ಮಂಡ್ಯ: ಜೆಡಿಎಸ್ ಮುಖಂಡರು ಟಿಪ್ಪು ಬೆಂಬಲಿಸಿ ಹೇಳಿಕೆ ಕೊಟ್ಟರೆ ಆ ಪಕ್ಷ ಅಡ್ರೆಸ್ ಇಲ್ಲದಂತಾಗುತ್ತದೆ. ಪರಕೀಯ ವ್ಯಕ್ತಿಯನ್ನು ಅಭಿಮಾನಿಸುವ ಕಾಲ ಹೋಗಿದೆ, ತುಷ್ಠೀಕರಣ ರಾಜಕಾರಣ ಮಾಯವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜೆಡಿಎಸ್ ಪಕ್ಷವನ್ನು ಹಳ್ಳ ಹಿಡಿಸುವುದಕ್ಕಾಗಿಯೇ ಸಿ.ಎಂ.ಇಬ್ರಾಹಿಂ ಟಿಪ್ಪು ಪರ ಮಾತನಾಡುತ್ತಿದ್ದಾರೆ. ಟಿಪ್ಪು ಬೇಕಾ, ನಾಲ್ವಡಿ ಕೃಷ್ಣರಾಜ ಒಡೆಯರ್ ಬೇಕಾ ಎಂಬ ಪ್ರಶ್ನೆಗೆ ಜನರೇ ಉತ್ತರ ಕೊಡುತ್ತಾರೆ ಎಂದರು.
ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಕುರ್ಚಿ ಎಳೆದುಕೊಂಡು ಕುಳಿತಿದ್ದಾರೆ. ಹೀಗಾಗಿ ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿದ್ದಾರೆ. ನಿವೃತ್ತಿ ಪಡೆದಿದ್ದೇನೆ ಎಂದು ಯಡಿಯೂರಪ್ಪ ಅವರು ಎಲ್ಲೂ ಹೇಳಿಲ್ಲ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಅವರು ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಪಾತಾಳದಿಂದ ಆಕಾಶದವರೆಗೆ ಭ್ರಷ್ಟಾಚಾರ ನಡೆಸಿದೆ ಎಂದರು.














