರದಲ್ಲಿ ವೃತ್ತಿಪರ ತರಬೇತಿ ನೀಡುವ ಕೇಂದ್ರದವರೂ ಸೇರಿದ್ದಾರೆ.

ತಲೆಮರೆಸಿಕೊಂಡಿರುವ ಇನ್ನೂ ನಾಲ್ವರ ಹುಡುಕಾಟ ನಡೆದಿದೆ. ಸದ್ಯಕ್ಕೆ ಎರಡು ಪರೀಕ್ಷಾ ಕೇಂದ್ರಗಳ ಅಕ್ರಮ ಬಯಲಿಗೆ ಬಂದಿದ್ದು, ಇನ್ನೂ ಹಲವು ಕಡೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲಿಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಗೋಕಾಕ ನಗರದ ಜೆಎಸ್‌ಎಸ್‌ ಪದವಿಪೂರ್ವ ಕಾಲೇಜು ಹಾಗೂ ಗದಗ ನಗರದ ಮುನ್ಸಿಪಲ್‌ ಕಾಲೇಜಿನಲ್ಲಿ ನಡೆದ ಅಕ್ರಮಗಳು ಖಚಿತಪಟ್ಟಿವೆ. ಅಥಣಿಯೂ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಅಕ್ರಮ ನಡೆದ ಅನುಮಾನಗಳಿವೆ ಎಂದರು.

ಆ.7ರಂದು ಗೋಕಾಕದಲ್ಲಿ ನಡೆದ ಪರೀಕ್ಷೆಯಲ್ಲಿ ಅಭ್ಯರ್ಥಿಯೊಬ್ಬ ಸ್ಮಾರ್ಟ್‌ವಾಚ್‌ ಬಳಸಿ ಪ್ರಶ್ನೆಪತ್ರಿಕೆ ಫೋಟೋ ತೆಗೆದು ಟೆಲಿಗ್ರಾಮ್‌ ಆ್ಯಪ್‌ ಮೂಲಕ ಹೊರಗೆ ಕಳುಹಿಸಿದ್ದಾನೆ ಎಂದು ಸಚಿನ್ ಎಂಬ ಇನ್ನೊಬ್ಬ ಅಭ್ಯರ್ಥಿ ದೂರು ನೀಡಿದ್ದರು. ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಇದು ಖಚಿತಪಟ್ಟಿತು.

ಆರೋಪಿಯು ಸೂಕ್ಷ್ಮವಾದ ಬ್ಲೂಟೂತ್‌ ಡಿವೈಸ್‌ ಅನ್ನು ಕಿವಿಯೊಳಗೆ, ಅದರ ಸಿಮ್‌ ಅನ್ನು ಬಾಯೊಳಗೆ ಇಟ್ಟುಕೊಂಡಿದ್ದ. ಸ್ಮಾರ್ಟ್‌ವಾಚ್‌ ಮೂಲಕ ಸ್ನೇಹಿತರಿಗೆ ಪ್ರಶ್ನೆಪತ್ರಿಕೆಯ ಫೋಟೋ ಕಳುಹಿಸಿದ್ದ. ಹುಕ್ಕೇರಿ ತಾಲ್ಲೂಕಿನ ಶಿರಹಟ್ಟಿ (ಬಿ.ಕೆ) ಗ್ರಾಮದ ತೋಟದ ಮನೆಯಲ್ಲಿ ಕುಳಿತ ಈತನ ಸ್ನೇಹಿತರು ಬ್ಲೂಟೂತ್‌ ಮೂಲಕ ಉತ್ತರ ನೀಡಿದ್ದರು. ಈ ಎಲ್ಲರನ್ನೂ ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.