ಮನೆ ಮನರಂಜನೆ ನಾನು ಯಾವ ಪಕ್ಷದಿಂದಲೂ ಸ್ಪರ್ಧೆ ಮಾಡುತ್ತಿಲ್ಲ: ನಟ ಸುದೀಪ್ ಸ್ಪಷ್ಟನೆ

ನಾನು ಯಾವ ಪಕ್ಷದಿಂದಲೂ ಸ್ಪರ್ಧೆ ಮಾಡುತ್ತಿಲ್ಲ: ನಟ ಸುದೀಪ್ ಸ್ಪಷ್ಟನೆ

0

ಬೆಂಗಳೂರು: ನಾನು ಯಾವ ಪಕ್ಷದಿಂದಲೂ ಸ್ಪರ್ಧೆ ಮಾಡುತ್ತಿಲ್ಲ. ನಾನು ಯಾರ ಪರವೂ ಟಿಕೆಟ್‌ ಕೇಳಿಲ್ಲ ಎಂದು ನಟ ಸುದೀಪ್‌ ಸ್ಪಷ್ಟಪಡಿಸಿದ್ದಾರೆ.

Join Our Whatsapp Group

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಯಾರಾದರೂ ಟಿಕೆಟ್‌ ಕೇಳಿದರೆ ಹೊಸ ಸಿನಿಮಾ ಬಿಡುಗಡೆ ಆದಾಗ ಸಿನಿಮಾ ಟಿಕೆಟ್‌ ಕೊಡಿಸಬಲ್ಲೆ ಅಷ್ಟೇ. ನಾನು ಯಾರ ಪರವೂ ಅಲ್ಲ. ಆದರೆ, ಸಿನಿಮಾ ಕ್ಷೇತ್ರಕ್ಕೆ ಬಂದಾಗ ನನ್ನ ಕಷ್ಟದ ಕಾಲದಲ್ಲಿ ಕೆಲವರು ನನ್ನ ಜೊತೆ ನಿಂತಿದ್ದರು. ಆ ಕಾರಣಕ್ಕಾಗಿ ನಾನು ಕೆಲವರ ಪರ ನಿಲ್ಲಬೇಕಾಗುತ್ತದೆ. ಉಳಿದಂತೆ ನಾನೊಬ್ಬ ನಟ ಅಷ್ಟೇ. ಅವರಿಗೆ ಟಿಕೆಟ್‌ ಇವರಿಗೆ ಟಿಕೆಟ್‌ ಕೊಡಿಸುತ್ತೇನೆ ಎಂಬುದೆಲ್ಲಾ ಸುಳ್ಳು ಎಂದು ನಟ ಸುದೀಪ್‌ ಸ್ಪಷ್ಟಪಡಿಸಿದರು.

ಎಲ್ಲ ಪಕ್ಷಗಳಲ್ಲೂ ನನಗೆ ಆತ್ಮೀಯರಿದ್ದಾರೆ. ಆದರೆ, ಕೆಲವೊಂದು ಸಂದರ್ಭದಲ್ಲಿ ನಿಲುವುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನನಗೆ ನೆರವಾದವರಿಗೆ ಪುಟ್ಟ ಕೃತಜ್ಞತೆ ಅರ್ಪಿಸುವ ನಿಟ್ಟಿನಲ್ಲಿ ಇಂಥ ಕೆಲವು ನಿಲುವುಗಳನ್ನು ತೆಗೆದುಕೊಳ್ಳುತ್ತೇನೆ. ಅದು ಏನು ಎಂಬುದನ್ನೂ ಹೇಳುತ್ತೇನೆ ಎಂದರು.

ಅನಾಮಧೇಯ ಪತ್ರ: ಕಾನೂನು ಕ್ರಮ ನಿಶ್ಚಿತ

ಈ ನಡುವೆ ಸುದೀಪ್‌ ಅವರಿಗೆ ಬಂದಿರುವ ಅನಾಮಧೇಯ ಬೆದರಿಕೆ ಪತ್ರದ ಬಗೆಗೂ ತನಿಖೆ ನಡೆಯುತ್ತಿದೆ. ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅದನ್ನು ಸಿಸಿಬಿಗೆ ವರ್ಗಾಯಿಸುವ ಬಗ್ಗೆ ಪೊಲೀಸರು ಚಿಂತನೆ ನಡೆಸಿದ್ದಾರೆ.

ಅನಾಮಧೇಯ ಬೆದರಿಕೆ ಪತ್ರ ಬಂದಿದೆ ಎಂದ ಮಾತ್ರಕ್ಕೆ ಅದನ್ನು ನಿರ್ಲಕ್ಷಿಸಲಾಗದು. ಅದಕ್ಕೆ ಯಾವ ಮಾರ್ಗದಿಂದ ಪ್ರತಿಕ್ರಿಯಿಸಬೇಕೋ ಅಲ್ಲಿಯೇ ಪ್ರತಿಕ್ರಿಯಿಸುತ್ತೇನೆ. ಕಾನೂನು ಕ್ರಮ ತೆಗೆದುಕೊಳ್ಳುವುದು ನಿಶ್ಚಿತ. ಏಕೆಂದರೆ ನನಗೆ ಈ ರೀತಿ ಮಾಡಿದವರು ನಾಳೆ ಬೇರೆಯವರಿಗೂ ಹೀಗೆ ಮಾಡಬಾರದಲ್ಲವೇ ಎಂದು ಸುದೀಪ್‌ ಖಾರವಾಗಿ ನುಡಿದರು.