ಮನೆ ರಾಜ್ಯ 2024ರ ಮಕರ ಸಂಕ್ರಮಣಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

2024ರ ಮಕರ ಸಂಕ್ರಮಣಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

0

ದಾವಣಗೆರೆ(Davanagere): 2024ರ ಮಕರ ಸಂಕ್ರಮಣಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಮಾಡುವುದಾಗಿ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

ನಗರಕ್ಕೆ ಆಗಮಿಸಿದ್ದ ವೇಳೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಶ್ರೀಗಳು, ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ 2023ರ ಅಂತ್ಯಕ್ಕೆ ಎಲ್ಲ ಕೆಲಸಗಳು ಮುಕ್ತಾಯವಾಗಲಿವೆ ಎಂದರು.

ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ 20 ಅಡಿಗಳಷ್ಟು ಎತ್ತರ ಗೋಡೆಗಳನ್ನ ಕಟ್ಟಲಾಗಿದ್ದು, ಕಂಬಗಳು ಹಾಗೂ ಸುತ್ತಲಿನ ಗೋಡೆಯನ್ನು ಕಟ್ಟುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ರಾಜಕೀಯಕ್ಕೆ ರೌಡಿಗಳು ಸೇರುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸ್ವಾಮೀಜಿಗಳು, ಇದು ಇಂದಿನದಲ್ಲ. ಡಕಾಯಿತರು ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾದ ಉದಾಹರಣೆಗಳಿವೆ. 21 -22 ನೇ ಶತಮಾನದಲ್ಲೂ ನಮ್ಮ ಸಮಾಜ ಬದಲಾಗಿಲ್ಲ. ಇನ್ನು ನಾವು ಜಾಗೃತರಾಗಿಲ್ಲವೆಂದರೆ ಇನ್ನೇನಾಗತ್ತದೆ? ರೌಡಿಗಳನ್ನ ಆರಿಸುವುದು ಸ್ವಯಂಕೃತ ಅಪರಾಧ. ಇದು ನಮ್ಮ ಸಮಾಜದ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಇಷ್ಟು ಮುಂದುವರಿದರೂ ಇನ್ನು ಜಾಗೃವಾಗಿಲ್ಲವೆಂದರೆ ಯಾರನ್ನ ದೂರುವುದು. ಈ ಬಗ್ಗೆ ಸ್ವಾಮೀಜಿಗಳನ್ನ ದೂರುವುದು ಸರಿಯಲ್ಲ. ಕಾರಣ ಎಲ್ಲವನ್ನು ನಮ್ಮ ಕೈಯಲ್ಲಿ ಕೊಟ್ಟಿಲ್ಲ. ಇದರಲ್ಲಿ ಎಲ್ಲರದ್ದು ಪಾಲಿದೆ ಎಂದು ಹೇಳಿದರು.

ಇನ್ನು ಶಾಲಾ ಪಠ್ಯದಲ್ಲಿ ಭಗವದ್ಗಿತೆ ಅಳವಡಿಕೆ ವಿಚಾರ ಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಹಂಚಿಕೊಂಡಿರುವ ಶ್ರೀಗಳು, ಅಗತ್ಯವಾಗಿ ಇದನ್ನ ಮಾಡಲೆಬೇಕು. ಇದು ಸಾಮಾಜಿಕ ಮತ್ತು ಕರ್ತವ್ಯ ಪ್ರಜ್ಞೆಯನ್ನ ಜಾಗೃತಿಗೊಳಿಸುವ ಕೆಲಸವಾಗಿದೆ ಎಂದರು.

ಕೃಷ್ಣನೂ ಕೂಡ ಇದನ್ನೇ ಹೇಳಿದ್ದಾನೆ. ಸಮಾಜಕ್ಕೆ ಕೃಷ್ಣನ ಉಪದೇಶ ಅಗತ್ಯವಿದೆ. ಹೀಗಾಗಿ, ಪಠ್ಯದಲ್ಲಿ ಭಗವದ್ಗಿತೆ ಸೇರಿಸಬೇಕಿದೆ ಎಂದು ಹೇಳಿದ್ದಾರೆ. ದಲಿತ ಕೇರಿಗಳಿಗೆ ಭೇಟಿ ನೀಡುವುದು ಅದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಾವು ಕೂಡ ದಲಿತ ಕೇರಿಗಳಿಗೆ ಭೇಟಿ ನೀಡುತ್ತಿದ್ದೇವೆ. ಇದನ್ನು ಮುಂದುವರಿಸುವುದಾಗಿ ಶ್ರೀಗಳು ತಿಳಿಸಿದರು.