ಮನೆ ರಾಜ್ಯ ಚಾಮರಾಜನಗರ: ರಸ್ತೆಯಲ್ಲಿ ಹಾಕಿದ್ದ ಹುರುಳಿ ಸೆತ್ತೆ ಸಿಲುಕಿ ಹೊತ್ತಿ ಉರಿದ ಕಾರು

ಚಾಮರಾಜನಗರ: ರಸ್ತೆಯಲ್ಲಿ ಹಾಕಿದ್ದ ಹುರುಳಿ ಸೆತ್ತೆ ಸಿಲುಕಿ ಹೊತ್ತಿ ಉರಿದ ಕಾರು

0

ಚಾಮರಾಜನಗರ(Chamarajanagar): ರಸ್ತೆಯಲ್ಲಿ ಹಾಕಿದ್ದ ಹುರುಳಿ ಸೆತ್ತೆ ಕಾರಿನ ಚಕ್ರಕ್ಕೆ ಸಿಲುಕಿಕೊಂಡು ಕಾರೊಂದು ಹೊತ್ತಿ ಉರಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊನ್ನೇಗೌಡನಹಳ್ಳಿ-ಗೋಪಾಲಪುರ ರಸ್ತೆಯಲ್ಲಿ ನಡೆದಿದೆ.

ಕೇರಳದ ನೋಂದಣಿ ಹೊಂದಿರುವ ಕಾರೊಂದು ಹೊನ್ನೇಗೌಡನಹಳ್ಳಿ-ಗೋಪಾಲಪುರ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನ ಚಕ್ರಕ್ಕೆ  ಹುರುಳಿ ಸೆತ್ತೆ ಸುತ್ತಿಕೊಂಡು ಕ್ಷಣಮಾತ್ರದಲ್ಲೇ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಕಾರಿನಲ್ಲಿದ್ದ 6 ಮಂದಿ ಯುವಕರು ತಮ್ಮ ವಸ್ತುಗಳ‌ ಸಮೇತ ಕೆಳಗಿಳಿದಿದ್ದಾರೆ.ನೋಡು ನೋಡುತ್ತಿದ್ದಂತೆ ಕಾರಿಗೆ ಬೆಂಕಿ ಆವರಿಸಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ.

ಸ್ಥಳದಲ್ಲಿದ್ದ ಕೆಲವರು ಬೆಂಕಿ ನಂದಿಸಲು ಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರು. ಗುಂಡ್ಲುಪೇಟೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಾಹನ ಸವಾರರ ಆಕ್ರೋಶ: ರಸ್ತೆಯಲ್ಲಿ ಒಕ್ಕಣೆಯನ್ನು ನಿರ್ಬಂಧಿಸಿದ್ದರೂ ಗ್ರಾಮೀಣ ಪ್ರದೇಶದ ಹಲವು ಕಡೆಗಳಲ್ಲಿ ರೈತರು ಕಾನೂನನ್ನು ಗಾಳಿಗೆ ತೂರಿ ಒಕ್ಕಣೆ ಮಾಡುತ್ತಿರುವುದು ಕಂಡು ಬರುತ್ತಿದೆ. ಕೆಲ ರೈತರಿಗೆ ಸ್ವಂತ ಕಣ ಇದ್ದರೂ ಕೂಡ ಹೆಚ್ಚಿನ ರೈತರು ನೇರವಾಗಿ ಹುರುಳಿಯನ್ನು ತಂದು ರಸ್ತೆಗೆ ಹಾಕುತ್ತಾರೆ. ರಸ್ತೆಯಲ್ಲಿ ಹುರುಳಿ ಒಕ್ಕಣೆ ಮಾಡದಂತೆ ಈಗಾಗಲೇ ಪೊಲೀಸರು ಸೂಚನೆ ನೀಡಿದ್ದರೂ ಸಹ ರೈತರು ಒಕ್ಕಣೆಗೆ ಕಣ ಮಾಡದೇ ರಸ್ತೆಯಲ್ಲಿ ಹಾಕುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಕೂಡಲೇ ಕ್ರಮ ಕೈಗೊಳಬೇಕೆಂದು ಸವಾರರು ಮನವಿ ಮಾಡಿದ್ದಾರೆ.