ನೂರಾರು ಯುದ್ಧಗಳನ್ನು ಗೆದ್ದು ಸಾಮ್ರಾಜ್ಯ ವಿಸ್ತರಿಸಿ ‘ದಿ ಗ್ರೇಟ್’ ಎಂದು ಕರೆಸಿಕೊಂಡ ಅಲೆಕ್ಸಾಂಡರ್ ತನ್ನ ದಂಡಯಾತ್ರೆಯಿಂದ ಮರಳುತ್ತಿದ್ದಾಗಲೇ ಕಾಯಿಲೆ ಬಿದ್ದುಬಿಟ್ಟ. ರೋಗ ದೇಹವನ್ನೆಲ್ಲವ್ಯಾಪಿಸಿ ಗುಣಪಡಿಸಲಾರದ ಹಂತಕ್ಕೆ ಬಂದು ಮರಣಶಯ್ಯೆಯ ಮೇಲೆ ಮಲಗಿದ.
ಸಾವನ್ನು ಎದುರು ನೋಡುತ್ತಿದ್ದ ಅಲೆಕ್ಸಾಂಡರ್ ತನ್ನ ಸೇನಾಧಿಪತಿಗಳನ್ನು ಕರೆದು ಹೀಗೆಂದನಂತೆ: ‘ನಾನು ಇನ್ನೇನು ಕೊನೆಯುಸಿರು ಎಳೆಯಲಿದ್ದೇನೆ. ನನ್ನ ಮೂರು ಆಸೆಗಳನ್ನು ದಯಮಾಡಿ ಈಡೇರಿಸಿ. ಮೊದಲನೆಯದು, ನನ್ನ ಶವಪೆಟ್ಟಿಗೆಯನ್ನು ಈವರೆಗೆ ನನಗೆ ಚಿಕಿತ್ಸೆ ನೀಡಿದ ವೈದ್ಯರುಗಳೇ ಹೊತ್ತೊಯ್ಯಬೇಕು. ಎರಡನೆಯದು, ನನ್ನ ಶವಯಾತ್ರೆ ಸಾಗುವ ದಾರಿಯಲ್ಲಿನನ್ನ ಭಂಡಾರದಲ್ಲಿರುವ ಮುತ್ತುರತ್ನಗಳನ್ನೆಲ್ಲಚೆಲ್ಲಿರಬೇಕು. ಮೂರನೆಯದು, ನನ್ನ ಎರಡೂ ಕೈಗಳನ್ನು ಶವಪೆಟ್ಟಿಗೆಯಿಂದ ಆಚೆ ಕಾಣುವಂತೆ ಹೊರಚಾಚಿಸಿ ಇಟ್ಟಿರಬೇಕು’.
ದುಃಖಭರಿತರಾಗಿದ್ದ ಮಂತ್ರಿ ಸೇನಾಧಿಪತಿಗಳು, ‘ತಮ್ಮ ಆಸೆಗಳನ್ನು ಖಂಡಿತ ಈಡೇರಿಸುವೆವು ದೊರೆ. ಆದರೆ ಇವುಗಳ ಮರ್ಮವೇನು ತಿಳಿಯಲಿಲ್ಲವಲ್ಲ?’ ಎಂದು ಕೇಳಿದರಂತೆ. ಪ್ರಾಣೋತ್ಕ್ರಮಣದ ಸ್ಥಿತಿಯಲ್ಲೂಅಲೆಕ್ಸಾಂಡರ್ ವಿವರಿಸಿದನಂತೆ: ‘ನನಗೆ ಚಿಕಿತ್ಸೆ ನೀಡಿದ ವೈದ್ಯರುಗಳೇ ನನ್ನ ಶವಪೆಟ್ಟಿಗೆ ಹೊರುವುದನ್ನು ನೋಡಿ ಮರಣ ಸಮೀಪಿಸಿದವನನ್ನು ವಾಸ್ತವವಾಗಿ ಯಾವ ವೈದ್ಯನೂ ಉಳಿಸಲಾರ ಎಂಬುದನ್ನು ಪ್ರಪಂಚ ಅರಿಯಲಿ. ಶವಯಾತ್ರೆಯ ದಾರಿಯಲ್ಲಿಚೆಲ್ಲಿರುವ ಮುತ್ತು ರತ್ನಗಳನ್ನು ನೋಡಿ ನಾನು ಈವರೆಗೆ ಗುಡ್ಡೆಹಾಕಿದ ಯಾವ ಸಂಪತ್ತೂ ನನ್ನ ಪ್ರಾಣ ಉಳಿಸಲಿಲ್ಲಎಂಬುದನ್ನು ಜನ ತಿಳಿಯಲಿ. ಶವಪೆಟ್ಟಿಗೆಯಿಂದ ಹೊರಚಾಚಿರುವ ಕೈಗಳನ್ನು ನೋಡಿ ಇಷ್ಟೆಲ್ಲಸಾಧಿಸಿದ ಅಲೆಕ್ಸಾಂಡರ್ ಕೊನೆಗೆ ಬರಿಗೈಯಲ್ಲೇ ಮರಳಿದ ಎಂಬುದನ್ನು ಜಗತ್ತು ಅರ್ಥಮಾಡಿಕೊಳ್ಳಲಿ’.
ಹೌದು, ಮನುಷ್ಯ ತಾನೇನೇ ಸಾಧಿಸಿದ್ದೇನೆ ಅಂದುಕೊಂಡರೂ ಅಂತಿಮವಾಗಿ ಯಾವುದೂ ಉಳಿಯುವುದಿಲ್ಲ. ತನ್ನೊಳಗಿನ ಅಹಂ ಕರಗದ ಹೊರತು ತಾನೇನು, ತನ್ನ ಬದುಕಿನ ಉದ್ದೇಶವೇನು ಎಂಬುದು ಅರ್ಥವಾಗುವುದೂ ಇಲ್ಲ. ತಾವು ಯಾರನ್ನೋ ಸೋಲಿಸಿದ್ದೇವೆ, ಏನನ್ನೋ ಸಾಧಿಸಿದ್ದೇವೆ, ಮುಂದೇನೋ ಮಹತ್ತರವಾದದ್ದನ್ನು ಪಡೆಯಲಿದ್ದೇವೆ ಎಂದು ಬೀಗುವವರು ಬಹಳ. ಕೊನೆಗೆ ತಮಗೂ ಅಲೆಕ್ಸಾಂಡರನ ಗತಿಯೇ ಎಂಬ ಪ್ರಜ್ಞೆಯಿರುವವರು ವಿರಳ. ಆ ಪ್ರಜ್ಞೆಯಿರುವವರ ಒಳಗೆ ಅಹಂಕಾರ ಬೆಳೆಯುವುದಾದರೂ ಹೇಗೆ?
ಆಶಾಪಾಶಶತೈರ್ಬದ್ಧಾಃ ಕಾಮಕ್ರೋಧಪರಾಯಣಾಃ || ಈಹಂತೇ ಕಾಮಭೋಗಾರ್ಥಮನ್ಯಾಯೇನಾರ್ಥಂಚಯಾನ್ ||
ಎನ್ನುತ್ತಾನೆ ಗೀತಾಚಾರ್ಯ. ಆಶಾರೂಪಿ ನೂರಾರು ಹಗ್ಗಗಳಿಂದ ಬಂಧಿಸಲ್ಪಟ್ಟು, ಕಾಮ-ಕ್ರೋಧಾದಿಗಳ ಪರಾಯಣರಾಗಿ ವಿಷಯಭೋಗಗಳ ಪೂರೈಕೆಗಾಗಿ ಜನರು ಅನ್ಯಾಯದಿಂದ ಹಣವೇ ಮುಂತಾದ ವಸ್ತುಗಳನ್ನು ಕೂಡಿಡಲು ಪ್ರಯತ್ನಿಸುತ್ತಾರೆ. ಆಮೇಲೆ ತಾನೇ ಶ್ರೀಮಂತ, ತಾನೇ ಬಲಾಢ್ಯ, ತನ್ನ ಸಮಾನರು ಬೇರೆ ಯಾರೂ ಇಲ್ಲಎಂಬ ಮದವನ್ನು ಬೆಳೆಸಿಕೊಂಡು ಘೋರ ನರಕದಲ್ಲಿಬೀಳುತ್ತಾರೆ.
ಕೃಷ್ಣ ಮತ್ತೆ ಅರ್ಜುನನಿಗೆ ಹೇಳುತ್ತಾನೆ:
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾಃ |ಮಾಮಾತ್ಮ ಪರದೇಹೇಷು ಪ್ರದ್ವಿಷಂತೋಭ್ಯಸೂಯಕಾಃ ||
ಅಂದರೆ, ಅಹಂಕಾರ, ಬಲ, ದರ್ಪ, ಕಾಮ-ಕ್ರೋಧಾದಿ ಪರಾಯಣರೂ ಮತ್ತು ಪರನಿಂದಕರೂ ಆದ ಅವರು ತಮ್ಮ ಮತ್ತು ಇತರರೆಲ್ಲರ ದೇಹದಲ್ಲಿರುವ ಅಂತರ್ಯಾಮಿಯಾದ ನನ್ನನ್ನು ದ್ವೇಷಿಸುತ್ತಾರೆ.
ವಾಸ್ತವವಾಗಿ ತಮ್ಮೊಳಗನ್ನೇ ದ್ವೇಷಿಸುವ ಇಂತಹ ಮಂದಿ ಅಂತಿಮವಾಗಿ ತಮ್ಮನ್ನು ಅರಿಯುವ ಪ್ರಯತ್ನವನ್ನೇ ಮಾಡುವುದಿಲ್ಲ. ‘ಕಾಮ, ಕ್ರೋಧ ಹಾಗೂ ಲೋಭ ಈ ಮೂರು ವಿಧವಾದ ನರಕದ ದ್ವಾರವು ಆತ್ಮನನ್ನು ನಾಶಮಾಡುವವು ಅರ್ಥಾತ್ ಅಧೋಗತಿಗೆ ತಳ್ಳುವವು’ ಎಂದು ಎಚ್ಚರಿಸುತ್ತಾನೆ ಶ್ರೀಕೃಷ್ಣ.
ಇದನ್ನು ಅರ್ಥಮಾಡಿಕೊಂಡ ದಿನವೇ ಸಿದ್ಧಾರ್ಥನೂ ತನ್ನ ಸಕಲ ಸುಖಗಳನ್ನು ತೊರೆದು ಜ್ಞಾನೋದಯದ ಮಾರ್ಗ ಹುಡುಕಿ ಹೊರಟದ್ದು? ಕಾಯಿಲೆ, ಮುಪ್ಪು, ಸಾವು- ಈ ಮೂರು ಯಾವ ಮನುಷ್ಯನನ್ನೂ ಬಿಡಲಾರವು, ಎಲ್ಲರ ಬದುಕೂ ಒಂದು ದಿನ ಕೊನೆಯಾಗಲೇಬೇಕು ಎಂದ ಮೇಲೆ ಅಂತಹ ಬದುಕನ್ನು ಅಹಂಕಾರದಿಂದಲೇ ಕಳೆಯುವ ಬದಲು ಆತ್ಮಶೋಧನೆಯಲ್ಲಿಕಳೆಯುವುದು ಮೇಲಲ್ಲವೇ ಎಂದು ಅವನಿಗೆ ಅನಿಸಿದ್ದು ಆತನ ನಿಜವಾದ ಯಶಸ್ಸಿನ ಹಾದಿ ಆರಂಭವಾದ ಕ್ಷಣ.
‘ಅಹಂ ಎಂಬುದು ನಮ್ಮ ಕಣ್ಣಿಗೆ ಕವಿದ ಧೂಳು. ಈ ಧೂಳನ್ನು ತೊಲಗಿಸಿದರಷ್ಟೇ ನಮ್ಮನ್ನೂ ಪ್ರಪಂಚವನ್ನೂ ಸ್ಪಷ್ಟವಾಗಿ ನೋಡಿಕೊಳ್ಳಬಹುದು’ ಎಂದ ಬುದ್ಧ. ಧೂಳನ್ನಾದರೂ ತೊಳೆದುಕೊಳ್ಳಬಹುದು, ಆದರೆ ಅಹಂ ಧೂಳಿಗಿಂತಲೂ ಹೆಚ್ಚಾದ ಒಂದು ಭ್ರಮೆ. ಅದನ್ನೇ ಮಾಯೆ ಎಂದು ಕರೆದರು. ಮಾಯೆಯಿಂದ ಬಿಡಿಸಿಕೊಳ್ಳುವುದು ಬಲುಕಷ್ಟ. ಅಹಂನ ಮಾಯೆ ದೃಷ್ಟಿಯನ್ನು ಮಂದಗೊಳಿಸುವುದಷ್ಟೇ ಅಲ್ಲ, ಮನುಷ್ಯನನ್ನೇ ಸಂಪೂರ್ಣ ಕುರುಡನನ್ನಾಗಿಸಬಹುದು. ಅಂಧತ್ವ ಶಾಪ ಅಲ್ಲ, ಆದರೆ ಒಳಗಣ್ಣನ್ನು ಕಳೆದುಕೊಳ್ಳುವುದು ಮಾತ್ರ ಮಹಾಶಾಪ.
ಪಕ್ಕದ ಸಹಪ್ರಯಾಣಿಕನೊಂದಿಗೆ ಒಂದಿಂಚು ಹೊಂದಾಣಿಕೆ ಮಾಡಿಕೊಳ್ಳಲಾಗದ, ತನ್ನೆದುರಿನ ಸಣ್ಣ ವಾಹನಕ್ಕೆ ಸಂಯಮದಿಂದ ದಾರಿ ಬಿಟ್ಟುಕೊಡಲಾಗದ ಭೂಪ ಪ್ರಯಾಣದುದ್ದಕ್ಕೂ ಕಾಣಸಿಗುವ ದೇವಸ್ಥಾನಗಳಿಗೆಲ್ಲಕೈಮುಗಿಯುತ್ತಾ ಸಾಗುತ್ತಾನೆ. ಎಂತಹ ವಿಪರ್ಯಾಸ!
‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣುಗಳ ಗುಡಿಯೊಳಗೆ/ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನನ್ನೊಳಗೆ‘ ಎಂದು ಆತ್ಮಶೋಧನೆ ಮಾಡಿಕೊಳ್ಳುತ್ತಾರೆ ಕವಿ ಜಿಎಸ್ಸೆಸ್. ತನ್ನೊಳಗಿನ ಅಂಧಕಾರವನ್ನು ನೀಗಿಸಿಕೊಳ್ಳದೆ ಯಾವ ದೇವರ ಮೊರೆಹೊಕ್ಕರೂ ಆತನ ಸಾಮಿಪ್ಯ ಅರಿವಿಗೆ ಬಾರದು. ತೇನವಿನಾ ತೃಣಮಪಿ ನ ಚಲತಿ – ನೀನಿಲ್ಲದೆ ಒಂದು ಹುಲ್ಲುಕಡ್ಡಿಯೂ ಚಲಿಸದು, ನಾನೆಂಬುದು ಈ ಜಗತ್ತಿನಲ್ಲಿಏನೂ ಅಲ್ಲಎಂದು ಅರ್ಥ ಮಾಡಿಕೊಂಡವನಿಗೆ ಮುಂದಿನ ದಾರಿ ಸುಗಮ.
ನೀನು ಸ್ವರ್ಗಕ್ಕೆ ಹೋಗಬಲ್ಲೆಯಾ? ಎಂದು ಕೇಳಿದರಂತೆ ಶಿಷ್ಯ ಕನಕದಾಸರನ್ನು ಗುರುಗಳಾದ ವ್ಯಾಸರಾಯರು. ‘ನಾನು ಹೋದರೆ ಹೋದೇನು’ ಎಂದು ಉತ್ತರಿಸಿದರಂತೆ ಕನಕದಾಸರು. ನಾನು ಎಂಬುದನ್ನು ಕಳೆದುಕೊಳ್ಳುವುದೇ ಸಾಧನೆಯ ಆರಂಭ.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.