ಮನೆ ರಾಜಕೀಯ ಕಾರಂಜಾ ಮುಳುಗಡೆ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ನೀಡಲು ಕಾನೂನಾತ್ಮಕವಾಗಿ ಅವಕಾಶ ಇಲ್ಲ: ಗೋವಿಂದ ಕಾರಜೋಳ

ಕಾರಂಜಾ ಮುಳುಗಡೆ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ನೀಡಲು ಕಾನೂನಾತ್ಮಕವಾಗಿ ಅವಕಾಶ ಇಲ್ಲ: ಗೋವಿಂದ ಕಾರಜೋಳ

0

ಬೆಂಗಳೂರು(Bengaluru): ಬೀದರ್ ಜಿಲ್ಲೆಯಲ್ಲಿ ಕಾರಂಜಾ ಮುಳುಗಡೆ ಸಂತ್ರಸ್ತರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಈಗ ಹೆಚ್ಚುವರಿಯಾಗಿ ನೀಡಲು ಬರುವುದಿಲ್ಲ. ಪರಿಹಾರ ನೀಡಲು ಕಾನೂನಾತ್ಮಕವಾಗಿ ಯಾವುದೇ ಅವಕಾಶ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

 ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಅರವಿಂದ್‌ ಕುಮಾರ್‌ ಅವರು ಕೇಳಿದ ಕಾರಂಜಾ ಮುಳುಗಡೆ ಪರಿಹಾರಕ್ಕೆ ಒತ್ತಾಯಿಸಿ ರೈತರು 80 ದಿನಗಳಿಂದ ಧರಣಿ ನಡೆಸುತ್ತಿದ್ದರು ಸರ್ಕಾರ ಸ್ಪಂದಿಸುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ 69 ಕೋಟಿ ರೂಪಾಯಿ ಪರಿಹಾರ ನೀಡಿದ್ದೇವೆ. ಇನ್ನೂ ಕೆಲವು ರೈತರು ಕೋರ್ಟ್‌ಗೆ ಹೋಗಿಲ್ಲ. ಕೋರ್ಟ್‌ಗೆ ಹೋಗದೆ ಇರುವ ರೈತರು ಸರ್ಕಾರಕ್ಕೆ ಅರ್ಜಿ ಹಾಕಿದವರಿಗೂ ಕೂಡ ಪರಿಹಾರ ಕೊಡಲು ಅವಕಾಶ ಇದೆ. ಆದರೆ, ಅವರು ಮೂರು ತಿಂಗಳ ಒಳಗೆ ಅರ್ಜಿ ಹಾಕಿಕೊಂಡಿಲ್ಲ. ಈಗ 25-30 ವರ್ಷದ ನಂತರ ಧರಣಿ ಕೂತರೇ ಕೊಡಲು ಸಾಧ್ಯವಾ ಎಂದು ಪ್ರಶ್ನಿಸಿದರು.

 25 ಜೂನ್ 2014ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ರು, ಅರವಿಂದ್ ಕುಮಾರ್‌ಅವರ ಪಕ್ಷದ ಸರ್ಕಾರವೇ ಇತ್ತು. ಪರಿಹಾರ ಕೊಡಲು ಅವಕಾಶ ಇಲ್ಲ ಎಂಬುದಾಗಿ ಸಂಪುಟದಲ್ಲಿ ನಿರ್ಣಯವಾಗಿದೆ. ಯುಕೆಪಿ ಮಾದರಿಯಲ್ಲಿ ಕೊಡ್ಬೇಕು ಅಂತ ಇವರ ಹೋರಾಟ ಇದೆ. ಯುಕೆಪಿ ಮಾದರಿಯಲ್ಲಿ ಪರಿಹಾರ ಕೊಡುವುದಕ್ಕೆ ಅವಕಾಶ ಇಲ್ಲ. ಯುಕೆಪಿ ಯೋಜನೆಗೆ ವಿಶ್ವಬ್ಯಾಂಕ್ ನೆರವು ತೆಗೆದುಕೊಂಡಿದ್ದೇವೆ. ವಿಶ್ವ ಬ್ಯಾಂಕ್‌ನವರ ಕಂಡಿಷನ್ ಇದೆ. ಯಾವ ರೀತಿ ಪರಿಹಾರ ಕೊಡ್ಬೇಕು ಎಂಬ ಕಂಡಿಷನ್ ಇದೆ. ಆ ಕಂಡಿಷನ್ ಒಪ್ಪಿಕೊಂಡ ನಂತರ ಅವರು ಸರ್ಕಾರಕ್ಕೆ ಸಾಲ ಕೊಟ್ಟಿದ್ದಾರೆ. ಅದಕ್ಕಾಗಿ ಅದಕ್ಕೂ ಇದಕ್ಕೆ ಕಂಪೇರ್ ಮಾಡಲು ಬರಲ್ಲ ಎಂದರು.

 ರೈತರು ಧರಣಿ ಮಾಡ್ತಾ ಇರುವುದಕ್ಕೆ ಕೊಡಲು ಸಾಧ್ಯವಿಲ್ಲ. 30-40. ವರ್ಷ ಆಗಿದೆ ಈ ಪ್ರಾಜೆಕ್ಟ್ ಶುರು ಮಾಡಿ. 69 ಕೋಟಿ ಪರಿಹಾರ ತೆಗೆದುಕೊಂಡಿದ್ದಾರೆ. ಇನ್ನಾ ಒಂದು ರೂಪಾಯಿ ಕೊಡಲ ಸಾಧ್ಯವಿಲ್ಲ. ಯಾವುದೇ ಬೇಡಿಕೆ ಪರಿಗಣಿಸಲು ಸಾಧ್ಯವಿಲ್ಲ. ಹೈಕೋರ್ಟ್ ಸಹ ಇದನ್ನು ರಿಜೆಕ್ಟ್ ಮಾಡಿದೆ. ಅಂತರಾಷ್ಟ್ರೀಯ ಕೋರ್ಟ್‌ಗೆ ಹೋಗ್ಬೇಕು ಅಷ್ಟೇ. ಇಂತಹ ಬೇಡಿಕೆಗಳನ್ನ ತರುವಾಗ ಸಂಪೂರ್ಣ ತಿಳಿದು ಮೇಲ್ಮನೆ ತರುವಂತೆ ಸಚಿವರು ಸೂಚಿಸಿದರು.

ಅನುದಾನದ ಲಭ್ಯತೆ ಮೇಲೆ ಯೋಜನೆ ಅನುಷ್ಠಾನ

ಇನ್ನು, ಬಳ್ಳಾರಿ ಗ್ರಾಮಾಂತರದಲ್ಲಿ ಕುಡಿಯುವ ನೀರಿನ ಬಗ್ಗೆ ವೈಎಂ ಸತೀಶ್ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಗೋವಿಂದ ಕಾರಜೋಳ, ಕುಡಿಯುವ ನೀರಿನ ಯೋಜನೆ ಕೇಳಿದ್ದಾರೆ. ಜಲಸಂಪನ್ಮೂಲ ಇಲಾಖೆ ಇರುವುದು ನೀರಾವರಿ ಸೌಲಭ್ಯ ಒದಗಿಸಲು ಎಂಬುದು ಗಮನದಲ್ಲಿರಲಿ. ಯೋಜನಾ ವೆಚ್ಚ 60 ಕೋಟಿ ರೂ. ಇತ್ತು, ಅನುಮೋದನೆ ಆಗಿತ್ತು ಅಂತ ಹೇಳ್ತಾರೆ. ಆದರೆ, ಯೋಜನೆ ಅನುಮೋದನೆಯೇ ಆಗಿಲ್ಲ ಎಂದರು.

ಈ ಯೋಜನೆ 2019-2020 ಸಾಲಿನ ಬಜೆಟ್‌ನಲ್ಲಿ ಘೋಷಣೆ ಆಯ್ತು. ಯೋಜನೆಗಳು 2013ರಿಂದ ಇವತ್ತಿನವರೆಗೂ ಘೋಷಣೆ ಆಗ್ತಾನೇ ಇದಾವೆ. ನಮ್ಮ ಬಜೆಟ್ ಗೂ ನಾವು ಮಂಜೂರು ಮಾಡುವ ಕಾಮಗಾರಿಗೂ ಎಲ್ಲಿಯೂ ಸಂಬಂಧ ಇಲ್ಲ. ಇವತ್ತಿನ ಕಾರ್ಯಭಾರ 1 ಲಕ್ಷ 2 ಸಾವಿರ ಕೋಟಿ ರೂ.ಗೂ ಹೆಚ್ಚಿದೆ. ನಮಗೆ ಬಜೆಟ್‌ನಲ್ಲಿ ಸಿಗ್ತಾ ಇರುವುದು 18, 19 ಸಾವಿರ ಕೋಟಿ ಮಾತ್ರ. ಹೀಗಾಗಿ ಅನುದಾನದ ಲಭ್ಯತೆ ಆಧಾರದ ಮೇಲೆ ಅಂತ ಹೇಳ್ದೆ. ಹಣ  ಇದ್ರೆ ನಾಳೆನೇ ಮಾಡಿಸುತ್ತೇನೆ ಎಂದು ಹೇಳಿದರು.

 ಈ ಪ್ರಾಜೆಕ್ಟ್ ಬಜೆಟ್ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ಕ್ರಿಯಾ ಯೋಜನೆಗೆ ಸೇರಿ ಅನುದಾನ ಹಂಚಿಕೆಯಾಗಿ ಅನುಮೋದನೆ ಆಗ್ಲೇ ಇಲ್ಲ, ಇವತ್ತಿನವರೆಗೂ ಆಗಿಲ್ಲ. ಆಗಸ್ಟ್ 4 ತಾರೀಖಿಗೆ ನಮ್ಮ ನಿಗಮ 94ನೇ ಸಭೆಯಲ್ಲಿ ಕ್ಲಿಯರೆನ್ಸ್‌ ಸಲುವಾಗಿ ತೆಗದುಕೊಂಡು ಬಂದೆ‌. ಈಗ ಬೋರ್ಡ್ ಕ್ಲಿಯರೆನ್ಸ್ ಕೊಟ್ಟಿದ್ದೇವೆ. ಇನ್ಮೇಲೆ ಫೈನಾನ್ಸ್‌ನಿಂದ ಅನುದಾನ ಹಂಚಿಕೆಯಾಗ್ಬೇಕು. ಮುಂದಿನ  ಪ್ರಕ್ರಿಯೆ ಶುರುವಾಗ್ಬೇಕು, ಅಮೇಲೆ ಟೆಂಡರ್ ಕರೆದು  ಈ ಕಾಮಗಾರಿಯನ್ನ ಕೈಗೆತ್ತಿಕೊಳ್ಳಬೇಕು. ಅನುದಾನ ಸಿಕ್ಕ ಮೇಲೆಯೇ ಆಗುವುದು, ಬೇರೆ ಏನು ಮಾಡಲು ಸಾದ್ಯವಿಲ್ಲ ಎಂದು ತಿಳಿಸಿದರು.