ಮನೆ ರಾಜ್ಯ ಕನಿಷ್ಠ ಮೂಲಭೂತ ಸೌಕರ್ಯ ಹೊಂದಿರದ ಸೋಮನಹಳ್ಳಿಯ ಮೊರಾರ್ಜಿ ದೇಸಾಯಿ ಶಾಲೆ: ವಿದ್ಯಾರ್ಥಿಗಳ ಪರದಾಟ

ಕನಿಷ್ಠ ಮೂಲಭೂತ ಸೌಕರ್ಯ ಹೊಂದಿರದ ಸೋಮನಹಳ್ಳಿಯ ಮೊರಾರ್ಜಿ ದೇಸಾಯಿ ಶಾಲೆ: ವಿದ್ಯಾರ್ಥಿಗಳ ಪರದಾಟ

0

ಮಂಡ್ಯ: ಕನಿಷ್ಠ ಮೂಲಭೂತ ಸೌಲಭ್ಯವನ್ನು ಹೊಂದಿರದ ಕಾರಣಕ್ಕಾಗಿ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದುಸ್ಥಿತಿಗೆ ಹಿಡಿದ ಕನ್ನಡಿಯಂತೆ ಈ ಶಾಲೆ ಯಿದ್ದು, ಶಿಕ್ಷಣ ಸಚಿವರೇ ಇಲ್ಲಿ ನೋಡಿ ಎಂದು ವಿದ್ಯಾರ್ಥಿಗಳು, ಪೋಷಕರು ಮನವಿ ಮಾಡಿದ್ದಾರೆ.

ಕೊಠಡಿ, ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿ ಹೊರತುಪಡಿಸಿ ಉಳಿದೆಲ್ಲವೂ ಖಾಲಿ ಖಾಲಿ ಯಿದ್ದು, ಕನಿಷ್ಠ ಮೂಲಭೂತ ಸೌಲಭ್ಯವನ್ನು ಕೂಡ ಈ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹೊಂದಿಲ್ಲ.

ಇದರಿಂದಾಗಿ ವಿದ್ಯಾರ್ಥಿಗಳು ಸಾಕಷ್ಟು ತೊಂದರೆಯನ್ನು ಅನುಭವಿಸುವಂತಾಗಿದ್ದು, ವಿದ್ಯಾರ್ಥಿಗಳ ಗೋಳು ಕೇಳೋರೂ ಇಲ್ಲವಾಗಿದೆ.

6 ಮತ್ತು 7ನೇ ತರಗತಿಗೆ ಡೆಸ್ಕ್ ಗಳು ಇಲ್ಲ. ಪರಿಣಾಮ ನೆಲದಲ್ಲೇ ಕುಳಿತು  ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಹಾಸ್ಟೆಲ್ ನಲ್ಲಿ ಮಂಚ, ಹಾಸಿಗೆ, ದಿಂಬು, ಬೆಡ್ ಶೀಟ್ ಕೂಡ ಇಲ್ಲ.  ಮನೆಯಿಂದಲೇ ಚಾಪೆ, ದಿಂಬು, ಬೆಡ್ ಶೀಟ್ ತಂದು ಮಕ್ಕಳು ಮಲಗುತ್ತಿದ್ದಾರೆ. ಶಾಲೆಯಲ್ಲಿ ಇರುವ 250 ಮಕ್ಕಳಿಗೆ ಒಂದೇ ಬೋರ್ ವೆಲ್ ಇದ್ದು, ಶುದ್ಧೀಕರಿಸಿದ ನೀರಿಲ್ಲದೆ ಪದೇ ಪದೇ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

6 ತಿಂಗಳ ಹಿಂದೆ ಉದ್ಘಾಟನೆಗೊಂಡ ಕಟ್ಟಡ ಕಳಪೆಯಾಗಿರುವುದು ಮಾತ್ರವಲ್ಲದೇ ಅಪೂರ್ಣವಾಗಿದೆ. ಉದ್ಘಾಟನೆಗೊಂಡ 6 ತಿಂಗಳಲ್ಲೇ ಗೋಡೆ, ಕಬ್ಬಿಣ ಕಿತ್ತು ಬರುತ್ತಿದೆ. ಶೌಚಾಲಯ, ಸ್ನಾನ ಗೃಹ, ಭೋಜನಾಲಯದಲ್ಲಿ ನಲ್ಲಿಗಳು ಸೋರುತ್ತಿವೆ.

ಟೀಚರ್ ಇದ್ದರೂ ವಸತಿ ಗೃಹಗಳನ್ನು ಬಳಸುತ್ತಿಲ್ಲ. ಶಾಲೆಗೆ ಅವಶ್ಯಕವಾಗಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಪಟ್ಟಿ ಮಾಡಿಕೊಟ್ಟರೂ ಪರಿಹಾರ ದೊರೆತಿಲ್ಲ ಎಂದು ಸಿಬ್ಬಂದಿಗಳು ಅಲವತ್ತುಕೊಂಡಿದ್ದಾರೆ.

ಶಿಕ್ಷಣ ಇಲಾಖೆ, ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಮಕ್ಕಳು ಸೊರಗುತ್ತಿದ್ದಾರೆ.  ಶಾಸಕ, ಡಿಸಿ, ಎಡಿಸಿ, ಜಿಪಂ ಸಿಇಓ ಸೇರಿ ಅನೇಕರು ಬಂದು ಹೋದರೂ ಏನೂ ಪ್ರಯೋಜನವಾಗಿಲ್ಲ.  ಶಿಕ್ಷಣ ಸಚಿವರು ಇತ್ತ ಗಮನಹರಿಸಿ ತಕ್ಷಣವೇ ವಸತಿ ಶಾಲೆಗೆ ಮೂಲಭೂತ ಸೌಕರ್ಯಗಳ ಕಲ್ಪಿಸುವಂತೆ ಸ್ಥಳೀಯರ ಆಗ್ರಹಿಸಿದ್ದಾರೆ.

ಮೂಲಭೂತ ಸೌಕರ್ಯ ಒದಗಿಸುವಂತೆ ಸೂಚನೆ

ಸೋಮನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 250 ವಿದ್ಯಾರ್ಥಿಗಳು ಅಭ್ಯಾಸಿಸುತ್ತಿದ್ದು, ಸದರಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದರಿಂದ  ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ತುರ್ತಾಗಿ ಒದಗಿಸಿಕೊಡುವಂತೆ  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪತ್ರ ಬರೆಯಲಾಗಿದೆ. ಅಂತೆಯೇ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಿಗೂ ಮನವಿ ಮಾಡಲಾಗಿದೆ.