ಮನೆ ಸುದ್ದಿ ಜಾಲ ಸಚಿವ ಕೆ.ಸಿ.ನಾರಾಯಣಗೌಡರ ಬೇಜವಬ್ದಾರಿತನ ಖಂಡಿಸಿ ತಮಟೆ ಚಳವಳಿ

ಸಚಿವ ಕೆ.ಸಿ.ನಾರಾಯಣಗೌಡರ ಬೇಜವಬ್ದಾರಿತನ ಖಂಡಿಸಿ ತಮಟೆ ಚಳವಳಿ

0

ಕೆ.ಆರ್.ಪೇಟೆ: ನಮ್ಮ ತಾಲ್ಲೂಕಿನಲ್ಲಿ ಅನ್ನದಾತನ ಕಷ್ಟಸುಖಗಳನ್ನು ಕೇಳುವವರು ಯಾರೂ ಇಲ್ಲದಂತಾಗಿದೆ. ತಾಲ್ಲೂಕಿನ ಸರ್ಕಾರಿ ಕಛೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಿಲ್ಲಿಸುವವರೆಗೂ ಹಾಗೂ ಕ್ಷೇತ್ರದ ಶಾಸಕ, ಸಚಿವ ಕೆ.ಸಿ.ನಾರಾಯಣಗೌಡ ಅವರ ಬೇಜವಾಬ್ಧಾರಿತನವನ್ನು ಖಂಡಿಸಿ ತಾಲ್ಲೂಕು ರೈತಸಂಘದ ಕಾರ್ಯಕರ್ತರು ತಮಟೆ ಚಳವಳಿ ನಡೆಸಿ ಮಿನಿ ವಿಧಾನಸೌಧದ ಆವರಣದಲ್ಲಿ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹವನ್ನು ಕೈಗೊಂಡರು.
ರೈತ ಮುಖಂಡ ಮುದುಗೆರೆ ರಾಜೇಗೌಡ ಮಾತನಾಡಿ ರೈತರುಗಳು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸರ್ಕಾರಿ ಕಛೇರಿಗಳ ಅಧಿಕಾರಿಗಳಿಗೆ ಲಂಚದ ರೂಪದಲ್ಲಿ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಯಾವುದೇ ಇಲಾಖೆಗೆ ಹೋದರೂ ರೈತನನ್ನು ಸುಲಿಗೆ ಮಾಡುವುದೇ ಅಧಿಕಾರಿಗಳ ಕೆಲಸವಾಗಿದೆ. ಹಣ ನೀಡದಿದ್ದರೆ ಜನಸಾಮಾನ್ಯರ ಕೆಲಸ ಕಾರ್ಯಗಳು ಮುಂದಕ್ಕೆ ಸಾಗುವುದಿಲ್ಲ. ರೈತರು ಕಛೇರಿಗೆ ಅಲೆದೂ ಅಲೆದು ಚಪ್ಪಲಿಗಳು ಸವೆಯುತ್ತಿವೆ. ತಾಲ್ಲೂಕಿನಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವ ಅಧಿಕಾರಿಗಳನ್ನು ಬ್ಯಾಟರಿ ಹಾಕಿ ಹುಡುಕಿದರೂ ಕಾಣುತ್ತಿಲ್ಲ. ಕೆ.ಆರ್.ಪೇಟೆ ಕ್ಷೇತ್ರದ ಶಾಸಕರು ರಾಜ್ಯದ ಸಚಿವರಾಗಿರುವುದರಿಂದ ಸಚಿವ ನಾರಾಯಣಗೌಡ ಅವರು ಕ್ಷೇತ್ರದ ಜನರು ಹಾಗೂ ರೈತಾಪಿ ವರ್ಗದ ಹಿತವನ್ನು ಕಡೆಗಣಿಸಿದ್ದಾರೆ. ಇಲ್ಲಿನ ರೈತರ ಕಷ್ಟಸುಖವನ್ನು ಕೇಳುವವರು ಹಾಗೂ ಹೇಳುವವರು ಯಾರೂ ಇಲ್ಲದಂತಾಗಿದೆ. ಗಾಢವಾದ ನಿದ್ರೆಯಲ್ಲಿ ಮುಳುಗಿರುವ ತಾಲೂಕು ಆಡಳಿತವನ್ನು ಎಚ್ಚರಿಸಿ ಸರಿ ದಾರಿಗೆ ತರಲು ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದೇವೆ
ಧರಣಿನಿರತ ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಪಂ ಸಿಇಓ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳು ಬರುವವರೆಗೂ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿAದ ಆರಂಭವಾದ ರೈತರ ಪ್ರತಿಭಟನಾ ಮೆರವಣಿಗೆಯು ಮುಖ್ಯ ರಸ್ತೆಯ ಮೂಲಕ ತಾಲೂಕು ಕಛೇರಿಯವರೆಗೆ ನಡೆಯಿತು. ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಪ್ರಧಾನ ಕಾರ್ಯದರ್ಶಿ ಬೂಕನಕೆರೆ ನಾಗರಾಜು, ರೈತ ಮುಖಂಡರಾದ ಲಕ್ಷ್ಮೀಪುರ ಜಗದೀಶ್, ಮಂದಗೆರೆ ಜಯರಾಂ, ಪಿಬಿ ಮಂಚನಹಳ್ಳಿ ನಾಗಣ್ಣಗೌಡ, ನಗರೂರು ಕುಮಾರ್, ಮುದ್ದುಕುಮಾರ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಜಯರಾಂ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ಇತ್ತೀಚಿಗೆ ನಿಧನರಾದ ರೈತ ಮುಖಂಡ ಐಚನಹಳ್ಳಿ ಕೃಷ್ಣೇಗೌಡ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಪ್ರತಿಭಟನಾಕಾರರು, ಕೊಲೆ ಆರೋಪಿಗಳನ್ನು ಬಂಧಿಸಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.