ಮನೆ ದೇವಸ್ಥಾನ ಬೇಡರ ಕಣ್ಣಪ್ಪ (ಕಾಳಹಸ್ತೀಶ್ವರ) ದೇವಾಲಯ

ಬೇಡರ ಕಣ್ಣಪ್ಪ (ಕಾಳಹಸ್ತೀಶ್ವರ) ದೇವಾಲಯ

0

ಬೆಂಗಳೂರಿನ ದೊಡ್ಡ ಬಸವನಗುಡಿಯ ವಿಶಾಲ ಪ್ರದೇಶದಲ್ಲಿ ಹಲವು ದೇವಾಲಯಗಳಿವೆ. ಆರಂಭದಲ್ಲಿ ಗಣಪತಿಯ ದರ್ಶನವಾದರೆ, ಗಣಪನ ಹಿಂಭಾಗದಲ್ಲಿ ಬಾಲಾಂಜನೇಯ, ಮೇಲ್ಭಾಗದಲ್ಲಿ ದೊಡ್ಡ ಬಸವಣ್ಣ ದರ್ಶನ ನೀಡುತ್ತಾರೆ.

Join Our Whatsapp Group

ಇಲ್ಲಿರುವ ಮತ್ತೊಂದು ಮಹತ್ವದ ದೇವಾಲಯ ಕಾಳಹಸ್ತೀಶ್ವರ ಅಥವಾ ಬೇಡರ ಕಣ್ಣಪ್ಪನದು. ದೊಡ್ಡ ಗಣೇಶನ ಗುಡಿಯ ಹಿಂಭಾಗದಲ್ಲಿಯೇ ಇರುವ ಈ ದೇವಾಲಯ ಪುರಾತನ ದೇವಾಲಯಗಳಲ್ಲಿ ಒಂದು.

ಈ ದೇವಾಲಯದಲ್ಲಿ ಮೂರು ಗರ್ಭಗೃಹಗಳಿದ್ದು ಪ್ರಧಾನ ಗರ್ಭಗೃಹದಲ್ಲಿ ಕಾಳಹಸ್ತೀಶ್ವರನಿದ್ದರೆ, ದೇವರ ಎಡ ಭಾಗದಲ್ಲಿ ಜ್ಞಾನಾಂಬಿಕೆಯ ಹಾಗೂ ಬಲ ಭಾಗದಲ್ಲಿ ಗಣಪತಿಯ ವಿಗ್ರಹಗಳಿವೆ. ಗಣಪತಿ ಗುಡಿಯ ಎದುರು ನವಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಬೇಡರ ಕಣ್ಣಪ್ಪ ಪೂಜಿಸಿದ ಲಿಂಗಕ್ಕೆ ಕಾಳಹಸ್ತೀಶ್ವರ ಎಂಬ ಹೆಸರು ಬಂದಿದೆ. ಇದಕ್ಕೆ ಶಿವಪುರಾಣದಲ್ಲಿ ಒಂದು ಕಥೆ ಇದೆ.

ಕಾಳನೆಂಬ ಬೇಡ ಶಿವ ಮಹಿಮೆಯಿಂದ ಶಿವಭಕ್ತನಾದ. ಆತ ತಾನು ಕೊಂದ ಪ್ರಾಣಿಗಳ ಹಸಿ ಮಾಂಸವನ್ನು ದೇವರಿಗೆ ನೈವೇದ್ಯ ಮಾಡುತ್ತಿದ್ದ.  ಬಾಯಲ್ಲಿ ನೀರನ್ನು ತುಂಬಿ ತಂದು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿದ್ದ.

ಶಿವ ಕಣ್ಣಪ್ಪನ ಭಕ್ತಿಯನ್ನು ಪರೀಕ್ಷಿಸಲು ಲಿಂಗದಲ್ಲಿ ಕಣ್ಣು ಮೂಡಿಸಿ, ಅದರಿಂದ ರಕ್ತ ಬರುವಂತೆ ಮಾಡಿದನಂತೆ. ಇದನ್ನು ಕಂಡ ಕಣ್ಣಪ್ಪ ತನ್ನ ಕಣ್ಣನ್ನೇ ಕಿತ್ತು ಶಿವನಿಗೆ ಅರ್ಪಿಸಿದನಂತೆ. ಕಾಲ ನೆಂಬ ಬೇಡ ಪೂಜಿಸಿದ ಶಿವ ಅಂದಿನಿಂದ ಕಾಳಹಸ್ತೀಶ್ವರನಾಗಿದ್ದಾನೆ ಎನ್ನಲಾಗುತ್ತದೆ. ದೇವಾಲಯದಲ್ಲಿ ಆನೆ, ಸರ್ಪ, ಲಿಂಗ ಹಾಗೂ ಕಣ್ಣಪ್ಪನ ವಿಗ್ರಹವೂ ಇದೆ. ಶಿವಲಿಂಗದ ಎದುರು ಸುಂದರವಾದ ಬಸವಣ್ಣನ ವಿಗ್ರಹ ಇದೆ.

ಈ ದೇವಾಲಯ ನೂರಾರು ವರ್ಷಗಳ ಹಳೆಯದಾಗಿದ್ದು, ಚೋಳರ ಕಾಲದ್ದೆಂದು ಹೇಳಲಾಗುತ್ತದೆ. ಈ ದೇವಾಲಯದಲ್ಲಿ ಪ್ರತಿ ತಿಂಗಳೂ ಮಾಸ ಶಿವರಾತ್ರಿ, ಎರಡು ಪ್ರದೋಷ, ಶ್ರೀ ಸಂಕಷ್ಟ ಹರ ಗಣಪತಿ ವ್ರತ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ನಡೆಯುತ್ತದೆ.

ಪ್ರತಿ ನಿತ್ಯ ಶೈವಾಗಮ ರೀತ್ಯ ರುದ್ರಾಭಿಷೇಕ, ಪೂಜೆ, ಅಲಂಕಾರಗಳು ನಡೆಯುತ್ತವೆ. ಶಿವ ಪಂಚಾಯತನ ದೇವಾಲಯ ಎಂದೇ ಖ್ಯಾತವಾದ ಇಲ್ಲಿ, ಶಿವರಾತ್ರಿಯ ದಿನ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ರಾತ್ರಿ ಇಡೀ ಜಾಗರಣೆ ಹಾಗೂ 4 ಯಾಮದ ಪೂಜೆಗಳು ಜರುಗುತ್ತವೆ.

ಇಲ್ಲಿ ಗಣಪತಿಗೆ ಅಡಿಕೆ ಎಲೆ ಅಲಂಕಾರ, ಒಣ ಕೊಬ್ಬರಿ ಅಲಂಕಾರ, ಬಿಳಿ ಕೊಬ್ಬರಿ ಅಲಂಕಾರ, ಬೆಣ್ಣೆ ಅಲಂಕಾರ, ನವಗ್ರಹ ಧಾನ್ಯ ಅಲಂಕಾರ, ವಿಭೂತಿ ಅಲಂಕಾರ, ಚಂದನ ಅಲಂಕಾರಗಳನ್ನು ಮಾಡಲಾಗುತ್ತದೆ.

 ನವರಾತ್ರಿಯ ಸಮಯದಲ್ಲಿ ಜ್ಞಾನಾಂಬಿಕಾ ದೇವಿಗೆ ತ್ರಿಪುರ ಸುಂದರಿ ಅಲಂಕಾರ, ಧನಲಕ್ಷ್ಮೀ ಅಲಂಕಾರ, ಮೀನಾಕ್ಷಿ ಅಲಂಕಾರ, ಮಯೂರ ವಾಹಿನಿ ಅಲಂಕಾರ, ಕನ್ನಿಕಾ ಪರಮೇಶ್ವರಿ ಅಲಂಕಾರ, ರಾಜ ರಾಜೇಶ್ವರಿ ಅಲಂಕಾರ, ದುರ್ಗೆ ಅಲಂಕಾರ ಹಾಗೂ ಶಾರದೆ ಅಲಂಕಾರ ಮಾಡಲಾಗುತ್ತದೆ.