ಮನೆ ಪ್ರವಾಸ ತುಂಗಭದ್ರಾ ನದಿಯಿಂದ ಸುತ್ತುವರೆದ ಆನೆಗೊಂದಿ

ತುಂಗಭದ್ರಾ ನದಿಯಿಂದ ಸುತ್ತುವರೆದ ಆನೆಗೊಂದಿ

0

ಆನೆಗೊಂದಿಯ ಐತಿಹಾಸಿಕ ಹಾಗೂ ಪುರಾಣ ಹಿನ್ನೆಲೆಯು ನಮ್ಮನ್ನು ರಾಮಾಯಣದ ಕಾಲಕ್ಕೆ ಕರೆದೊಯ್ಯುತ್ತದೆ. ಈ ಸುಂದರ ತಾಣವು ಹಸಿರು ಸಿರಿ, ಗಿರಿಧಾಮಗಳು ಹಾಗೂ ತುಂಗಭದ್ರಾ ನದಿಯಿಂದ ಸುತ್ತುವರಿದಿದೆ. ಇದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿದೆ.

ಈ ತಾಣವು ರಾಮಾಯಣದ ಕಾಲದಲ್ಲಿ ವಾಲಿಯ ರಾಜಧಾನಿಯಾಗಿತ್ತು ಎನ್ನಲಾಗುತ್ತದೆ. ಆನೆಗಳನ್ನು ಸ್ನಾನ ಮಾಡಿಸುವ ಹೊಂಡ/ಸ್ಥಳ ಇದಾಗಿತ್ತು, ಆದ್ದರಿಂದಲೇ ಈ ಪ್ರದೇಶಕ್ಕೆ ಆನೆಗೊಂದಿ ಎನ್ನುವ ಹೆಸರು ಬಂತು ಎನ್ನಲಾಗುತ್ತದೆ. ಇದು ವಿಜಯನಗರ ಅರಸರ ಮೊದಲ ರಾಜಧಾನಿಯಾಗಿತ್ತು. ಹಂಪಿಗಿಂತ ಪುರಾತನವಾದ ಈ ಪ್ರದೇಶ 5000 ವರ್ಷಗಳ ಇತಿಹಾಸವನ್ನು ಒಳಗೊಂಡಿದೆ. ಬೆಂಗಳೂರಿನಿಂದ 358.4 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ 6 ರಿಂದ 7 ತಾಸುಗಳ ಪ್ರಯಾಣ ಮಾಡಬೇಕಾಗುತ್ತದೆ.

ಪುರಾಣ ಕಥೆ ಕಿಷ್ಕಿಂದೆ ಎಂದು ಪ್ರಸಿದ್ಥವಾದ ಈ ತಾಣ ವಾಲಿಯ ವಶದಲ್ಲಿತ್ತು. ಶ್ರೀರಾಮನು ವಾಲಿಯನ್ನು ಸೋಲಿಸಿ ಸುಗ್ರೀವನಿಗೆ ಈ ಪ್ರದೇಶವನ್ನು ನೀಡಿದನು. ಇದಕ್ಕೆ ಉಪಕಾರವಾಗಿ ವಾಲಿಯು ಹನುಮಂತನ ಸಾರಥ್ಯದಲ್ಲಿ ರಾವಣನನ್ನು ಸಂಹರಿಸಿದನು. ಸೀತೆಯನ್ನು ಬಂಧನದಿಂದ ಬಿಡಿಸಿ, ರಾಮನಿಗೆ ಒಪ್ಪಿಸಿದರು ಎನ್ನುವ ಪುರಾಣ ಕಥೆಯನ್ನು ಒಳಗೊಂಡಿದೆ.

ಇತಿಹಾಸ

ಎರಡನೇ ದೇವರಾಯನ ಕಾಲದಲ್ಲಿ ವಿದ್ಯಾನಗರವು ಆನೆಗೊಂದಿಯೊಂದಿಗೆ ಸೇರಿಕೊಂಡಿತ್ತು. ಇದು ಜಗತ್ತಿನಲ್ಲೇ ಅತ್ಯಂತ ವಿಸ್ತಾರವುಳ್ಳ ಶ್ರೀಮಂತ ರಾಜಧಾನಿ ಎನ್ನುವ ಖ್ಯಾತಿಯನ್ನು ಪಡೆದಿತ್ತು. ತುಳು ವಂಶದ ಕೃಷ್ಣದೇವರಾಯನ ಕಾಲದಲ್ಲಿ ಇದರ ವೈಭವವನ್ನು ಎಲ್ಲಡೆಯೂ ಕೊಂಡಾಡುತ್ತಿದ್ದರು.

ಬರಹದಲ್ಲಿ ತುಂಗಭದ್ರಾ ನದಿಯ ದಂಡೆಯ ಮೇಲೆ ಸೆನಗೊಂದ್ಯಂ (ಆನೆಗೊಂದಿ) ಎಂಬ ಪಟ್ಟಣವಿತ್ತು. ಅದು ಪೂರ್ವ ಕಾಲದಲ್ಲಿ ರಾಜಧಾನಿಯಾಗಿತ್ತು. ಇದಕ್ಕೆ ಸಾಕ್ಷಿಯಾಗಿ ಈಗಲೂ ಇಲ್ಲಿ ಕೋಟೆ ಇರುವುದನ್ನು ಕಾಣಬಹುದು ಎಂದು ಪೇಸ್ ಎಂಬ ಪೋರ್ಚುಗೀಸ್ ಪ್ರಯಾಣಿಕ 1530ರಲ್ಲಿ ಬರೆದಿದ್ದ ಎನ್ನಲಾಗುತ್ತದೆ.

ಸುಧಾರಣಾ ನೀತಿ

ಆನೆಗೊಂದಿಯ ಭೂ ಸುಧಾರಣಾ ನೀತಿ ಉಲ್ಲೇಖಾರ್ಹವಾಗಿದೆ. ಕೃಷ್ಣ ದೇವರಾಯ ತನ್ನ ಮಂತ್ರಿಯಾದ ಅಪ್ಪಾಜಿಯ ಸಹಕಾರದಿಂದ ಭೂಮಿಯನ್ನು ರಾಯರೇಖಾದಿಂದ ಅಳತೆ ಮಾಡಿದನು. ಈ ಪದ್ಧತಿಯನ್ನೇ ಅನೇಕ ರಾಜರು ತಮ್ಮ ರಾಜ್ಯದಲ್ಲಿ ಜಾರಿಗೆ ತಂದುಕೊಂಡರು.

ಸುತ್ತ ಮುತ್ತ ಈ ಸ್ಥಳವು ಐತಿಹಾಸಿಕ ಕಾಲದ ಕೆಲವು ಅವಶೇಷಗಳು, ಗಿರಿಧಾಮಗಳು, ಕೋಟೆ, ಅರಮನೆ ಹಾಗೂ ಸುಂದರ ಹಸಿರು ಸಿರಿಯಿಂದ ಕೂಡಿದೆ. ಇಲ್ಲಿ ಹರಿಯುವ ಭದ್ರಾವತಿ ನದಿಯು ಇದರ ಸೌಂದರ್ಯದ ಮೆರಗನ್ನು ಹೆಚ್ಚಿಸುತ್ತದೆ. ವಾರದ ರಜೆಯಲ್ಲಿ ಭೇಟಿ ನೀಡಲು ಇದೊಂದು ಸೂಕ್ತ ಜಾಗ.

ಗಗನ್ ಅರಮನೆ

16ನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ಅರಮನೆ ಇಸ್ಲಾಮಿಕ್ ಶೈಲಿಯಲ್ಲಿದೆ. ಗಗನ್ ಅರಮನೆಯನ್ನು ಗಗನ್ ಮಹಲ್ ಎಂತಲೂ ಕರೆಯುತ್ತಾರೆ. ವಿಜಯನಗರ ಅರಸರಿಂದ ಈ ಅರಮನೆಯ ನಿರ್ಮಾಣವಾಯಿತು. ಇನ್ನೂ ಭದ್ರವಾಗಿ ನಿಂತುಕೊಂಡ ಅರಮನೆ ವಿಜಯ ನಗರ ಅರಸರ ಆಡಳಿತ ಹಾಗೂ ವಾಸ್ತುಶಿಲ್ಪದ ಹಿರಿಮೆಯನ್ನು ಸಾರುತ್ತದೆ.

ಆನೆಗೊಂದಿ ಕೋಟೆ

ಈ ಕೋಟೆಯು ಆ ಕಾಲದ ಪರಿಪೂರ್ಣ ಸಾಂಪ್ರದಾಯಿಕ ಹಿನ್ನೆಲೆಗೆ ಉದಾಹರಣೆಯಾಗಿದೆ. ಈ ಕೋಟೆಯ ಒಳಗೆ ದುರ್ಗಾ ದೇವಸ್ಥಾನ ಹಾಗೂ ಗಣೇಶನಿಗೆ ಮೀಸಲಾದ ಗುಹಾಲಯವಿದೆ. ವಿಜಯ ನಗರ ಅರಸರು ಯುದ್ಧ ಮಾಡುವ ಮೊದಲು ಈ ದುರ್ಗಾದೇವಿಯ ಪೂಜೆ ಮಾಡುತ್ತಿದ್ದರು ಎನ್ನಲಾಗುತ್ತದೆ.