ಮನೆ ಅಪರಾಧ ಪತಿಯ ಮನೆಯಲ್ಲಿ ಕಿರುಕುಳ ಆರೋಪ: ನವ ವಿವಾಹಿತೆ ನೇಣಿಗೆ ಶರಣು

ಪತಿಯ ಮನೆಯಲ್ಲಿ ಕಿರುಕುಳ ಆರೋಪ: ನವ ವಿವಾಹಿತೆ ನೇಣಿಗೆ ಶರಣು

0

ಬೆಂಗಳೂರು: ನವ ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ ಆರ್​​ ಪುರ ಪೊಲೀಸ್​​ ಠಾಣಾ ವ್ಯಾಪ್ತಿಯ ಭಟ್ಟರಹಳ್ಳಿಯಲ್ಲಿ ನಡೆದಿದೆ.

ರಾಣಿ (27) ಆತ್ಮಹತ್ಯೆಗೆ ಶರಣಾದ ಮಹಿಳೆ.

ಕೆಆರ್​​ಪುರದ ಭಟ್ಟರಹಳ್ಳಿಯ ತನ್ನ ಅಕ್ಕನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಗಂಡ ಹಾಗೂ ಅವರ ಕುಟುಂಬದವರು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿ ಮಹಿಳೆ ಐದು ಪುಟಗಳ ಡೆತ್ ನೋಟ್ ಬರೆದಿದ್ದಾರೆ.

ಮೂಲತಃ ಕೋಲಾರ ಜಿಲ್ಲೆಯವರಾದ ರಾಣಿ ಜಯನಗರ ಮೂಲದವರಾದ ಜೀವನ್ ಕುಮಾರ್ ಎಂಬುವರನ್ನು ಕಳೆದ ವರ್ಷದ ಮೇ ತಿಂಗಳಿನಲ್ಲಿ ಮದುವೆಯಾಗಿದ್ದರು. ಮದುವೆಯಾದ ಮೂರೇ ತಿಂಗಳಿಗೆ ಸಣ್ಣ ಸಣ್ಣ ವಿಷಯಕ್ಕೂ ಜಗಳವಾಡುತ್ತಿದ್ದರು. ಹೀಗಾಗಿ ಕೆಲವೊಮ್ಮೆ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ನಡೆಸಿದ್ದೆವು. ಆದರೆ ಇವರಿಬ್ಬರ ಜಗಳ ವಿಕೋಪಕ್ಕೆ ತಿರುಗಿದಾಗ ಬಸವನಗುಡಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದಂಪತಿಗೆ ಸಮಾಲೋಚನೆ ನಡೆಸಲಾಗಿತ್ತು. ಆದಾಗ್ಯೂ ಸುಧಾರಣೆ ಕಾಣದಾಗ ಸ್ವಲ್ಪ ದಿನಗಳ ಕಾಲ ಅಕ್ಕನ ಮನೆಯಲ್ಲಿ ಇರು ಎಂದು ಕಳಿಸಿದ ಪತಿ 15 ದಿನಗಳ ನಂತರ ಡೈವೋರ್ಸ್​ ಲೆಟರ್ ಅನ್ನು ಕಳಿಸಿದ್ದರು. ಇದರಿಂದ ಮನನೊಂದ ರಾಣಿ ನೇಣಿಗೆ ಶರಣಾಗಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.

ಮೃತ ಮಹಿಳೆಯ ಕುಟುಂಬದವರು ತಮ್ಮ ಮಗಳಿಗೆ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದರು. ತವರು ಮನೆಯಿಂದ ಹಣ ಹಾಗೂ ಆಭರಗಳು ತರುವಂತೆ ಪೀಡಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

ಘಟನೆ ನಂತರ ಪತಿ ಹಾಗೂ ಅವರ ಕುಟುಂಬಸ್ಥರು ಮೊಬೈಲ್ ಸ್ವಿಚ್ ಆಫ್​ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ದೂರು ನೀಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಆರ್​ ಪುರ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.