ಮೈಸೂರು: ಚಂದ್ರಯಾನ -3 ಯಶಸ್ಸು ಇಸ್ರೋ ವಿಜ್ಞಾನಿಗಳಿಗೆ ಸಲ್ಲಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.
ಚಂದ್ರಯಾನ -3 ಯಶಸ್ಸಿನ ಕ್ರೆಡಿಟ್ ವಾರ್ ವಿಚಾರ ಕುರಿತು ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ನೆಹರು, ರಾಜೀವ್ ಗಾಂಧಿ ಕಾಲದಿಂದಲೂ ಬಾಹ್ಯಾಕಾಶಕ್ಕೆ ಒತ್ತು ನೀಡುತ್ತಾ ಬಂದಿದ್ದಾರೆ. ಅದರ ಪರಿಣಾಮ ಚಂದ್ರಯಾನ-3 ಯಶಸ್ವಿಯಾಗಿದೆ. ಹಾಗಾಗಿ ಇಸ್ರೋ ವಿಜ್ಞಾನಿಗಳಿಗೆ ಇದರ ಸಂಪೂರ್ಣ ಯಶಸ್ಸು ಸೇರುತ್ತದೆ ಎಂದರು.
ಬಿಜೆಪಿ ನಾಯಕರನ್ನು ಮೋದಿ ಬೀದಿಯಲ್ಲಿ ನಿಲ್ಲಿಸಿದ್ರು ಎಂಬ ಟ್ವೀಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಸಿ ಮಹದೇವಪ್ಪ, ರಾಜ್ಯದ ಜನರೇ ಈಗಾಗಲೇ ಅವರನ್ನು ಸೋಲಿಸಿ ಬೀದಿಗೆ ನಿಲ್ಲಿಸಿದ್ದಾರೆ. ಅವರ ಬಗ್ಗೆ ಮಾತನಾಡೋ ಅವಶ್ಯಕತೆ ಇಲ್ಲ ಎಂದು ಲೇವಡಿ ಮಾಡಿದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ ಮಹದೇವಪ್ಪ, ಕಾಂಗ್ರೆಸ್ ಗೆಲುವು ಬಿಜೆಪಿಗೆ ಮೈ ಪರಚಿಕೊಂಡಂತೆ ಆಗಿದೆ. ಯಾರು ಯಾರಿಗೆ ಕರೆ ಮಾಡಿದರು ಮಾತನಾಡಿದರು ಅನ್ನುವುದು ನಮ್ಮ ಆದ್ಯತೆ ಅಲ್ಲ. ಯಾರು ಯಾರಿಗೆ ಬೇಕಾದರೂ ಮಾತನಾಡಲಿ. ನಮ್ಮ ಸರ್ಕಾರ ಭದ್ರವಾಗಿದೆ ಯಾರನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಎಲ್ಲರೂ ಬದ್ದತೆಯಿಂದ ಇದ್ದಾರೆ. ಬಿಜೆಪಿಯವರು ಕಂಗಾಲಾಗಿದ್ದಾರೆ. ಯಾರು ಯಾರಿಗೆ ಕರೆ ಮಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ಅಮಿತ್ ಶಾ ಬೇರೆ ರಾಜ್ಯದಂತೆ ರಣತಂತ್ರ ವಿಚಾರ, ಎಲ್ಲಾ ಕಾಲದಲ್ಲೂ ಎಲ್ಲವೂ ನಡೆಯುವುದಿಲ್ಲ. Everyday is not Sunday ಎಂದು ಸಚಿವ ಡಾ ಹೆಚ್ ಸಿ ಮಹದೇವಪ್ಪ ಟಾಂಗ್ ನೀಡಿದರು.














