ಮನೆ ರಾಜ್ಯ ಕಟ್ಟು ನೀರು ಪದ್ಧತಿಯಲ್ಲಿ ಕಾಲುವೆಗಳಿಗೆ ನೀರು: ಡಾ.ಹೆಚ್.ಸಿ.ಮಹದೇವಪ್ಪ

ಕಟ್ಟು ನೀರು ಪದ್ಧತಿಯಲ್ಲಿ ಕಾಲುವೆಗಳಿಗೆ ನೀರು: ಡಾ.ಹೆಚ್.ಸಿ.ಮಹದೇವಪ್ಪ

0

ಮೈಸೂರು: ಕಬಿನಿ ಜಲಾಶಯಕ್ಕೆ ವಾಡಿಕೆಗಿಂತ ಪ್ರಸ್ತುತ ಒಳಹರಿವಿನ ಪ್ರಮಾಣ ಕುಂಠಿತವಾಗಿದ್ದು, ಆಕ್ಟೋಬರ್ ತಿಂಗಳವರೆಗೆ ಪ್ರತಿ ಮಾಹೆ 15 ದಿನಗಳಿಗೆ ಕಟ್ಟು ನೀರು ಪದ್ಧತಿಯಲ್ಲಿ ಕಾಲುವೆಗಳಿಗೆ ನೀರನ್ನು ಹರಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು‌.

ಕಬಿನಿ ಜಲಾಶಯ ಅಚ್ಚುಕಟ್ಟು ಪ್ರದೇಶಗಳಿಗೆ ಮುಂಗಾರು ಹಂಗಾಮಿಗೆ ನೀರು ಒದಗಿಸುವ ಕುರಿತು ಶನಿವಾರ ನಗರದ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ನೀರಿನ ಲಭ್ಯತೆ ಅವಲೋಕಿಸಿದರೆ ಕಟ್ಟು ನೀರು ಪದ್ಧತಿ ಅನುಸರಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ಜಲಾಶಯದ ಒಳಹರಿವು 29.55 ಟಿಎಂಸಿ ಇದ್ದು, ಹೊರಹರಿವಿನ ಪ್ರಮಾಣ 14.081 ಟಿಎಂಸಿ ಇದೆ. ಸಾಧಾರಣವಾಗಿ ಕಬಿನಿ ಹಿನ್ನೀರಿನಲ್ಲಿ ಬಿಳುವ ಮಳೆಯ ಪ್ರಮಾಣ 1829.1 ಎಂ.ಎಂ.ಗಳಷ್ಟು ಆದರೆ ವಾಸ್ತವವಾಗಿ ಪ್ರಸಕ್ತ ಸಾಲಿನಲ್ಲಿ ಬಿದ್ದಿರುವ ಮಳೆಯ ಪ್ರಮಾಣ 881.0 ಎಂ.ಎಂ. ರಷ್ಟಾಗಿದೆ. ಇದರಿಂದಾಗಿ ಶೇ.52 ರಷ್ಟು ಮಳೆಯ ಕೊರತೆ ಉಂಟಾಗಿದೆ. ಉತ್ತಮ ಮಳೆಯಾದರೆ ಡಿಸೆಂಬರ್‌ ಅಂತ್ಯದವರೆಗೂ ನೀರು ಹರಿಸಬಹುದು ಎಂದು ಮಾಹಿತಿ ನೀಡಿದರು.

ಕಳೆದ ಮೂರು ವರ್ಷಗಳ ಅವಧಿಗಿಂತಲೂ ಈ ಭಾರಿ ಜಲಾಶಯಕ್ಕೆ ಕಡಿಮೆ ಒಳಹರಿವು ಉಂಟಾಗಿದೆ. ಜಲಾಶಯದ ನೀರಿನ ಶೇಖರಣೆಯ ಪ್ರಮಾಣದಲ್ಲಿ ಆಗಸ್ಟ್ ತಿಂಗಳಿಂದ ಮೇ 2024ರವರೆಗೆ ಬೇಸಿಗೆ ಕಾಲಕ್ಕೆ ಬೆಂಗಳೂರು, ಮೈಸೂರು ಮತ್ತು ಇತರೆ ತಾಲ್ಲೂಕು ವ್ಯಾಪ್ತಿಗೆ ಕುಡಿಯುವ ನೀರಿನ ಆದ್ಯತೆಗೆ ಜಲಾಶಯದಿಂದ 6.13 ಟಿಎಂಸಿ ನೀರನ್ನು ನೀಡಬೇಕಾಗುತ್ತದೆ ಎಂದು ತಿಳಿಸಿದರು.

ಕಬಿನಿ ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹಣೆಯು 18.04 ಟಿಎಂಸಿ ಇದ್ದು, ಉಪಯುಕ್ತ ಸಂಗ್ರಹಣೆಯು 8.23 ಟಿಎಂಸಿ ಆಗಿರುತ್ತದೆ. ಜುಲೈ 27 ರಿಂದ ಆಗಸ್ಟ್ 5ರ ಹತ್ತು ದಿನಗಳ ಅವಧಿಗೆ ಕೆರೆ, ಕಟ್ಟೆಗಳಿಗೆ ನೀರು ತುಂಬಿಸಲು 1.29 ಟಿಎಂಸಿ ನೀರು ಹರಿಸಲಾಗಿದೆ ಎಂದು ತಿಳಿಸಿದರು.

ಕಬಿನಿ ಜಲಾಶಯದಲ್ಲಿ 1,08,060 ಎಕ್ಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಬೇಕಾಗಿದೆ. ಕಬಿನಿ ಬಲ ಮತ್ತು ಎಡದಂಡೆ ನಾಲೆಗಳಲ್ಲಿ 2390 ಕ್ಯೂಸೆಕ್ಸ್ ಹಾಗೂ ಕುಡಿಯುವ ಅಣೆಕಟ್ಟು ನಾಲೆಗೆ 900 ಕ್ಯೂಸೆಕ್ಸ್ ನೀರನ್ನು 120 ದಿನಗಖ ಅವಧಿಗೆ ಹರಿಸಲು 2.86 ಟಿಎಂಸಿ ನೀರಿನ ಅವಶ್ಯಕವಿದೆ ಎಂದು ವಿವರಿಸಿದರು‌.

ರೈತರ ವ್ಯವಸಾಯ ಜೀವನ ನಿಂತಿರುವುದೇ ನೀರಾವರಿ ವ್ಯವಸ್ಥೆಯಲ್ಲಿ. ನೀರಿನ ಸಮಸ್ಯೆ ಉಂಟಾಗಿ ರೈತರು ತೊಂದರೆಗೆ ಸಿಲುಕಬಾರದು. ನಾಲೆಯ ಪ್ರಾರಂಭದಿಂದ ಕೊನೆಯವರೆಗೂ ನೀರು ತಲುಪಬೇಕಾದರೆ ನೀರಿನ ನಿರ್ವಹಣೆಯು ವ್ಯವಸ್ಥಿತವಾಗಿರಬೇಕು. ನಾಲೆಯಲ್ಲಿ ಜಂಗಲ್ ಕಟ್ಟಿಂಗ್ ಹಾಗೂ ಹೂಳು ತೆಗೆಸಿ ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಗೂ ಮುನ್ನ ರೈತರ ಸಮಸ್ಯೆಯನ್ನು ಆಲಿಸಿದ ಸಚಿವರು, ಕಾವೇರಿ ನ್ಯಾಯಾಧೀಕರಣ ಅಂತಿಮ ತೀರ್ಪಿನ ಆದೇಶದ ಜೊತೆಗೆ ನಮ್ಮ ಭಾಗದ ರೈತರ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ರೈತರು ಯಾವುದೇ ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ರೈತರ ಹಿತರಕ್ಷಣೆಗೆ ಸರ್ಕಾರವು ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಶಾಸಕರಾದ ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ದರ್ಶನ್ ಧ್ರುವನಾರಾಯಣ, ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೆಂದ್ರ, ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪನಾಗ್, ಉಪಕಾರ್ಯದರ್ಶಿ ಸರಸ್ವತಿ, ಅಧೀಕ್ಷಕ ಎಂಜಿನಿಯರ್ ಶಿವಮಹದೇವಯ್ಯ, ಮುಖ್ಯ ಎಂಜಿನಿಯರ್ ವೆಂಕಟೇಶ್ ಸೇರಿದಂತೆ ಸಲಹಾ ಸಮಿತಿಯ ಸದಸ್ಯರು, ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.