ಮನೆ ರಾಜ್ಯ ಆರ್‌ ಟಿಒಗಳಲ್ಲಿ ವ್ಯಾಪಕ ಭ್ರಷ್ಟಾಚಾರ: ಬೆಂಗಳೂರಿನ ಆರ್‌ ಟಿಒ ಕಚೇರಿಗಳ ಮೇಲೆ ಲೋಕಾಯುಕ್ತರ ದಾಳಿ

ಆರ್‌ ಟಿಒಗಳಲ್ಲಿ ವ್ಯಾಪಕ ಭ್ರಷ್ಟಾಚಾರ: ಬೆಂಗಳೂರಿನ ಆರ್‌ ಟಿಒ ಕಚೇರಿಗಳ ಮೇಲೆ ಲೋಕಾಯುಕ್ತರ ದಾಳಿ

0

ಬೆಂಗಳೂರು: ಆರ್‌ ಟಿಒಗಳಲ್ಲಿ ಅಕ್ರಮಗಳು ಮತ್ತು ವ್ಯಾಪಕ ಭ್ರಷ್ಟಾಚಾರದ ಕುರಿತು ಸಾರ್ವಜನಿಕರಿಂದ ಲೋಕಾಯುಕ್ತಕ್ಕೆ ಹಲವಾರು ದೂರುಗಳು ಬಂದಿದ್ದರಿಂದ ಕರ್ನಾಟಕ ಲೋಕಾಯುಕ್ತ ಪೊಲೀಸ್ ಮತ್ತು ನ್ಯಾಯಾಂಗ ವಿಭಾಗಗಳನ್ನೊಳಗೊಂಡ ತಂಡಗಳು ಬುಧವಾರ ಬೆಂಗಳೂರಿನ ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳ ಮೇಲೆ (ಆರ್‌ ಟಿಒ) ಏಕಕಾಲದಲ್ಲಿ ದಿಢೀರ್ ದಾಳಿ ನಡೆಸಿವೆ.

ಜಯನಗರ ಮತ್ತು ರಾಜಾಜಿನಗರದ ಆರ್‌ ಟಿಒಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಮತ್ತು ಯಲಹಂಕ ಮತ್ತು ಯಶವಂತಪುರದಲ್ಲಿನ ಆರ್‌ ಟಿಒಗಳಿಗೆ  ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆಎನ್ ಫಣೀಂದ್ರ ಭೇಟಿ ನೀಡಿದರು.

ಲೋಕಾಯುಕ್ತ ಪೊಲೀಸರಿಗೆ ಸಾರ್ವಜನಿಕರಿಂದ ಆರ್‌ಟಿಒಗಳಲ್ಲಿ ಅಕ್ರಮಗಳು ಮತ್ತು ಭ್ರಷ್ಟಾಚಾರದ ಹಲವಾರು ದೂರುಗಳು ಬಂದಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಡ್ರೈವಿಂಗ್ ಲೈಸೆನ್ಸ್ ಮತ್ತು ಪರ್ಮಿಟ್ ನೀಡಲು ಬಂದಿರುವ ಅರ್ಜಿಗಳ ಸಂಖ್ಯೆ, ಬಾಕಿ ಇರುವ ಅರ್ಜಿಗಳು ಮತ್ತು ಕಾರಣಗಳು, ಯಾವುದೇ ಕಾರಣ ನೀಡದೆ ಅರ್ಜಿಗಳನ್ನು ತಿರಸ್ಕರಿಸುವುದು, ಏಜೆಂಟ್ ಗಳ ಹಾವಳಿ ಮತ್ತಿತರ ಅಕ್ರಮ ಚಟುವಟಿಕೆ ಕುರಿತು ಮಾಹಿತಿ ಸಂಗ್ರಹಿಸುವ ಮೂಲಕ ಆರೋಪ ನಿಜವೆಂದು ದೃಢಪಡಿಸಿದ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರ್‌ ಟಿಒಗಳಲ್ಲಿ ದೋಷಾರೋಪಣೆ ದಾಖಲೆಗಳನ್ನು ಶೋಧಿಸಿ ವಶಪಡಿಸಿಕೊಳ್ಳಲು ವಾರೆಂಟ್ ಹೊರಡಿಸಿದ್ದಾರೆ.

ಬೆಂಗಳೂರಿನಲ್ಲಿರುವ 12 ಆರ್‌ ಟಿಒಗಳ ಮೇಲಿನ ದಾಳಿಗಾಗಿ ಲೋಕಾಯುಕ್ತರು 10 ತಂಡಗಳನ್ನು ರಚಿಸಿದ್ದಾಗಿ ಮೂಲಗಳು ತಿಳಿಸಿವೆ. ಆರ್‌ ಟಿಒಗಳೊಂದಿಗೆ ವ್ಯವಹರಿಸುವ ಖಾಸಗಿ ಏಜೆಂಟರ ಕಚೇರಿಗೂ ತಂಡವೊಂದು ಭೇಟಿ ನೀಡಿದ್ದು, ಶೋಧ ಕಾರ್ಯಾಚರಣೆ ನಡೆಸಿದೆ.