ಮನೆ ಅಪರಾಧ ಮಂಡ್ಯದಲ್ಲಿ ಭೀಕರ ಘಟನೆ: ಮೃತದೇಹ ತುಂಡರಿಸಿ ನಾಲೆಗೆ ಎಸೆದ ಹಂತಕರು

ಮಂಡ್ಯದಲ್ಲಿ ಭೀಕರ ಘಟನೆ: ಮೃತದೇಹ ತುಂಡರಿಸಿ ನಾಲೆಗೆ ಎಸೆದ ಹಂತಕರು

0

ಮಂಡ್ಯ: ವ್ಯಕ್ತಿಯೊಬ್ಬನನ್ನು ಹತ್ಯೆಗೈದ ಹಂತಕರು ಮೃತದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ನಾಲೆಗೆ ಎಸೆದಿರುವ ಭೀಕರ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಮಂಡ್ಯ ಕೆರಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ವಿ.ಸಿ.ನಾಲೆಯಲ್ಲಿ ಮೃತದೇಹದ ತುಂಡುಗಳನ್ನು ಎಸೆದಿದ್ದು, ತಾಲೂಕಿನ ಹೊಡಾಘಟ್ಟ, ಶಿವಾರ, ಡಣಾಯಕನಪುರ ಹಾಗೂ ಮದ್ದೂರು ತಾಲೂಕಿನ ಗೂಳೂರಿನಲ್ಲಿ ಮೃತದೇಹದ ಭಾಗಗಳು ದೊರೆತಿವೆ.

ದೇಹದ ಅಂಗಾಂಗಗಳ ಆಧಾರ ಹಿನ್ನೆಲೆಯಲ್ಲಿ 30 ರಿಂದ 40 ವರ್ಷದ ಆಸುಪಾಸಿನ ಪುರುಷ ವ್ಯಕ್ತಿ ಇರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ.

ದುಷ್ಕರ್ಮಿಗಳು ವ್ಯಕ್ತಿಯನ್ನು ಕೊಲೆಗೈದು ಈ ನಾಲೆಗೆ ಎಸೆದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಹೊಡಾಘಟ್ಟ ಬಳಿ ಮೃತ ವ್ಯಕ್ತಿಯ ತೊಡೆ ಮತ್ತು ಸೊಂಟದ ಭಾಗ ಪತ್ತೆಯಾದರೆ, ಶಿವಾರದ ಸಮೀಪ ಒಂದು ಕಾಲು ಪತ್ತೆಯಾಗಿದೆ. ಡಣಾಯಕನಪುರ ಬಳಿ ಎರಡು ಕೈ, ಒಂದು ಕಾಲು ಕಂಡು ಬಂದರೆ, ಗೂಳೂರು ಬಳಿ ತಲೆಯ ಭಾಗ ಪತ್ತೆಯಾಗಿದೆ.

ಮೃತ ವ್ಯಕ್ತಿಯ ಎಡಗೈ ಮೇಲೆ ಕಾವ್ಯ, ರಘು ಎಂದು ಹಚ್ಚೆ ಕಂಡು ಬಂದಿದ್ದು ಬಲಗೈಯಲ್ಲಿ ವನಜಾ ಎಂದು ಹಚ್ಚೆ ಗುರುತು ಇದೆ.

ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಕೆಎಂ ದೊಡ್ಡಿಯ ಕೆರಗೂಡು ಪೊಲೀಸರು ಮೃತದೇಹ ಸಂಗ್ರಹಿಸಿ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಮಂಡ್ಯ ಎಸ್​ಪಿ ಎನ್.ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸ್​ಪಿ ಎನ್.ಯತೀಶ್, ತನಿಖೆಗೆ ಪ್ರತ್ಯೇಕ ತಂಡ ರಚನೆಯ ಬಗ್ಗೆ ಚಿಂತನೆ ನಡೆಸಿದ್ದಾರೆ. ಮೃತದೇಹದ ಗುರುತು ಪತ್ತೆಗೆ ಮುಂದಾಗಿರುವ ಪೊಲೀಸರು ಸಮೀಪದ ಪೊಲೀಸ್ ಠಾಣೆಗಳಿಂದ ನಾಪತ್ತೆ ಪ್ರಕರಣಗಳ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.