ಮನೆ ಆರೋಗ್ಯ ಅಮೃತಬಳ್ಳಿಯಲ್ಲಿರುವ ಆರೋಗ್ಯ ಲಾಭಗಳು

ಅಮೃತಬಳ್ಳಿಯಲ್ಲಿರುವ ಆರೋಗ್ಯ ಲಾಭಗಳು

0

ನೈಸರ್ಗಿಕ ಗಿಡಮೂಲಿಕೆಯಾದ ಅಮೃತಬಳ್ಳಿ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಅಮೃತಬಳ್ಳಿಗೆ ಆಯುರ್ವೇದದಲ್ಲಿ ವಿಶೇಷ ಸ್ಥಾನ ಪಡೆದಿದೆ. ಕಹಿ ಮತ್ತು ಒಗರಿನ ರುಚಿ ಹೊಂದಿರುವ ಈ ಅಮೃತಬಳ್ಳಿ ಸೇವನೆ ಮಾಡಿದರೆ ಬೇಗನೆ ಜೀರ್ಣವಾಗುತ್ತದೆ. ಮುಖ್ಯವಾಗಿ ದೇಹದಲ್ಲಿ ವಾತ, ಪಿತ್ತ, ಕಫ ದೋಷಗಳ ಅಸಮತೋಲನವಿದ್ದರೆ ಸರಿಪಡಿಸುತ್ತದೆ. ಉಷ್ಣಗುಣವನ್ನು ಹೊಂದಿರುವ ಈ ಮೂಲಿಕೆಯನ್ನು ಮಿತವಾಗಿ ಬಳಸಿದರೆ ಉತ್ತಮ ಪ್ರಯೋಜನ ಪಡೆಯಬಹುದು.

​ಅಸ್ತಮಾ, ಜ್ವರಕ್ಕೆ ರಾಮಬಾಣ

ಅಮೃತಬಳ್ಳಿ ನೆಗಡಿ, ಜ್ವರಕ್ಕೆ ರಾಮಬಾಣವಾಗಿದೆ. ಅಸ್ತಮಾ ರೋಗಿಗಳಿಗೂ ಕೂಡ ಅಮೃತಬಳ್ಳಿಯ ಕಷಾಯ ಮಾಡಿ ಸೇವನೆ ಮಾಡುವುದರಿಂದ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ. ಅಲ್ಲದೆ ಕೆಮ್ಮು, ಕಫವನ್ನೂ ಕೂಡ ನಿವಾರಣೆ ಮಾಡಲು ಅಮೃತಬಳ್ಳಿ ಸಹಕಾರಿಯಾಗಿದೆ. ಹೀಗಾಗಿ ಜ್ವರದ ಸಂದರ್ಭದಲ್ಲಿ ಅಮೃತಬಳ್ಳಿಯ ಕಷಾಯ ಮಾಡಿ ಸೇವನೆ ಮಾಡಬಹುದು.

​ಚರ್ಮದ ಕಾಯಿಲೆಗಳಿಗೆ

ಸಾಮಾನ್ಯವಾಗಿ ಚರ್ಮಕ್ಕೆ ಬೇಗ ಸೋಂಕು ತಗುಲುತ್ತದೆ. ಎಲ್ಲಾ ರೀತಿಯ ಚರ್ಮದ ಸಮಸ್ಯೆಗಳಿಗೆ ಅಮೃತಬಳ್ಳಿ ಮದ್ದಾಗಿದೆ. ಸೋರಿಯಾಸಿಸ್‌, ಅಲ್ಟಿಕೇರಿಯಾ, ಕಾಮಾಲೆ, ಯೂರಿಕ್‌ ಆಸಿಡ್‌ ಹೆಚ್ಚಳವನ್ನು ಕಡಿಮೆ ಮಾಡಲು ಈ ಅಮೃತಬಳ್ಳಿ ಸಹಾಯ ಮಾಡುತ್ತದೆ. ಅಮೃತಬಳ್ಳಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಚರ್ಮವನ್ನು ರಕ್ಷಿಸುತ್ತದೆ. ಅಲ್ಲದೆ ಚರ್ಮ ಬೇಗನೆ ಸುಕ್ಕುಗಟ್ಟುವುದು ಅಥವಾ ಬೇಗನೆ ವಯಸ್ಸಾದಂತೆ ಆಗುವುದನ್ನು ಇದು ತಪ್ಪಿಸಿ ಚರ್ಮವನ್ನು ಆರೈಕೆ ಮಾಡುತ್ತದೆ.

​ರಕ್ತಹೀನತೆಗೆ ಬೆಸ್ಟ್‌

ಸಾಮಾನ್ಯವಾಗಿ ಮಹಿಳೆಯರಲ್ಲಿ ರಕ್ತಹೀನತೆ ಹೆಚ್ಚಾಗಿರುತ್ತದೆ. ಮಾಸಿಕ ದಿನಗಳು, ಹೆರಿಗೆ ಹೀಗೆ ಅನೇಕ ಕಾರಣಗಳಿಂದ ಮಹಿಳೆಯರ ದೇಹದಿಂದ ಸಾಕಷ್ಟು ಪ್ರಮಾಣದ ರಕ್ತನಷ್ಟವಾಗಿರುತ್ತದೆ. ಇದಕ್ಕೆ ಅಮೃತಬಳ್ಳಿ ಪರಿಹಾರ ನೀಡುತ್ತದೆ. ಪುರುಷರೂ ಕೂಡ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಅಮೃತಬಳ್ಳಿಯ ಕಷಾಯವನ್ನು ಸೇವನೆ ಮಾಡಬಹುದು.

​ಕೀಲುಗಳ ನೋವಿಗೆ

ಡೇಂಗ್ಯೂ, ಚಿಕನ್‌ಗುನ್ಯಾದಂತಹ ಕಾಯಿಲೆಗಳಿಂದ ಗುಣಮುಖವಾದ ಮೇಲೆ ಕೀಲುಗಳಲ್ಲಿ ನೋವು ಹಾಗೆಯೇ ಇರುತ್ತದೆ. ಈ ನೋವು 6 ರಿಂದ 8 ತಿಂಗಳವರೆಗೂ ಕೂಡ ಕಾಡುತ್ತದೆ. ಅದಕ್ಕೆ ಅಮೃತಬಳ್ಳಿಯ ಉಪಯೋಗ ಬೆಸ್ಟ್‌ ಮನೆಮದ್ದಾಗಿದೆ. ಹೀಗಾಗಿ ಸಂಧಿವಾತ ಅಥವಾ ಈ ರೀತಿ ಕಾಯಿಲೆಗಳಿಂದ ಕೀಲು, ಸಂಧುಗಳಲ್ಲಿ ನೋವಿದ್ದರೆ ಅದನ್ನು ಶಮನ ಮಾಡಲು ಅಮೃತ ಬಳ್ಳಿಯ ಕಷಾಯ, ಪುಡಿಯ ಬಳಕೆಯನ್ನು ಮಾಡಬಹುದಾಗಿದೆ.

​ಮಧುಮೇಹಿಗಳಿಗೆ ಒಳ್ಳೆಯದು

ದೇಹದಲ್ಲಿನ ರಕ್ತದ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಈ ಅಮೃತಬಳ್ಳಿ ಸಹಾಯ ಮಾಡುತ್ತದೆ. ಇದರಲ್ಲಿನ ಕಹಿ ಗುಣ ಅತಿಯಾದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಹೀಗಾಗಿ ಮಧುಮೇಹಿಗಳು ನಿಯಮಿತವಾಗಿ ಅಮೃತಬಳ್ಳಿಯನ್ನು ಬಳಕೆ ಮಾಡುತ್ತಿದ್ದರೆ ದೀರ್ಘಕಾಲಿಕ ರೋಗ ಮಧುಮೇಹವನ್ನು ಹತೋಟಿಯಲ್ಲಿಡಬಹುದಾಗಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಳ

ಈಗಂತೂ ಸಾಂಕ್ರಾಮಿಕ ಕಾಯಿಲೆಗಳ ಅಬ್ಬರ ಹೆಚ್ಚಾಗಿದೆ. ಅಲ್ಲದೆ ಮಳೆಗಾಲದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚು. ರೋಗ ನಿರೋಧಕ ಶಕ್ತಿ ಕಡಿಮೆಯಾದರೆ ಅಂತಹವರಿಗೆ ಬೇಗನೆ ಕಾಯಿಲೆಗಳು ಹರಡುತ್ತವೆ. ಹೀಗಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನೀವು ಅಮೃತಬಳ್ಳಿಯನ್ನು ಬಳಕೆ ಮಾಡಬಹುದು. ಅಮೃತಬಳ್ಳಿಯನ್ನು ತಾಜಾ ತಂದು ಕಷಾಯ ಮಾಡಬಹುದು. ಅಥವಾ ಅದರ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸುತ್ತಾ ಬಂದರೆ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ.

​ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ

ಕೆಲವೊಮ್ಮೆ ನಾವು ಸೇವಿಸುವ ಆಹಾರಗಳು ಸರಿಯಾಗಿ ಜೀರ್ಣವಾಗದೆ ಹೊಟ್ಟೆಯಲ್ಲಿ ಉಳಿದುಕೊಳ್ಳಬಹುದು. ಅಂತಹ ಸಂದರ್ಭದಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಉಂಟಾಗುತ್ತದೆ. ಗ್ಯಾಸ್ಟ್ರಿಕ್‌, ಪಿತ್ತ, ವಾಕರಿಕೆ, ಆಸಿಡಿಟಿಯಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇವೆಲ್ಲದಕ್ಕೂ ಅಮೃತಬಳ್ಳಿ ರಾಮಬಾಣವಾಗಿದೆ. ನಿಮಗೇನಾದರೂ ಅಜೀರ್ಣವಾಗಿದ್ದರೆ ಅಂತಹ ಸಂದರ್ಭದಲ್ಲಿ ಅಮೃತಬಳ್ಳಿಯ ಪುಡಿಯನ್ನು ಜೇನುತುಪ್ಪದೊಂದಿಗೆ ಸೇರಿಸಿ ಸೇವನೆ ಮಾಡಿ. ಬೇಗನೆ ಗುಣವಾಗುತ್ತದೆ.

ಸೇವನೆ ಹೇಗೆ

ಅಮೃತಬಳ್ಳಿಯ ಪೌಡರ್‌ನ್ನು ಸೇವನೆ ಮಾಡಬಹುದು. ಅಂದರೆ ಬೆಳಗ್ಗೆ ಮತ್ತು ಸಂಜೆ 1 ಗ್ರಾಂನಷ್ಟು ಅಮೃತಬಳ್ಳಿಯ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವನೆ ಮಾಡಬಹುದು. ಅಮೃತಬಳ್ಳಿಯ ಪೌಡರ್‌ನ್ನು 2 ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಅದು ಅರ್ಧ ಗ್ಲಾಸ್‌ ನೀರು ಆಗುವಷ್ಟು ಕುದಿಸಬೇಕು. ಆ ನೀರನ್ನು ಕಾಲು ಲೋಟದಷ್ಟು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೇವನೆ ಮಾಡಬಹುದು. ಅಮೃತಾರಿಷ್ಟ ಅಥವಾ ಅಮೃತಬಳ್ಳಿಯ ಎಲೆಯನ್ನು ಒಂದು ಚೂರು ಸೇವನೆ ಮಾಡಬಹುದು.