ಮನೆ ರಾಜ್ಯ ನಗರದಲ್ಲಿ 5 ಹೊಸ ಸಂಚಾರ ಠಾಣೆ ತೆರೆಯಲು ಸೂಚನೆ: ಸಿಎಂ ಬೊಮ್ಮಾಯಿ

ನಗರದಲ್ಲಿ 5 ಹೊಸ ಸಂಚಾರ ಠಾಣೆ ತೆರೆಯಲು ಸೂಚನೆ: ಸಿಎಂ ಬೊಮ್ಮಾಯಿ

0

ಬೆಂಗಳೂರು(Bengaluru): ನಗರದಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಹೆಚ್ಚು ಗಮನ ಹರಿಸುವ ಸಲುವಾಗಿ 5 ನೂತನ ಸಂಚಾರ ಠಾಣೆ ತೆರೆಯಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ‌.

ಶಿವಾಜಿನಗರ ಬ್ರಾಡ್ ವೇ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಪೂರ್ವ ವಿಭಾಗ ಡಿಸಿಪಿಯವರ ಕಚೇರಿಯ ನೂತನ ಕಟ್ಟಡ ಮತ್ತು ಇಂಟಿಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ವಿಭಾಗಕ್ಕೆ ಗುರುವಾರ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ನಗರದ ಸಂಚಾರ ದಟ್ಟಣೆ ನಿರ್ವಹಣೆ ಮತ್ತು ಸಂಚಾರ ನಿಯಮ ಉಲ್ಲಂಘನೆಯಲ್ಲಿ ಪಾರದರ್ಶಕತೆ ತರಲು ಹೆಚ್ಚು ಹೆಚ್ಚು ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತದೆ. ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಎಂಬುದು ದೊಡ್ಡ ಸಮಸ್ಯೆಯಾಗಿದೆ. ಇದನ್ನು ನಿವಾರಿಸಲು ವಿಶೇಷ ಕಮಿಷನರ್ ಆಗಿ ಎಡಿಜಿಪಿ ಡಾ.ಎಂ.ಎ.ಸಲೀಂ ಅವರನ್ನು ನೇಮಕ ಮಾಡಲಾಗಿದೆ ಎಂದರು.

ಬೆಳ್ಳಂದೂರು, ಹೆಣ್ಣೂರು, ಮಹದೇವಪುರ, ತಲಘಟ್ಟಪುರ, ಬ್ಯಾಡರಹಳ್ಳಿಯಲ್ಲಿ ಹೊಸ ಸಂಚಾರ ಠಾಣೆ ತೆರೆಯಲು ಒಪ್ಪಿಗೆ ಸೂಚಿಸಲಾಗಿದೆ. ಇದರಿಂದ ನಗರದ ಹೊರಭಾಗದಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗುತ್ತದೆ ಎಂದರು.