ಮನೆ ರಾಜ್ಯ ಕೆಂಪೇಗೌಡರ ಹೆಸರಿನಲ್ಲಿ ಕಬ್ಬನ್ ಪಾರ್ಕ್’ಗಿಂತಲೂ ದೊಡ್ಡ ಪಾರ್ಕ್ ನಿರ್ಮಾಣ: ಆರ್.ಅಶೋಕ್

ಕೆಂಪೇಗೌಡರ ಹೆಸರಿನಲ್ಲಿ ಕಬ್ಬನ್ ಪಾರ್ಕ್’ಗಿಂತಲೂ ದೊಡ್ಡ ಪಾರ್ಕ್ ನಿರ್ಮಾಣ: ಆರ್.ಅಶೋಕ್

0

ಬೆಂಗಳೂರು: ಕಬ್ಬನ್ ಪಾರ್ಕ್, ಲಾಲ್ ಬಾಗ್’ಗಿಂತಲೂ ದೊಡ್ಡ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಕೆಂಪೇಗೌಡರ ಹುಟ್ಟೂರು ಬಳಿಯ ಆವತಿ ಸಮೀಪದ ಬೆಟ್ಟ ಹಲಸೂರಿನಲ್ಲಿ ಪಾರ್ಕ್ ನಿರ್ಮಿಸಲು ನಿರ್ಧರಿಸಲಾಗಿದೆ. ಕಂದಾಯ ಇಲಾಖೆಯ 184 ಎಕರೆ ಜಮೀನಿನಲ್ಲಿ ಕಬ್ಬನ್ ಪಾರ್ಕ್ ಗಿಂತಲೂ ದೊಡ್ಡ ಪಾರ್ಕ್ ನಿರ್ಮಿಸಲಾಗುತ್ತೆ. ಆ ಹೊಸ ಪಾರ್ಕ್ ಗೆ ಕೆಂಪೇಗೌಡ ಎಂದು ಹೆಸರಿಡಲು ನಿರ್ಧರಿಸಲಾಗಿದೆ ಎಂದರು.

ಜೊತೆಗೆ ಜಾರಕ ಬಂಡೆ ಬಳಿ ವಾಜಪೇಯಿ ಹೆಸರಿನಲ್ಲಿ ಮತ್ತೊಂದು ಪಾರ್ಕ್ ನಿರ್ಮಾಣ ಆಗಲಿದೆ. ಈ ಜಾಗ ಉಳಿಯಬೇಕು ಅಂತಾ ಪಾರ್ಕ್ ಮಾಡುತ್ತಿದ್ದೇವೆ. 184 ಎಕರೆಯಲ್ಲಿ ಯಾವುದೇ ರೈತರ ಜಮೀನು ಇಲ್ಲ. ಪೂರ್ತಿ ಸರ್ಕಾರಿ ಜಮೀನು ಇದೆ. ನಾನು ಮತ್ತು ಮುನಿರತ್ನ ಬೆಂಗಳೂರಿನವರಾಗಿದ್ದು, ಬೆಂಗಳೂರಿನ ಜನರ ಋಣ ತೀರಿಸಲು ಈ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ತೋಟಗಾರಿಕಾ ಸಚಿವ ಮುನಿರತ್ನ ಮಾತನಾಡಿ, ಬೆಟ್ಟ ಹಲಸೂರು ಪಾರ್ಕ್ ನಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ನಮ್ಮ ಯೋಚನೆ. ಏಕಶಿಲೆಯಲ್ಲಿ ಪ್ರತಿಮೆ ನಿರ್ಮಾಣಕ್ಕೆ ತಿರ್ಮಾನ ಮಾಡಿದ್ದೇವೆ. ಖರ್ಚು ವೆಚ್ಚ ಎಷ್ಟಾದರೂ ಅಡ್ಡಿಯಿಲ್ಲ. ಬೆಂಗಳೂರು ನಿರ್ಮಾತೃ ಪ್ರತಿಮೆಗೆ ಖರ್ಚು ಅನ್ ಲಿಮಿಟೆಡ್ ಎಂದು ಹೇಳಿದರು.

ಕಂದಾಯ ಇಲಾಖೆಯಿಂದ ಜಮೀನು ಹಸ್ತಾಂತರ ಆಗಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ವಿಧಾನಸೌಧಕ್ಕೆ ಇದು ತಕ್ಕಡಿ ಹಿಡಿದಂತೆ ಪಾರ್ಕ್ ಇರುತ್ತದೆ. ಯಲಹಂಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದು ನಿರ್ಮಾಣ ಆಗುತ್ತದೆ. ಮಲೇಷಿಯಾ, ಸಿಂಗಾಪುರದ ಕಂಪನಿಗಳು ಇದನ್ನು ಅಭಿವೃದ್ಧಿ ಮಾಡಲು ಮುಂದೆ ಬಂದಿದ್ದಾರೆ. ಸಂಪೂರ್ಣವಾಗಿ ತೋಟಗಾರಿಕೆ ಇಲಾಖೆಗೆ ಇದರ ಜವಾಬ್ದಾರಿ ತೆಗೆದುಕೊಂಡಿದ್ದೇವೆ. 100 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದೆ. ಬಾಹುಬಲಿ ಪ್ರತಿಮೆ ಮೀರಿಸುವ ಅತೀ ದೊಡ್ಡ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದರು.