ಮನೆ ರಾಜ್ಯ ಕಾಡಾನೆ ದಾಳಿಗೆ ಬಲಿಯಾದ ಕಾರ್ಮಿಕನ ಶವವಿಟ್ಟು ಪ್ರತಿಭಟನೆ: ಲಾಠಿ ಪ್ರಹಾರ

ಕಾಡಾನೆ ದಾಳಿಗೆ ಬಲಿಯಾದ ಕಾರ್ಮಿಕನ ಶವವಿಟ್ಟು ಪ್ರತಿಭಟನೆ: ಲಾಠಿ ಪ್ರಹಾರ

0

ಚಿಕ್ಕಮಗಳೂರು(Chikkamagaluru): ಮೂಡಿಗೆರೆ ತಾಲ್ಲೂಕಿನ ಊರುಬಗೆ ಸಮೀಪ ಕಾಡಾನೆ ದಾಳಿಗೆ ಬಲಿಯಾದ ಕಾರ್ಮಿಕ ಅರ್ಜುನ್‌ ಶವವನ್ನು ಶುಕ್ರವಾರ ಅರಣ್ಯ ಕಚೇರಿ ಮುಂದೆ ಇಟ್ಟು, ಕಚೇರಿ ಮುತ್ತಿಗೆ ಹಾಕಲು ಮುಂದಾದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಕಾರ್ಮಿಕನ ಸಾವಿಗೆ ಕಾರಣವಾದ ಆನೆಯನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಪ್ರತಿಭಟನಾಕಾರರು ಮೂಡಿಗೆರೆ – ಬೇಲೂರು ರಸ್ತೆಯ ಅರಣ್ಯ ಕಚೇರಿ ಬಳಿ ಮಧ್ಯಾಹ್ನ ಜಮಾಯಿಸಿದರು.

ಈ ಸಂದರ್ಭದಲ್ಲಿ ರಸ್ತೆಯಲ್ಲಿ ಕೆಲಕಾಲ ಸಂಚಾರ ಬಂದ್‌ ಆಗಿತ್ತು. ಸ್ಥಳೀಯರು, ರೈತ ಸಂಘ, ಬೆಳೆಗಾರರ ಸಂಘದವರು ಪಾಲ್ಗೊಂಡಿದ್ದರು.

ಈ ಸಂದರ್ಭ ಅರಣ್ಯ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿದರು. ಅರಣ್ಯ ಕಚೇರಿ ಆವರಣದ ಗೇಟು ತೆಗೆದು ಒಳಕ್ಕೆ ನುಗ್ಗಿದರು. ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಮುಂದಾದರು. ಪರಸ್ಪರ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಪ್ರತಿಭಟನಾಕಾರರು ಕಚೇರಿಯೊಳಕ್ಕೆ ಮುತ್ತಿಗೆ ಹಾಕದಂತೆ ತಡೆಯಲು ಪೊಲೀಸರು ಅಡ್ಡಲಾಗಿ ವಾಹನ ನಿಲ್ಲಿಸಿದರು. ವಾಹನವನ್ನು ದಾಟಿಕೊಂಡು ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಪ್ರತಿಭಟನಾಕಾರರನ್ನು ಚದುರಿಸಿದರು.

ಸೆ. 8ರಂದು ಊರುಬಗೆಯ ಕಾರ್ಮಿಕ ಅರ್ಜುನ್‌ ಕೂಲಿ ಕಾಯಕ ಮುಗಿಸಿ ಸಂಜೆ ಮನೆಗೆ ವಾಪಸಾಗುವಾಗ ಕಾಡಾನೆ ಅಟ್ಟಿಸಿಕೊಂಡು ಹೋಗಿ ತುಳಿದು ಹೊಸಕಿ ಹಾಕಿತ್ತು.