ಕೋಲಾರ: ಶಿವಮೊಗ್ಗದ ಹರ್ಷ ಕೊಲೆ ಪ್ರಕರಣವನ್ನ ಪ್ರಾಮಾಣಿಕವಾಗಿ ತನಿಖೆ ಮಾಡಲಾಗುತ್ತಿದ್ದು, ಹಂತಕರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಕೋಲಾರದಲ್ಲಿ ಮಾತನಾಡಿರುವ ಅವರು, ಬಿಜೆಪಿಗೆ ಎಸ್ಡಿಪಿಐ ಜೊತೆಗೆ ಸಂಬಂದ ಇರಲು ಹೇಗೆ ಸಾಧ್ಯ, ಪ್ರಮೋದ್ ಮುತಾಲಿಕ್ ಸುಮಾರು ವಿಚಾರ ಹೇಳುತ್ತಾರೆ, ಅದೆಲ್ಲ ಸತ್ಯಕ್ಕೆ ದೂರವಾದದ್ದು ಎಂದು ಕೋಲಾರದಲ್ಲಿ ಪ್ರಮೋದ್ ಮುತಾಲಿಕ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಇನ್ನು ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದ ವೇಳೆ, ಹರ್ಷ ಮೃತದೇಹ ಮೆರವಣಿಗೆ ವಿಚಾರಕ್ಕೆ ಕಾನೂನು ಉಲ್ಲಂಘನೆ ಆಗಿಲ್ಲ, ಸಂಘಟನೆಯ ಕಾರ್ಯಕರ್ತ ಎಂದು ಸಚಿವ ಈಶ್ವರಪ್ಪ ಮುಂದೆ ಸಾಗಿದ್ದಾರೆ, ಜನರು ಪಾರ್ಥೀವ ಶರೀರದ ಮೆರವಣಿಗೆ ಹಿಂಬಾಲಿಸಿದ್ದಾರೆ, 144 ಸೆಕ್ಷನ್ ಇದೆಯೆಂದು ಪೊಲೀಸರು ಮತ್ತಷ್ಟು ಬಿಗಿ ಮಾಡಿದ್ದರೆ ಇನ್ನು ಐದಾರು ಹೆಣ ಉರುಳುತ್ತಿತ್ತು, ಪೊಲೀಸರು ಸಂಯಮದಿಂದ ಎಲ್ಲವನ್ನು ನಿಭಾಯಿಸಿದ್ದಾರೆ ಎಂದರು.
ಮೊನ್ನೆ ಕಾಂಗ್ರೆಸ್ ಪಾದಯಾತ್ರೆ ವೇಳೆ ಎಲ್ಲಾ ನಾಯಕರು ಕಾನೂನು ಉಲ್ಲಂಘಿಸಿದ್ದಾರೆ ಅದರ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಲಿ, 24 ಗಂಟೆಯಲ್ಲಿ 8 ಆರೋಪಿಗಳನ್ನ ಬಂದಿಸಿದ್ದೇವೆ, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲಸಿದೆ. ಕುಮಾರಸ್ವಾಮಿ ವಿರೋದ ಪಕ್ಷದಲ್ಲಿ ಇದ್ದುಕೊಂಡು ಅದನ್ನು ಮಾತ್ರ ಹೇಳಲು ಸಾಧ್ಯ ಎಂದರು.
ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದಲ್ಲಿ ಕೇಳಿಬರ್ತಿರುವ ಮಹಿಳೆಯರ ವಿಡಿಯೋ ಕಾಲ್ ಬಗ್ಗೆ ನಂಗೆ ಮಾಹಿತಿಯಿಲ್ಲ ಎಂದು ಗೃಹ ಸಚಿವರು ತಿಳಿಸಿದ್ದು, ಕೆಲವೊಮ್ಮೆ ಮಾಹಿತಿಗಳು ತಪ್ಪಿರ ಬಹುದು ಎಂದಿದ್ದಾರೆ, ಭದ್ರತೆ ವಿಚಾರವಾಗಿ ಸರ್ಕಾರ ಎಲ್ಲರಿಗು ರಕ್ಷಣೆ ನೀಡುವಲ್ಲಿ ಬದ್ದತೆ ತೋರಿದೆ, ಬೇರೆ ಸರ್ಕಾರದಲ್ಲಿ ಕೊಲೆಗಳು ನಡೆದಾಗ ಅಪರಾಧಿಗಳನ್ನ ಪತ್ತೆಹಚ್ಚಲು ತಿಂಗಳ ಗಟ್ಟಲೆ ಸಮಯ ತೆಗೆದುಕೊಂಡಿದ್ದಾರೆ ಅಂತ ಟಾಂಗ್ ಕೊಟ್ರು.
ಹರ್ಷ ಕೊಲೆ ಪ್ರಕರಣದಂತಹ ಕೇಸ್ಗಳು ರಾಜ್ಯದಲ್ಲಿ ಕೊನೆಯಾಗಬೇಕು, ಕೆಲವರು ಎನ್ಕೌಂಟರ್ ಮಾಡಿ ಎನ್ನುತ್ತಾರೆ, ಆದರೆ ಹಾಗೆ ಮಾಡಲು ಸಾಧ್ಯವಿಲ್ಲ, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲು ವಿಶೇಷ ಅಭಿಯೋಜಕರನ್ನ ನೇಮಿಸುವೆ. ಹರ್ಷ ಸಾವಿಗೆ ನ್ಯಾಯ ಕೊಡಿಸೋದಾಗಿ ಭರವಸೆ ನೀಡಿದರು.
ಹರ್ಷ ಕೊಲೆ ಆರೋಪಿಗಳ ವಿರುದ್ದ ಎರಡು ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣಗಳಿದೆ, ಇವರನ್ನ ಹೆಡೆಮುರಿ ಕಟ್ಟುವಲ್ಲಿ ಸ್ತಳೀಯ ಪೊಲೀಸರು ವಿಫಲರಾಗಿದ್ದಾರೆ, ಹಾಗಾಗಿ ಪೊಲೀಸರ ವಿರುದ್ದ ತನಿಖೆ ಮಾಡುವಂತೆ, ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.