ಮನೆ ಸ್ಥಳೀಯ ಆಯುಷ್ಮಾನ್ ಹೆಲ್ತ್ ಕೇರ್ ಸೆಂಟರ್‌ಗೆ ಜಿಟಿಡಿ ಚಾಲನೆ

ಆಯುಷ್ಮಾನ್ ಹೆಲ್ತ್ ಕೇರ್ ಸೆಂಟರ್‌ಗೆ ಜಿಟಿಡಿ ಚಾಲನೆ

0

ಮೈಸೂರು: ವಯೋಸಹಜ ಕಾಯಿಲೆಗಳಿಂದ ಬಳಲುವ ಹಿರಿಯ ನಾಗರಿಕರು, ಶಸ್ತ್ರ ಚಿಕಿತ್ಸೆಗೆ ಒಳಗಾಗಿ ತಿಂಗಳುಗಟ್ಟಲೆ ಚೇತರಿಸಿಕೊಳ್ಳುವವರಿಗೆ ಆರೈಕೆ, ಮನೋರೋಗ ಗುಣಪಡಿಸುವಂತಹ ಅತ್ಯುಪಕಯುಕ್ತ ಸೇವೆ ನೀಡುವ ರಿಂಗ್ ರಸ್ತೆಯ ದೇವೇಗೌಡ ವೃತ್ತದ ಬಳಿಯ ಮಾನಸಿ ನಗರದಲ್ಲಿರುವ 72 ಹಾಸಿಗೆಯ ಆಯುಷ್ಮಾನ್ ನ್ಯೂರೊ ರಿಹಬಿಲಿಟೇಷನ್ ಅಂಡ್ ಸೀನಿಯರ್ ಸಿಟಿಜನ್ ಕೇರ್ ಸೆಂಟರ್ ಅನ್ನು ಶಾಸಕ ಜಿ.ಟಿ. ದೇವೇಗೌಡ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘‘ಮನೆಯ ವಾತಾವರಣದಲ್ಲಿ ಕೆಲವು ಕಾಯಿಲೆಗಳಿಗೆ ಹಾರೈಕೆ ಮಾಡಲು ಸಾಧ್ಯವಾಗುವುದಿಲ್ಲ. ಅಂತಹವರಿಗೆ ನರ್ಸಿಂಗ್ ಕೇರ್ ಬೇಕಾಗುತ್ತದೆ. ಮಾತ್ರವಲ್ಲದೇ ಕೆಲವರು ನಾನಾ ಬಗೆಯ ಶಸಚಿಕಿತ್ಸೆಗೆ ಒಳಗಾಗುತ್ತಾರೆ. ಅದಾದ ನಂತರ ಕೆಲ ತಿಂಗಳ ವರೆಗೆ ಅವರಿಗೆ ಮನೆಯಲ್ಲಿ ಹಾರೈಕೆ ಮಾಡಬೇಕಾಗುತ್ತದೆ. ಜತೆಗೆ ಮನೋರೋಗದಂತಹ ನ್ಯೂರೊ ರಿಹಬಿಲಿಟೇಷನ್ ಕೇರ್ ಅನ್ನು ಮನೆಯಲ್ಲಿ ನೀಡಲು ಸಾಧ್ಯವಾಗುವುದಿಲ್ಲ. ಇಂತಹ ರೋಗಿಗಳಿಗೆ ರಿಯಾಯಿತಿ ದರದಲ್ಲಿ ನರ್ಸಿಂಗ್ ಕೇರ್ ಹಾಗೂ ಸೂಕ್ತ ಹಾರೈಕೆ ನೀಡಲೆಂದೆ ಈ ಕೇಂದ್ರ ಆರಂಭವಾಗಿದೆ. ಈ ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯಲೆಂದು ಆಶಿಸುತ್ತೇನೆ’’ ಎಂದರು.

‘‘ಉದ್ಯಾನ, ಹವಾನಿಯಂತ್ರಿತ ಕೊಠಡಿ, ಟಿವಿ, ಗುಣಮಟ್ಟದ ಆಹಾರ, ಫಿಜಿಯೋಥೆರಪಿ, ಪ್ರಯೋಗಾಲಯ, ಯೋಗ, ಆದ್ಯಾತ್ಮಿಕ ಜೀವನಕ್ಕೆ ಸಹಕಾರ, ಪಾರ್ಶ್ವವಾಯುವಿನಿಂದ ಬಳಲುವವರಿಗೆ ನೀಡುವ ಪರಿಣಾಮಕಾರಿ ಚಿಕಿತ್ಸೆಯ ಲಾಭವನ್ನು ನಗರದ ಜನತೆ ಪಡೆದುಕೊಳ್ಳಬೇಕು’’ ಎಂದರು.

ಕನಕಪುರ ದೇಗುಲ ಮಠದ ನಿರ್ವಾಣ ಸ್ವಾಮೀಜಿ ಮಾತನಾಡಿ, ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯಲೆಂದು ಆಶಿಸಿದರು.

ಕೇಂದ್ರದ ಸಂಸ್ಥಾಪಕರಾದ ಎನ್. ಪವನ್ ಕುಮಾರ್ ಮಾತನಾಡಿ, ಬದಲಾದ ಆಧುನಿಕ ಜಗತ್ತಿನಲ್ಲಿ ಹಿರಿಯ ನಾಗರಿಕರಿಗೆ ಸಮರ್ಪಕ ಆರೋಗ್ಯ ಸೇವೆ ದೊರೆಯುತ್ತಿಲ್ಲ. ಮಾತ್ರವಲ್ಲದೇ ನ್ಯೂಕ್ಲಿಯರ್ ಕುಟುಂಬಗಳಿಂದಾಗಿ ಮನೆಗಳಲ್ಲಿ ಮನೋರೋಗ ಸೇರಿದಂತೆ ಕೆಲವೊಂದು ಆರೈಕೆ ಮಾಡಲು ಸಾಧ್ಯವಾಗುವುದಿಲ್ಲ. ಅಂತಹವರಿಗೆ ಈ ಕೇಂದ್ರದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಆರೈಕೆ ನೀಡಲಾಗುವುದು ಎಂದು ತಿಳಿಸಿದರು. 

ಸಂಸ್ಥೆಯ ನಿರ್ದೇಶಕ ಎಂ.ಎಚ್. ರಿಯಾಜ್ ಹಾಗೂ ಇತರರು ಇದ್ದರು.