ಮನೆ ರಾಜಕೀಯ ಚಂದ್ರಶೇಖರ್ ಸಾವು ಪ್ರಕರಣ: ಎಲ್ಲ ಕೋನಗಳಿಂದ ತನಿಖೆಯಾಗದೇ ಅಂತಿಮ ತೀರ್ಮಾನಕ್ಕೆ ಬರಬೇಡಿ- ಪೊಲೀಸರಿಗೆ ಸಿಎಂ ಸೂಚನೆ

ಚಂದ್ರಶೇಖರ್ ಸಾವು ಪ್ರಕರಣ: ಎಲ್ಲ ಕೋನಗಳಿಂದ ತನಿಖೆಯಾಗದೇ ಅಂತಿಮ ತೀರ್ಮಾನಕ್ಕೆ ಬರಬೇಡಿ- ಪೊಲೀಸರಿಗೆ ಸಿಎಂ ಸೂಚನೆ

0

ದಾವಣಗೆರೆ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಚಾರ್ಯ ಅವರ ಮನೆಗೆ ಇಂದು ಭೇಟಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಹೋದರ ಮಗನನ್ನು ಕಳೆದುಕೊಂಡಿರುವ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಶೇಖರ್‌ ಸಾವಿನ ಪ್ರಕರಣವನ್ನು ಎಲ್ಲ ಕೋನಗಳಿಂದ ತನಿಖೆ ನಡೆಸುವವರೆಗೆ ಪೊಲೀಸರು ಯಾವುದೇ ತೀರ್ಮಾನಕ್ಕೆ ಬರಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮರಣೋತ್ತರ ಪರೀಕ್ಷೆಯ ವರದಿ ಇನ್ನೆರಡು ದಿನಗಳಲ್ಲಿ ಬರಲಿದೆ. ಅದರ ಆಧಾರದಲ್ಲಿ ತನಿಖೆ, ವಿಧಿ ವಿಜ್ಞಾನ ವರದಿಯ ಆಧಾರದಲ್ಲಿ ತನಿಖೆ ಮತ್ತು ಪ್ರಕರಣದ ಮರುಸೃಷ್ಟಿಯ (ರಿಕ್ರಿಯೇಶನ್ ಆಫ್‌ ಸೀನ್ ಆಫ್‌ ಕ್ರೈಂ) ತನಿಖೆ ಆಗಬೇಕು. ಎಲ್ಲ ತನಿಖೆಗಳು ಮುಗಿದಾಗ ಪ್ರಕರಣದ ನಿಖರತೆ ಗೊತ್ತಾಗಲಿದೆ ಎಂದು ಹೇಳಿದರು.

ಈ ಪ್ರಕರಣ ನಡೆದ ಬಳಿಕ ಹಲವು ಪ್ರಶ್ನೆಗಳು, ಊಹಾಪೋಹಗಳು ಎದ್ದಿವೆ. ಎಲ್ಲದಕ್ಕೂ ತನಿಖೆ ಬಳಿಕ ಉತ್ತರ ಸಿಗಲಿದೆ. ಚಂದ್ರಶೇಖರ್‌ನ ಮೃತದೇಹ ಹಿಂಬದಿ ಸೀಟ್‌ನಲ್ಲಿ ಇದ್ದಿದ್ದು, ಕಾರಿನ ಎದುರು ಭಾಗ ಅಪಘಾತದಲ್ಲಿ ನಜ್ಜುಗುಜ್ಜಾಗಿದೆ ಎಂದು ಅಂದುಕೊಂಡರೂ ಹಿಂಬದಿಯಲ್ಲಿ ಹೇಗೆ ಹಾನಿಯಾಯಿತು ಎಂಬ ಪ್ರಶ್ನೆಗಳಿಂದಾಗಿ ಕೊಲೆ ನಡೆದಿದೆಯೇ ಎಂಬ ಅನುಮಾನ ಒಂದು ಕಡೆ ಇದೆ. ಆ ಸ್ಥಳದಲ್ಲಿ ಕಾರು ಗುದ್ದಿರುವ ಸನ್ನಿವೇಶ ಮುಂತಾದವುಗಳನ್ನು ನೋಡಿದಾಗ ಇದು ಅಪಘಾತ ಎಂಬ ಅನುಮಾನ ಇನ್ನೊಂದು ಕಡೆ ಇದೆ. ಈಗಲೇ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಸಚಿವರಾದ ಬೈರತಿ ಬಸವರಾಜ, ಗೋವಿಂದ ಕಾರಜೋಳ, ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌, ಎಂ.ಪಿ. ರೇಣುಕಾಚಾರ್ಯ, ಅವರ ಸಹೋದರ ಎಂ.ಪಿ. ರಮೇಶ್‌ ಮತ್ತಿತರರು ಇದ್ದರು.