ಮನೆ ಅಪರಾಧ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಮನೆಗೆ ಅತಿಕ್ರಮ ಪ್ರವೇಶ, ಗೃಹೋಪಯೋಗಿ ವಸ್ತುಗಳಿಗೆ ಹಾನಿ: ಸಾರಸ್ವತ್ ಕೋ-ಆಪರೇಟಿವ್ ಬ್ಯಾಂಕ್...

ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಮನೆಗೆ ಅತಿಕ್ರಮ ಪ್ರವೇಶ, ಗೃಹೋಪಯೋಗಿ ವಸ್ತುಗಳಿಗೆ ಹಾನಿ: ಸಾರಸ್ವತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್’ನ ಮ್ಯಾನೇಜರ್ ವಿರುದ್ಧ ದೂರು ದಾಖಲು

0

ಮೈಸೂರು(Mysuru): ಬ್ಯಾಂಕಿಗೆ ಹಣ ಜಮಾ ಮಾಡಿದ್ದರೂ ಸಹ ಹಿರಿಯರು ಮಾತ್ರವೇ ಮನೆಯಲ್ಲಿದ್ದ ವೇಳೆ ಮನೆಯನ್ನು ಜಪ್ತಿ ಮಾಡಿರುವ ಮಾಡಿರುವ  ಸಾರಸ್ವತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್’ನ ನಡವಳಿಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ನಮ್ಮ ಮನೆಗೆ ಅತಿಕ್ರಮಣ ಪ್ರವೇಶ ಮಾಡಿ, ಜೀವ ಬೆದರಿಕೆ ಹಾಕಿರುವುದು ಅಲ್ಲದೇ  ಮನೆಯ ವಸ್ತುಗಳನ್ನು ಎಸೆದು ಅಪಾರನಷ್ಟವನ್ನುಂಟು ಮಾಡಿರುವ  ಸಾರಸ್ವತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್’ನ ಮೈಸೂರು ಶಾಖೆಯ ಮ್ಯಾನೇಜರ್ ಗಂಗಾಧರ್ ಎಂ ಜಮಾಧರ್ ಹಾಗೂ ಬ್ಯಾಂಕಿನ ಇತರೆ ಸಿಬಂದ್ಧಿಗಳು,  ವಕೀಲರಾದ ಕುಮಾರ್ ಆರಾಧ್ಯ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ವಸಂತ ನಗರದ  ನಿವಾಸಿ  ರಶ್ಮಿ ಎಂ.ಆರ್. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಗರ ಸರಸ್ವತಿಪುರಂನ ಮುಖ್ಯ ರಸ್ತೆಯಲ್ಲಿರುವ ಸಾರಸ್ವತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌’ನಲ್ಲಿ ಗೃಹ ಸಾಲವನ್ನು ಪಡೆದುಕೊಳ್ಳಲಾಗಿತ್ತು. ಆದರೆ ಕೊರೊನಾ ಹೊಡೆತ ಮತ್ತು ಆರ್ಥಿಕ ತೊಂದರೆಯಿಂದಾಗಿ ಕೆಲವು ತಿಂಗಳುಗಳ ಕಂತನ್ನು ಪಾವತಿ ಮಾಡದೇ ಇದ್ದುದರಿಂದ ಅಸಲು ಮತ್ತು ಬಡ್ಡಿ ಸಾಲವೂ ಸೇರಿ ಸುಮಾರು ನಲವತ್ತು ಲಕ್ಷ ರೂಪಾಯಿ ಹಣವನ್ನು ನೀಡಬೇಕಿದೆ ಎಂದು ಬ್ಯಾಂಕ್‌’ನವರು ಕುಟುಂಬದರಿಗೆ ನೋಟಿಸ್ ನೀಡಿದ್ದರು.

ಆರ್ಥಿಕ ತೊಂದರೆ ಇರುವುದರಿಂದ ಸಾಲದ ಮೊತ್ತವನ್ನು ಪಾವತಿಸಲು ಕೆಲವು ತಿಂಗಳುಗಳ ಕಾಲಾವಕಾಶವನ್ನು ನೀಡಬೇಕೆಂದು ಸದರಿ ಬ್ಯಾಂಕಿನ ವ್ಯವಸ್ಥಾಪಕ ಗಂಗಾಧರ್ ಎನ್ ಜಮಾದಾರ್‌ ಅವರಿಗೆ ಮನವಿಯನ್ನು ಕುಟುಂಬದವರು ಮಾಡಿದ್ದರು. ನಂತರ ೬ ಲಕ್ಷ ರೂಪಾಯಿಗಳನ್ನು ಬ್ಯಾಂಕಿನವರು ಕೇಳಿದಂತೆ ರೈತ ಕುಟುಂಬದರು ಪಾವತಿ ಮಾಡಿರುತ್ತಾರೆ.

ಅಲ್ಲದೇ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ೧೩ಲಕ್ಷ ರೂಪಾಯಿಗಳಿಗೆ ಮಾರಿರುತ್ತಾರೆ. ಸದರಿ ಹಣದಲ್ಲಿ ಒಂದಿಷ್ಟು ಹಣವನ್ನು ಮನೆಯ ಕಾಮಗಾರಿಗೆ ಬಳಸಿ, ಮನೆಯ ಒಂದು ಭಾಗವನ್ನು ಭೋಗ್ಯಕ್ಕೆ ನೀಡಿ, ಭೋಗ್ಯದ ಹಣ ಮತ್ತು ಆಸ್ತಿ ಮಾರಿದ್ದರಿಂದ ಬಂದಿದ್ದ ಹಣದಲ್ಲಿನ ಉಳಿದ ಹಣವನ್ನು ಬ್ಯಾಂಕಿಗೆ ಪಾವತಿಸಲು ನಿರ್ಧರಿಸಿ ಮನೆಯ ಕಾಮಗಾರಿಯನ್ನು ಮಾಡಿಸುತ್ತಿದ್ದರು.

ಏಕಾಏಕಿ ಮನೆ ಖಾಲಿ ಮಾಡುವಂತೆ ತಿಳಿಸಿ ಉದ್ದಟತನ ತೋರಿದ ಮ್ಯಾನೇಜರ್

ಈ ಸಂದರ್ಭದಲ್ಲಿ ಅಂದರೆ 2022ರ ಅಕ್ಟೋಬರ್ 13 ರಂದು ಸಂಜೆ ಸಮಯದಲ್ಲಿ ಬ್ಯಾಂಕ್ ವ್ಯವಸ್ಥಾಪಕ  ಗಂಗಾಧರ್‌ ಅವರು, ಮನೆಯ ಲ್ಲಿ ರಶ್ಮಿ ಹಾಗೂ ಆಕೆಯ ಕುಟುಂಬದವರು ಇಲ್ಲದ ಸಮಯದಲ್ಲಿ ಬಂದು, ಆಕೆಯ ತಂದೆ ಅನಕ್ಷರಸ್ತರಾದ ರಾಜಶೇಖರ್ ಅವರಿಗೆ ಕೋರ್ಟ್’ನಿಂದ ಆದೇಶವಾಗಿದೆ ನಾಳೆಯೇ ಮನೆ ಖಾಲಿ ಮಾಡಬೇಕೆಂದು ತಿಳಿಸಿದ್ದಾರೆ. ನ್ಯಾಯಾಲಯದ ಆದೇಶವನ್ನು ನೀಡದೇ, ವಕೀಲರೊಂದಿಗೆ ಮಾತನಾಡದೇ ಉದ್ದಟತನ ತೋರಿದ್ದಾರೆ. ಅಲ್ಲದೇ ಮನೆಯವರೊಂದಿಗೆ ಮಾತನಾಡಲು ಮನವಿ ಮಾಡಿದರೂ ಒಪ್ಪಿಕೊಳ್ಳದ ರಾಜಶೇಖರ್ ಮನೆ ಖಾಲಿ ಮಾಡದೇ ಇದ್ದರೆ ಮನೆಯವರೆಲ್ಲರನ್ನೂ ಜೈಲಿಗೆ ಕಳುಹಿಸುವ ಬೆದರಿಕೆಯನ್ನೂ ಹಾಕಿದ್ದಾರೆ.

ಕೊಳ್ಳೇಗಾಲದಲ್ಲಿದ್ದ  ಮಗಳು ರಶ್ಮಿ ಅವರಿಗೆ ರಾಜಶೇಖರ್ ದೂರವಾಣಿ ಕರೆ ಮೂಲಕ ವಿಚಾರ ತಿಳಿಸಿದ್ದು,  ಆಕೆ  ಬರುವ ಮುನ್ನ 2022ರ ಅಕ್ಟೋಬರ್ 14 ರ ಬೆಳಿಗ್ಗೆ 10 ಗಂಟೆಗೆ ಬ್ಯಾಂಕಿನ ವ್ಯವಸ್ಥಾಪಕ ಗಂಗಾಧರ್, ತಮ್ಮ ಸಿಬ್ಬಂದಿಗಳು, ವಕೀಲರು ಹಾಗಳು ಏಳೆಂಟು ಮಂದಿ ಪೊಲೀಸರೊಂದಿಗೆ ಮನೆಗೆ ಆಗಮಿಸಿ ಗೃಹಪಯೋಗಿ ವಸ್ತುಗಳನ್ನು  ಬೀದಿಗೆ ಎಸೆದಿದ್ದಾರೆ.

ಮನೆಯಲ್ಲಿದ್ದ ಹಣ, ಚಿನ್ನಾಭರಣದ ಮಾಹಿತಿ ಇಲ್ಲ

ಮನೆಯಲ್ಲಿ 11 ಲಕ್ಷಕ್ಕಿಂತ ಹೆಚ್ಚಾದ ಹಣ ಮತ್ತು 130 ಗ್ರಾಂ ಚಿನ್ನದ ಒಡವೆಗಳಿದ್ದು, 11 ಲಕ್ಷ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಂಡು ಮನೆ ಜಪ್ತಿ  ಮಾಡದಂತೆ ಮನವಿ ಮಾಡಿದರೂ ಗಂಗಾಧರ್ ಹಾಗೂ ವಕೀಲ ಕುಮಾರ್ ಆರಾಧ್ಯ ಒಪ್ಪಿಕೊಂಡಿಲ್ಲ.  

ನಮ್ಮ ವಕೀಲರು ಮನೆಯಿಂದ ಆಚೆ ಎಸೆದಿದ್ದ ವಸ್ತುಗಳನ್ನು ಮುಟ್ಟಬಾರದೆಂದು ತಿಳಿಸಿದ್ದರಿಂದ ನಾವು ಯಾವುದೇ ವಸ್ತುಗಳನ್ನು ಮುಟ್ಟಿರುವುದಿಲ್ಲ.

ಮನೆಯ ಎಲ್ಲಾ ವಸ್ತುಗಳನ್ನು  ಬೀದಿಗೆ ಎಸೆದ ಬಳಿಕ ಮನೆಯ ಎಲ್ಲಾ ಬಾಗಿಲುಗಳಿಗೆ ಬೀಗ ಹಾಕಿ, ಮೊಹರು ಮಾಡಿಕೊಂಡು ಹೋಗಿದ್ದು, ಮನೆಯ ಕಾವಲಿಗೆ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿದ್ದಾರೆ. ಆದರೆ ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣಗಳು ಏನಾಗಿವೆ ಎಂಬುದು ತಿಳಿದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಉಚ್ಛ ನ್ಯಾಯಾಲಯದ ಆದೇಶವೇನು ?

ಇದಾದ ಬಳಿಕ ಅಲ್ಲಿದ್ದ ಪೊಲೀಸರಿಗೆ ಮನವಿ ಮಾಡಿಕೊಂಡ ಬಳಿಕ ವಕೀಲ ಕುಮಾರ್ ಆರಾಧ್ಯ ನ್ಯಾಯಾಲಯದ ಆದೇಶವನ್ನು ವಾಟ್ಸ್’ಅಪ್ ಮೂಲಕ ಕಳುಹಿಸಿರುತ್ತಾರೆ.

ನಮ್ಮ ವಕೀಲರಿಗೆ ವಾಟ್ಸ್’ಪ್ ಮೂಲಕ ಬ್ಯಾಂಕಿನ ವಕೀಲರು ಕಳುಹಿಸಿದ ನ್ಯಾಯಾಲಯದ ಆದೇಶವನ್ನು ನೀಡಿದ ನಂತರ ಅವರು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ 21262/2022 ಸಂಖ್ಯೆಯ ದಾವೆ ಹೂಡಿದ್ದು, ನಮ್ಮ ಮನವಿಯನ್ನು ಆಲಿಸಿದ ನ್ಯಾಯಾಲಯವು ನವೆಂಬರ್ 11ರೊಳಗೆ 10 ಲಕ್ಷ ರೂ ನೀಡಿ ಉಳಿದ ಹಣ ಸಾಲದ ಖಾತೆಗೆ ಕಂತಿನ ಮೂಲಕ ಪಾವತಿಸಲು ಮತ್ತು ಕೂಡಲೇ ಸ್ವಾಧೀನ ಪಡೆಯಲು ಆದೇಶ ನೀಡಿರುತ್ತದೆ.

ಹಣ ಜಮಾ ಮಾಡಿದರೂ ಸಿಗದ ಮನೆ ಸ್ವಾಧೀನ

ಅದರಂತೆ 2022ರ ನವೆಂಬರ್ 7 ರಂದು  ನಾಡನಹಳ್ಳಿ ಶಾಖೆಯ ಕೆನರಾ ಬ್ಯಾಂಕಿನಿಂದ ಪಡೆದ ಹತ್ತು ಲಕ್ಷ ರೂಪಾಯಿಗಳ ಮೌಲ್ಯದ ೨೭೯೯೯೩ ಸಂಖ್ಯೆಯ ಡಿ.ಡಿಯನ್ನು ಅದೇ ದಿನ ಮನವಿ ಪತ್ರದೊಂದಿಗೆ ರೈತ ಕುಟುಂಬದ ವಕೀಲರು ಬ್ಯಾಂಕಿನ ಸಹಾಯಕ ವ್ಯವಸ್ಥಾಪಕರಿಗೆ ನೀಡಿ ನ್ಯಾಯಾಲಯದ ಆದೇಶದ ಪ್ರಕಾರ ಮನೆಯ ಸ್ವಾಧೀನವನ್ನು ಕೊಡುವಂತೆ ಮನವಿ ಮಾಡಿಕೊಂಡರು. ಆ ಸಮಯದಲ್ಲೇ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕರು ತಮ್ಮ ವ್ಯವಸ್ಥಾಪಕರಾದ ಗಂಗಾದರ್‌ ಅವರೊಂದಿಗೆ ಮಾತನಾಡುವಂತೆ ತಮ್ಮ ದೂರವಾಣಿಯಿಂದ ಕರೆ ಮಾಡಿ ಕೊಟ್ಟರು. ರೈತ ಕುಟುಂಬದ ವಕೀಲರು ಡಿ.ಡಿ ನೀಡಿರುವ ವಿಷಯವನ್ನು ತಿಳಿಸಿ ಮನೆಯ ಸ್ವಾಧೀನವನ್ನು ಕೊಡುವಂತೆ ಮನವಿ ಮಾಡಿಕೊಂಡಾಗ, ನಾವು ನೀಡಿದ ಡಿ.ಡಿ ಬ್ಯಾಂಕಿನ ಖಾತೆಗೆ ಜಮಾ ಆದ ನಂತರ ಮನೆಯ ಸ್ವಾಧೀನ ನೀಡುವುದಾಗಿ ತಿಳಿಸಿದ್ದರೂ ಆದರೆ ಇದುವರೆವಿಗೂ ಸ್ವಾಧೀನವನ್ನು ನೀಡಿರುವುದಿಲ್ಲ

ಈ ಬಗ್ಗೆ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರನ್ನು ಸಂಪರ್ಕಿಸಿ ಸಮಸ್ಯೆ ಹೇಳಿಕೊಂಡಿದ್ದು ಅವರು ನ್ಯಾಯಾಲಯದ ಆದೇಶವನ್ನು ಪರಿಶೀಲಿಸಿದ ಬಳಿಕ ಅವರು ಹಲವು ಸಲಹೆಗಳನ್ನು ನೀಡಿದರು.

2021ರ ನವೆಂಬರ್ 4 ರಂದು ನೋಟಿಸ್ ನೀಡಿದ ನಂತರ ರೈತ ಕುಟುಂಬದವರು ಪಾವತಿಸಿರುವ ೬ಲಕ್ಷ ರೂಪಾಯಿಗಳನ್ನು ಸಾಲದ ಮೊತ್ತಕ್ಕೆ ಜಮಾ ಮಾಡಿಕೊಂಡಿರುವುದರಿಂದ ಸದರಿ ನೋಟಿಸ್ ಊರ್ಜಿತವಾಗುವುದಿಲ್ಲ ಮತ್ತು ಸದರಿ ನೋಟಿಸ್‌’ನ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರ ಬ್ಯಾಂಕಿನವರಿಗೆ ಇರುವುದಿಲ್ಲ.  

ಈ ಕಾರಣದಿಂದಲೇ ರೈತ ಕುಟುಂಬದವರಿಂದ ೬ಲಕ್ಷ ರೂಪಾಯಿಗಳನ್ನು ಪಾವತಿಸಿಕೊಂಡ ವಿಚಾರವನ್ನು ಪಿ.ಸಿ.ಜೆ ಮತ್ತು ಸಿ.ಜೆ.ಎಂ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ (c.mis.no ೯೨/೨೦೨೨) ಮಾಹಿತಿಯನ್ನು ನೀಡದೆ ವಾಸ್ತವಾಂಶವನ್ನು ಮುಚ್ಚಿಟ್ಟು ನ್ಯಾಯಾಲಯದಿಂದ ಆದೇಶವನ್ನು ಪಡೆದುಕೊಂಡಿರುವುದು ಅಪರಾಧ ಕೃತ್ಯವಾಗಿರುತ್ತದೆ.

ಉಚ್ಛ ನ್ಯಾಯಾಲಯದ ಆದೇಶದಂತೆ ರೈತ ಕುಟುಂಬದವರು ಹತ್ತು ಲಕ್ಷ ರೂಪಾಯಿ ಹಣವನ್ನು ಪಾವತಿ ಮಾಡಿದರೂ, ಮಾನ್ಯ ನ್ಯಾಯಾಲಯದ ಆದೇಶದ ಪ್ರಕಾರ ಸ್ವತ್ತಿನ ಸ್ವಾಧೀನವನ್ನು ರೈತ ಕುಟುಂಬದವರಿಗೆ ಕೊಡದೇ ಇರುವುದು ಕೂಡ ಅಪರಾಧ ಕೃತ್ಯವಾಗಿರುತ್ತದೆ.

ಆದ್ದರಿಂದ ಬ್ಯಾಂಕಿನ ವ್ಯವಸ್ಥಾಪಕ ಗಂಗಾಧರ್, ನ್ಯಾಯಾಲಯದ ಪ್ರತಿನಿಧಿಯಾಗಿ ಸ್ಥಳಕ್ಕೆ ಬಂದಿದ್ದ ವಕೀಲ ಕುಮಾರ್ ಆರಾಧ್ಯ, ಬ್ಯಾಂಕಿನ ಸಿಬ್ಬಂದಿಗಳು ಮತ್ತು ಇತರ ವ್ಯಕ್ತಿಗಳು ಭಾರತೀಯ ದಂಡ ಸಂಹಿತೆಯ ಕಲಂ 177, 182, 209, 380, 427, 448, 506 ಸಹವಾಚಕ 120ರ ಪ್ರಕಾರ ಅಪರಾಧ ಕೃತ್ಯ ಮಾಡಿದಂತಾಗಿದೆ.  ಆದ್ದರಿಂದ ಇವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ರಶ್ಮಿ ಎಂ.ಆರ್. ದೂರು ದಾಖಲಿಸಿದ್ದಾರೆ.

ಸದರಿ ವ್ಯಕ್ತಿಗಳ ವಿರುದ್ಧ  ಮೊಕದ್ದಮೆ ದಾಖಲಿಸಿ, ಕೂಡಲೇ ತಮ್ಮ ಸ್ವತ್ತಿನ ಸ್ವಾಧೀನವನ್ನು ಕೊಡಿಸಿ, ಬ್ಯಾಂಕ್ ಸಿಬ್ಬಂದಿ ಹಾಗೂ ವಕೀಲರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕೆಂಬುದು ನೊಂದವರ ಅಳಲಾಗಿದೆ.