ಬೆಂಗಳೂರು(Bengaluru): ಬಿಜೆಪಿ ಪಕ್ಷದ ನೀತಿ ನಿಯಮದಂತೆ ರಾಷ್ಟ್ರೀಯ ಅಧ್ಯಕ್ಷರ ನೇಮಕ ನಡೆಯುತ್ತದೆ. ಜೆಡಿಎಸ್ ಪಕ್ಷದಿಂದ ವಲಸೆ ಬಂದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ಸಿನ ಅಸಲಿ ಕಥೆ ತಿಳಿದಿದೆಯೇ? ಸುಮಾರು 137 ವರ್ಷ ಇತಿಹಾಸವಿರುವ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷೀಯ ಹುದ್ದೆಗೆ ಕೇವಲ 6 ಬಾರಿ ಮಾತ್ರ ಚುನಾವಣೆ ನಡೆದಿದ್ದೇಕೆ? ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ಸಿದ್ದರಾಮಯ್ಯ ಅವರು ತಮ್ಮ ಟ್ವೀಟ್ ನಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಚುನಾವಣೆ ಮೂಲಕ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಪಕ್ಷದಲ್ಲಿ ಎಂದಾದರೂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆಯಾ? ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ, ಬಿಜೆಪಿಯಲ್ಲಿ ಇದೆಯೇ? ಎಂದು ಪ್ರಶ್ನೆ ಮಾಡಿದ್ದರು.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಬರೋಬ್ಬರಿ 22 ವರ್ಷಗಳ ಬಳಿಕ ಅಂದರೆ 2022 ರಲ್ಲಿ ಭಾರತೀಯರೊಬ್ಬರನ್ನು ಕಾಂಗ್ರೆಸ್ ತನ್ನ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದೆ. ಕಾಂಗ್ರೆಸ್ ಕೊನೆಯ ಎರಡು ಅಧ್ಯಕ್ಷರನ್ನು ಬದಲಾಯಿಸುವ ವೇಳೆಯೊಳಗೆ, ಬಿಜೆಪಿ ಪಕ್ಷದಲ್ಲಿ 10 ಅಧ್ಯಕ್ಷರು ಕಾರ್ಯ ನಿರ್ವಹಿಸಿದ್ದಾರೆ. ಯಾವ ಪಕ್ಷದ ಆಂತರಿಕ ಪ್ರಜಾಪ್ರಭುತ್ವ ಹೆಚ್ಚಿದೆ?‘ ಎಂದು ಪ್ರಶ್ನಿಸಿದೆ.
‘2000 ದಿಂದ 2022 ರವರೆಗಿನ ಸೋನಿಯಾ ಗಾಂಧಿ ಅವಧಿಯಲ್ಲಿ ರಾಹುಲ್ ಗಾಂಧಿ ಚುನಾವಣೆಯಿಲ್ಲದೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಹೇಗೆ? ನಕಲಿ ಗಾಂಧಿ ಪರಿವಾರಕ್ಕಾದರೇ ‘ಅಧ್ಯಕ್ಷರ ನೇಮಕ‘ ಇತರರಿಗಾದರೆ ‘ಚುನಾವಣೆ‘, ಇದು ನಿಮ್ಮ ನೀತಿಯೇ?‘ ಎಂದು ಬಿಜೆಪಿ ಸಿದ್ಗರಾಮಯ್ಯ ಅವರಿಗೆ ಸವಾಲೆಸೆದಿದೆ.‘1978 ರಿಂದ 1983 ರವರೆಗೆ ಇಂದಿರಾ ಅಧ್ಯಕ್ಷೆಯಾಗಿದ್ದು ಹೇಗೆ? ಸೋನಿಯಾ ಗಾಂಧಿ 1998 ರಲ್ಲಿ ಅಧ್ಯಕ್ಷರಾಗಿದ್ದು ಸ್ವಯಂ ನೇಮಕಾತಿಯೋ ಅಥವಾ ಚುನಾವಣೆ ಮೂಲಕವೋ? 2000 ದಿಂದ 2022 ರವರೆಗೆ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಚುನಾವಣೆ ನಡೆದಿಲ್ಲ. ಅಂದರೆ 22 ವರ್ಷಗಳವರೆಗೆ ನಿಮ್ಮ ಆಂತರಿಕ ಪ್ರಜಾಪ್ರಭುತ್ವ ಎಲ್ಲಿತ್ತು? ಎಂದು ಪ್ರಶ್ನೆ ಮಾಡಿದೆ.
ನೇತಾಜಿ ಮತ್ತು ಪುರುಷೋತ್ತಮ್ ಟಂಡನ್ ವಿರುದ್ಧ ತೆರೆಮರೆಯ ಕಸರತ್ತು ನಡೆಸಿ ಅವರನ್ನು ರಾಜಿನಾಮೆ ಕೊಡಿಸುವಂತೆ ಮಾಡಿದ ನೆಹರೂ ಯಾವುದೇ ಚುನಾವಣೆಯಿಲ್ಲದೆ ಮೂರು ಬಾರಿ ಅಧ್ಯಕ್ಷರಾದರು. ಆಗ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇರಲಿಲ್ಲವೇ? ಎಂದು ವಿಪಕ್ಷ ನಾಯಕನಿಗೆ ಬಿಜೆಪಿ ಪ್ರಶ್ನೆ ಕೇಳಿದೆ.
ಕಾಂಗ್ರೆಸ್ ಸ್ಥಾಪನೆಯಾದ ಬರೋಬ್ಬರಿ 50 ಕ್ಕೂ ಅಧಿಕ ವರ್ಷದ ಬಳಿಕ ಚುನಾವಣೆ ನಡೆದಿದ್ದೇಕೆ ಎನ್ನುವುದಕ್ಕೆ ನಿಮ್ಮಲ್ಲಿ ಉತ್ತರವಿದೆಯೇ? ಕಾಂಗ್ರೆಸ್ಸಿನ ಚುನಾಯಿತ ಮೊದಲ ಅಧ್ಯಕ್ಷ ನೇತಾಜಿಗೆ ನೆಹರೂ ಅವರು ಮಾನಸಿಕ ಹಿಂಸೆ ನೀಡಿದ್ದೇಕೆ ಎನ್ನುವುದಕ್ಕೆ ನಿಮ್ಮಲ್ಲಿ ಉತ್ತರವಿದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.














