ಮನೆ ರಾಜ್ಯ ಕೆಂಪೇಗೌಡ ಪ್ರತಿಮೆ: ಮುಡುಕುತೊರೆಯಲ್ಲಿ ಶ್ರೀಪುರುಷನ ಸಮಾಧಿಯಿಂದ ಮೃತ್ತಿಕೆ ಸಂಗ್ರಹ

ಕೆಂಪೇಗೌಡ ಪ್ರತಿಮೆ: ಮುಡುಕುತೊರೆಯಲ್ಲಿ ಶ್ರೀಪುರುಷನ ಸಮಾಧಿಯಿಂದ ಮೃತ್ತಿಕೆ ಸಂಗ್ರಹ

0

ತಲಕಾಡು(Talakadu): ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣದ ಹಿನ್ನೆಲೆಯಲ್ಲಿ  ತಲಕಾಡು ಗಂಗ ವಂಶದ ಖ್ಯಾತ ಅರಸ ಶ್ರೀಪುರುಷನ ಸಮಾಧಿ ಸ್ಥಳವಿರುವ ತಾಲ್ಲೂಕಿನ ಮುಡುಕುತೊರೆಯಲ್ಲಿ ಮಂಗಳವಾರ ಪವಿತ್ರ ಮೃತ್ತಿಕೆ ಸಂಗ್ರಹವು ಸಾವಿರಾರು ಜನರ ಸಮ್ಮುಖದಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಮಾತನಾಡಿದ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ,  ಮೈಸೂರು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದರು.

ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ಜಗತ್ತಿನಲ್ಲಿ ಅಗ್ರಸ್ಥಾನದಲ್ಲಿದೆ. ಕೆಂಪೇಗೌಡರ ನಿಮಿತ್ತವಾಗಿ ಇಡೀ ಕರ್ನಾಟಕವನ್ನು ಬೆಸೆಯುವ ಅರ್ಥಪೂರ್ಣ ಅಭಿಯಾನ ನಡೆಸಲಾಗುತ್ತಿದೆ. ಪ್ರಪಂಚದ ಯಾವ ನಗರದಲ್ಲೂ ಅದರ ಸ್ಥಾಪಕನ 108 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಿಲ್ಲ. ನ.11ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಅನಾವರಣ ಗೊಳ್ಳಲಿರುವ ಕಂಚಿನ ಪ್ರತಿಮೆಯು ರಾಜ್ಯದ ಮಕುಟಮಣಿ ಆಗಲಿದೆ ಎಂದು ಸಚಿವ ಅಶ್ವತ್ಥನಾರಾಯಣ ನುಡಿದರು.

ಗಂಗರ ಅರಸ ಶ್ರೀಪುರುಷನ ಸಮಾಧಿಯನ್ನು ಕೂಡ ಸರಕಾರದ ವತಿಯಿಂದ ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಜತೆಗೆ ನ.11ರ ಕಾರ್ಯಕ್ರಮಕ್ಕೆ ಈ ಭಾಗದಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಅವರು ಆಮಂತ್ರಿಸಿದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ,  ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮುಚ್ಚಯದಲ್ಲಿ ಕೆಂಪೇಗೌಡರ 108 ಅಡಿ ಪ್ರತಿಮೆ ಸ್ಥಾಪಿಸುವ ಮೂಲಕ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲಾಗುತ್ತಿದೆ. ಇದಕ್ಕಾಗಿ ಅಶ್ವತ್ಥನಾರಾಯಣ ಅವರು ಪಟ್ಟಿರುವ ಶ್ರಮ ಅಪಾರವಾಗಿದೆ. ಜತೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಯೋಜನೆಯ ಕಲ್ಪನೆಗೆ ಉದಾರವಾಗಿ ಸ್ಪಂದಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ಮುಂದೆ ಬೆಂಗಳೂರಿಗೆ ಬಂದಿಳಿಯುವವರಿಗೆ ತಕ್ಷಣವೇ ಕೆಂಪೇಗೌಡರ ಮಹೋನ್ನತ ವ್ಯಕ್ತಿತ್ವವು ಗೊತ್ತಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷೆ ಮಂಗಳಾ, ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಪಿ. ಉಮೇಶ್, ಮದ್ದೂರು ಸ್ವಾಮಿ, ಡಾ.ಭಾರತಿಶಂಕರ್, ಡಾ.ರವೀಂದ್ರ, ಚಂದಗಾಲು ಶಿವಣ್ಣ, ವಸಂತ್, ತಲಕಾಡು ಚಿಕ್ಕರಂಗೇಗೌಡ ಮುಂತಾದವರು ಉಪಸ್ಥಿತರಿದ್ದರು.