ಮನೆ ದೇವಸ್ಥಾನ ಕಾರಂಜಿ ಆಂಜನೇಯಸ್ವಾಮಿ ದೇವಾಲಯ

ಕಾರಂಜಿ ಆಂಜನೇಯಸ್ವಾಮಿ ದೇವಾಲಯ

0

ಹಲವು ಪುರಾತನ ದೇವಾಲಯಗಳನ್ನೊಳಗೊಂಡ ಬೆಂಗಳೂರಿನ ಬಸವನಗುಡಿಯಲ್ಲಿರುವ ಪ್ರಾಚೀನ ಮತ್ತು ಪವಿತ್ರ ದೇವಾಲಯ ಕಾರಂಜಿ ಆಂಜನೇಯ ಸ್ವಾಮಿ ದೇವಾಲಯ. ದೊಡ್ಡ ಗಣಪನ ದೇವಸ್ಥಾನಕ್ಕೆ ಅತಿ ಸನಿಹದಲ್ಲೇ ಬಿ.ಎಂ.ಎಸ್. ಮಹಿಳಾ ಕಾಲೇಜು ಹಿಂಭಾಗದಲ್ಲಿರುವ ಈ ದೇವಾಲಯ ಮಾಗಡಿ ಕೆಂಪೇಗೌಡರ ಕಾಲಕ್ಕೂ ಮೊದಲೇ ಇತ್ತೆಂದು, ಇದು ಸ್ವಯಂಭು ಎಂದೂ ಹೇಳಲಾಗುತ್ತದೆ.

Join Our Whatsapp Group

ಬಹಳ ಹಿಂದೆ ಕಲ್ಯಾಣ ನಗರ ಎಂದು ಕರೆಸಿಕೊಂಡಿದ್ದ ಈ ಬೆಟ್ಟ ಪ್ರದೇಶದಲ್ಲಿ ದಟ್ಟವಾದ ಕಾನನ ಹಾಗೂ  ಮಾವು, ತೆಂಗು, ಕಂಗು ಹಾಗೂ ಬಾಳೆತೋಟಗಳಿದ್ದವು. ಬೆಟ್ಟದ ಮೇಲಿಂದ ಜಲಧಾರೆಯೂ ಹರಿಯುತ್ತಿತ್ತು. ಹೀಗಾಗಿ ಇಲ್ಲಿ ಕೆರೆಯೊಂದನ್ನೂ ನಿರ್ಮಿಸಲಾಗಿತ್ತು. 1920ರವರೆಗೆ ಇಲ್ಲಿ ಕಾರಂಜಿ ಕೆರೆ ಇತ್ತು ಎಂದು ಇತಿಹಾಸದಿಂದ ತಿಳಿದುಬರುತ್ತದೆ.

ಹೀಗೆ  ಹರಿದು ಬಂದ ನೀರು ಚಿಲುಮೆಯಂತೆ ಉಕ್ಕುತ್ತಿದ್ದ ಪ್ರದೇಶದಲ್ಲಿ ಆಂಜನೇಯನ ದೇವಾಲಯ ನಿರ್ಮಿಸಲಾಗಿದೆ. ಹೀಗಾಗೆ ಈ ದೇವಾಲಯ ಕಾರಂಜಿ ಆಂಜನೇಯ ದೇವಾಲಯ ಎಂದೇ ಖ್ಯಾತವಾಗಿದೆ.

ಬೆಟ್ಟದಲ್ಲಿದ್ದ ಬೃಹದಾಕಾರದ ಏಕ ಶಿಲೆಯನ್ನು ಕಡೆದು ಇಲ್ಲಿ ಆಂಜನೇಯನ ವಿಗ್ರಹ ಕೆತ್ತಲಾಗಿದೆ. 18 ಅಡಿ ಎತ್ತರ ಇರುವ ಹನುಮ ವಿಗ್ರಹದ ಎರಡೂ ಕೈಗಳಲ್ಲಿ ಚೂಡಾಮಣಿ ಇದ್ದು, ಉತ್ತರ ದಿಕ್ಕಿಗೆ ಹಾರಲು ಅನುವಾಗುತ್ತಿರುವಂತಿದೆ. ಈ ಪ್ರತಿಮೆ ನೋಡಿದಾಗ, ದಕ್ಷಿಣ ತುದಿಯ ಶ್ರೀಲಂಕಾದಲ್ಲಿ ಸೀತಾನ್ವೇಷಣೆ ಬಳಿಕ ಆಂಜನೇಯ ಮುದ್ರಿಕೆಯನ್ನು ತಾಯಿ ಸೀತಾದೇವಿಗೆ ಕೊಟ್ಟು, ಚೂಡಾಮಣಿಯೊಂದಿಗೆ ಶ್ರೀರಾಮನಲ್ಲಿಗೆ ವಾಪಸಾಗಲು ಉತ್ತರ ದಿಕ್ಕಿಗೆ ಬರುತ್ತಿರುವಂತಿದೆ. ಆಂಜನೇಯನ ವಿಗ್ರಹದಲ್ಲಿರುವ ಒಡವೆ, ಗೆಜ್ಜೆ ಇತ್ಯಾದಿ ಆಭರಣಗಳು ಸೂಕ್ಷ್ಮ ಕೆತ್ತನೆಗಳಿಂದ ಕೂಡಿವೆ.

ಸರ್ಪಯಾಗ ಮಾಡಿದ ದೋಷ ನಿವಾರಣೆಗಾಗಿ ಇಲ್ಲಿಗೆ ಆಗಮಿಸಿ ತಪವನ್ನಾಚರಿಸಿದ್ದನೆಂದೂ ಸ್ಥಳ ಪುರಾಣದಿಂದ ತಿಳಿದುಬರುತ್ತದೆ. ಗೌತಮ ಮಹರ್ಷಿಗಳು ಕೂಡ ಇಲ್ಲಿ ನೆಲೆಸಿ ಆಂಜನೇಯನನ್ನು ಪೂಜಿಸಿದರೆಂದೂ ಹೇಳಲಾಗುತ್ತದೆ. ಮಾಗಡಿ ಕೆಂಪೇಗೌಡರು ಈ ದೇವಾಲಯ ಜೀರ್ಣೋದ್ಧಾರ ಮಾಡಿ, ಅಗ್ರಹಾರ ನಿರ್ಮಿಸಿ, ದೇವಾಲಯದ ಅರ್ಚಕರಿಗೆ ಭೂಮಿ ಕೊಟ್ಟ ಬಗ್ಗೆಯೂ ಇತಿಹಾಸದಲ್ಲಿ ದಾಖಲೆಗಳಿವೆ.

ದೇವಾಲಯದ ಮುಂದೆ ಅರಳಿಕಟ್ಟೆ ಇದ್ದು, ನಾಗರ ಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಎದುರು ದೀಪಸ್ತಂಭವಿದೆ. ವಿಶಾಲ ಪ್ರಾಕಾರ ಇರುವ ದೇವಾಲಯದ ಗೋಪುರದಲ್ಲಿ ಆಂಜನೇಯ, ಸೀತಾರಾಮರು ಹಾಗೂ ಗರುಡನ ಗಾರೆ ಶಿಲ್ಪಗಳಿವೆ.

ಪಕ್ಕದಲ್ಲಿ ಶ್ರೀ ಕೋದಂಡರಾಮಸ್ವಾಮಿ ದೇವಾಲಯವಿದೆ. ದೇವಾಲಯದ ಮುಂದೆ ಗರುಡಗಂಬವಿದೆ. ದೇಗುಲದ ಮೇಲಿನ ಗೋಪುರದ ಸುತ್ತಲೂ ಗೂಡುಗಳಿದ್ದು, ಅವುಗಳಲ್ಲಿ ನಾರಾಯಣನ ವಿವಿಧ ಲೀಲೆಗಳನ್ನು ಸಾರುವ ಗಾರೆ ಶಿಲ್ಪಗಳಿವೆ.

ಗರ್ಭಗೃಹದಲ್ಲಿ ಸುಂದರವಾದ ಸೀತಾರಾಮಲಕ್ಷ್ಮಣರ ವಿಗ್ರಹವಿದೆ. ನಿತ್ಯವೂ ಇಲ್ಲಿ ಶ್ರೀವೈಷ್ಣವ ಸಂಪ್ರದಾಯದಂತೆ ಪೂಜಾ ವಿಧಿಗಳು  ಜರುಗುತ್ತವೆ. ರಾಮನವಮಿ, ಹನುಮ ಜಯಂತಿಯ ಕಾಲದಲ್ಲಿ ವಿಶೇಷ ಪೂಜೆ ಉತ್ಸವಗಳೂ ಜರುಗುತ್ತವೆ.