ನಟ ಶಿವರಾಜ್ಕುಮಾರ್ ಅವರಿಗೆ ಭೂಗತ ಲೋಕದ ಕಥಾಹಂದರ ಇರುವ ಸಿನಿಮಾಗಳು ಹೊಸದೇನೂ ಅಲ್ಲ. ಈಗಾಗಲೇ ಅವರು ಅಂಥ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ಭರ್ಜರಿಯಾಗಿ ರಂಜಿಸಿದ್ದಾರೆ. ಇಂದು (ಅ.19) ಬಿಡುಗಡೆ ಆಗಿರುವ ‘ಘೋಸ್ಟ್’ ಸಿನಿಮಾದಲ್ಲೂ ಅಂಥ ಒಂದು ಅಂಡರ್ ವರ್ಲ್ಡ್ ಜಗತ್ತಿನ ಕಥೆ ಇದೆ. ಆದರೆ ಒಂದಷ್ಟು ಕಾರಣಗಳಿಂದಾಗಿ ಬೇರೆ ಚಿತ್ರಗಳಿಗಿಂತಲೂ ‘ಘೋಸ್ಟ್’ ಭಿನ್ನ ಎನಿಸಿಕೊಳ್ಳುತ್ತದೆ. ನಿರ್ದೇಶಕ ಶ್ರೀನಿ ಅವರು ತುಂಬ ವೇಗವಾದ ಚಿತ್ರಕಥೆಯ ಮೂಲಕ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನ ಮಾಡಿದ್ದಾರೆ. ಶಿವರಾಜ್ ಕುಮಾರ್ ಅವರು ಖಡಕ್ ಆದಂತಹ ಮ್ಯಾನರಿಸಂ ಮೂಲಕ ಅಭಿಮಾನಿಗಳ ಎದುರು ಬಂದಿದ್ದಾರೆ.
‘ಘೋಸ್ಟ್’ ಚಿತ್ರದಲ್ಲಿ ಥ್ರಿಲ್ಲರ್ ಕಹಾನಿ:
ನಿರ್ದೇಶಕ ಶ್ರೀನಿ ಅವರು ‘ಘೋಸ್ಟ್’ ಸಿನಿಮಾದಲ್ಲಿ ಥ್ರಿಲ್ಲಿಂಗ್ ಆದಂತಹ ಒಂದು ಕಥೆಯನ್ನು ತೆರೆದಿಟ್ಟಿದ್ದಾರೆ. ಒಂದು ಜೈಲನ್ನು ಕಥಾನಾಯಕನೇ ಹೈಜಾಕ್ ಮಾಡುವ ದೃಶ್ಯದ ಮೂಲಕ ಸಿನಿಮಾ ಆರಂಭ ಆಗುತ್ತದೆ. ಬಹುತೇಕ ಕಹಾನಿ ಒಂದೇ ಲೊಕೇಷನ್ ನಲ್ಲಿ ನಡೆಯುತ್ತದೆ. ಹಾಗಾಗಿ ಕೆಲವೊಮ್ಮೆ ಏಕತಾನತೆ ಕಾಡುತ್ತದೆ. ಆದರೆ ಫ್ಲ್ಯಾಶ್ಬ್ಯಾಕ್ ತಂತ್ರದ ಮೂಲಕ 10 ವರ್ಷದ ಹಳೇ ಕಹಾನಿಯನ್ನೂ ಹೇಳಲಾಗುತ್ತದೆ. ಅಷ್ಟಕ್ಕೂ ಕಥಾನಾಯಕ ಎಲ್ಲವನ್ನೂ ಬಿಟ್ಟು ಜೈಲನ್ನೇ ಹೈಜಾಕ್ ಮಾಡಿದ್ದು ಯಾಕೆ ಎಂಬುದು ಪ್ರೇಕ್ಷಕರ ಮನದಲ್ಲಿ ಕಾಡುವ ದೊಡ್ಡ ಪ್ರಶ್ನೆ. ಅದಕ್ಕೆ ಕ್ಲೈಮ್ಯಾಕ್ಸ್ ನಲ್ಲಿ ಉತ್ತರ ಸಿಗುತ್ತದೆ.
ಕಾಲಹರಣಕ್ಕೆ ಜಾಗವಿಲ್ಲ:
‘ಘೋಸ್ಟ್’ ಸಿನಿಮಾ ಭಿನ್ನ ಎನಿಸಿಕೊಳ್ಳುವುದು ವೇಗವಾದ ನಿರೂಪಣೆಯ ಕಾರಣಕ್ಕೆ. ಹಾಡಿನ ನೆಪದಲ್ಲಿ ನಿರ್ದೇಶಕರು ಸಮಯ ಹಾಳು ಮಾಡಿಲ್ಲ. ದೀರ್ಘವಾದ ಸಂಭಾಷಣೆಗಳು ಇದರಲ್ಲಿ ಇಲ್ಲ. ಎಲ್ಲವನ್ನೂ ತುಂಬ ಚುರುಕಾಗಿ ಮತ್ತು ಚುಟುಕಾಗಿ ಮುಗಿಸಬೇಕು ಎಂಬುದು ನಿರ್ದೇಶಕರ ಗುರಿ. ಆ ಪ್ರಯತ್ನಕ್ಕೆ ಸಂಕಲನಕಾರ ದೀಪು ಎಸ್. ಕುಮಾರ್ ಅವರು ಸಾಥ್ ನೀಡಿದ್ದಾರೆ. ಹಾಗಾಗಿ ಈ ಸಿನಿಮಾ ಆರಂಭದಿಂದ ಕೊನೆವರೆಗೆ ಪಟಪಟನೆ ಸಾಗುತ್ತದೆ. ಕಾಮಿಡಿ ಇದ್ದರೂ ಕೂಡ ಅದು ತುಂಬ ಕಡಿಮೆ ಪ್ರಮಾಣದಲ್ಲಿದೆ. ಕಾಮಿಡಿ ಸಲುವಾಗಿ ಪ್ರತ್ಯೇಕ ದೃಶ್ಯಗಳನ್ನು ಸೇರಿಸಿಲ್ಲ. ಕಥೆಯಲ್ಲಿ ಹೀರೋಯಿನ್ ಪಾತ್ರವೇ ಇಲ್ಲ. ಒಟ್ಟಾರೆ ಕಥೆಯ ವಿಸ್ತಾರ ದೊಡ್ಡದಾಗಿದ್ದರೂ ಕೂಡ 2 ಗಂಟೆ 14 ನಿಮಿಷದ ಅವಧಿಯಲ್ಲಿ ಎಲ್ಲವನ್ನೂ ಹೇಳಿಮುಗಿಸಲು ಸಾಧ್ಯವಾಗಿದ್ದು ಈ ಎಲ್ಲ ಕಾರಣಗಳಿಂದ.
ಆ್ಯಕ್ಷನ್ ಪ್ರಿಯರಿಗೆ ಮಾಸ್ ಸಿನಿಮಾ:
ಶಿವರಾಜ್ ಕುಮಾರ್ ಅವರನ್ನು ತುಂಬ ಮಾಸ್ ಆಗಿ ತೋರಿಸಲು ಶ್ರೀನಿ ಪ್ರಯತ್ನಿಸಿದ್ದಾರೆ. ಅದಕ್ಕೆ ತಕ್ಕಂತೆಯೇ ಫೈಟಿಂಗ್ ದೃಶ್ಯಗಳನ್ನು ಕಂಪೋಸ್ ಮಾಡಲಾಗಿದೆ. ಶಿವರಾಜ್ಕುಮಾರ್ ಅವರ ಅಭಿಮಾನಿಗಳಿಗೆ ಇದು ಹೆಚ್ಚು ಇಷ್ಟ ಆಗುತ್ತದೆ. ಗನ್ಗಳನ್ನು ಬಳಸಿಕೊಂಡ ರೀತಿಯೇ ಶಿವಣ್ಣನ ಕಣ್ಣನ್ನೂ ಬಳಸಿಕೊಂಡಿದ್ದಾರೆ ನಿರ್ದೇಶಕರು. ಮಾಸ್ ಸಿನಿಮಾ ಎಂದಮಾತ್ರಕ್ಕೆ ಮಾರುದ್ದದ ಡೈಲಾಗ್ಗಳನ್ನೂ ಹೇಳಿಸಲಾಗಿಲ್ಲ. ಅಗತ್ಯ ಇರುವ ಕಡೆ ಮಾತ್ರ ಚುಟುಕಾದ ಪಂಚ್ ಡೈಲಾಗ್ಗಳು ಕೇಳಿಸಿವೆ. ಚಿತ್ರದ ಮಾಸ್ ಗುಣ ಜಾಸ್ತಿ ಆಗಿರುವುದು ಅರ್ಜುನ್ ಜನ್ಯ ಅವರ ಹಿನ್ನೆಲೆ ಸಂಗೀತದ ಮೂಲಕ. ಹಾಡುಗಳಿಲ್ಲದ ಕಾರಣ ಹಿನ್ನೆಲೆ ಸಂಗೀತದಲ್ಲೇ ಅವರು ಭರ್ಜರಿ ಸ್ಕೋರ್ ಮಾಡಿದ್ದಾರೆ. ಮಹೇನ್ ಸಿಂಹ ಅವರ ಛಾಯಾಗ್ರಹಣ ಮೆಚ್ಚುವಂತಿದೆ.
ಲಾಜಿಕ್ ಕೇಳುವಂತಿಲ್ಲ:
‘ಘೋಸ್ಟ್’ ಕಥೆ ಚೆನ್ನಾಗಿದೆ. ಆದರೆ ಅದರಲ್ಲಿ ಲಾಜಿಕ್ ಹುಡುಕೋದು ಕಷ್ಟ. ಯಾವುದೇ ಪ್ರಶ್ನೆಗಳನ್ನು ಕೇಳದೇ ತೆರೆಮೇಲೆ ಕಂಡಿದ್ದನ್ನೆಲ್ಲ ಒಪ್ಪಿಕೊಂಡರೆ ಮಾತ್ರ ‘ಘೋಸ್ಟ್’ ಸಿನಿಮಾ ಸೂಪರ್ ಎನಿಸುತ್ತದೆ. ಇದೇಕೆ ಹೀಗಾಯಿತು? ಅದೇಕೆ ಹಾಗಾಯಿತು ಅಂತ ಲಾಜಿಕಲ್ ಪ್ರಶ್ನೆ ಕೇಳಿದರೆ ಚಿತ್ರದ ಮ್ಯಾಜಿಕಲ್ ಗುಣ ಮಾಯವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಿರ್ದೇಶಕ ಶ್ರೀನಿ ಅವರು ಪ್ರೇಕ್ಷಕರಿಗೆ ಯಾವುದನ್ನೂ ಯೋಚಿಸಲು ಸಮಯಾವಕಾಶವನ್ನೇ ನೀಡಿಲ್ಲ. ಒಂದರಹಿಂದೊಂದು ದೃಶ್ಯಗಳು ಪಟಪಟನೆ ಸಾಗುತ್ತವೆ. ಸ್ವಲ್ಪ ಗಮನ ಅತ್ತಿತ್ತ ಹರಿದರೂ ಏನೋ ಒಂದನ್ನು ಮಿಸ್ ಮಾಡಿಕೊಂಡಂತೆ ಅನಿಸುತ್ತದೆ. ಇಂಥ ಹರಿಬರಿಯ ನಿರೂಪಣೆಯು ಒಮ್ಮೆ ಪ್ಲಸ್ ಆದರೆ, ಕೆಲವೊಮ್ಮೆ ಮೈನಸ್ ಎನಿಸಿಕೊಳ್ಳುತ್ತದೆ. ವಾವ್ ಎನಿಸುವಂತಹ ಕೆಲವು ದೃಶ್ಯಗಳನ್ನು ಶ್ರೀನಿ ಹೆಣೆದಿದ್ದಾರೆ. ಆದರೆ ಮುಖ್ಯ ಕಥೆಯ ಜೊತೆ ಆ ದೃಶ್ಯಗಳಿಗೆ ಇರುವ ನಂಟನ್ನು ನಂಬಲಾರ್ಹ ರೀತಿಯಲ್ಲಿ ಕಟ್ಟಿಕೊಡುವಲ್ಲಿ ಎಡವಿದಂತಿದೆ.
ಹೇಗಿದೆ ಶಿವಣ್ಣನ ಯಂಗ್ ಲುಕ್?
ಈ ಸಿನಿಮಾದ ಟ್ರೇಲರ್ನಲ್ಲಿ ಹೆಚ್ಚು ಹೈಲೈಟ್ ಆಗಿದ್ದು ಶಿವರಾಜ್ ಕುಮಾರ್ ಅವರ ಯಂಗ್ ಲುಕ್. ದೊಡ್ಡ ಪರದೆಯಲ್ಲಿ ಅದನ್ನು ನೋಡಿ ಆಸ್ವಾದಿಸಬೇಕು ಎಂದುಕೊಂಡ ಪ್ರೇಕ್ಷಕರು ಕ್ಲೈಮ್ಯಾಕ್ಸ್ವರೆಗೂ ಕಾಯಬೇಕು. ಈ ಸನ್ನಿವೇಶಗಳಲ್ಲೇ ಅನುಪಮ್ ಖೇರ್ ಅವರ ಪಾತ್ರ ಬರುತ್ತದೆ. ಕೆಲವೇ ಹೊತ್ತು ಕಾಣಿಸಿಕೊಂಡರೂ ಕಥೆಯ ಆಳವನ್ನು ವಿವರಿಸುವ ಪಾತ್ರವಾಗಿ ಅದು ಸ್ಥಾನ ಪಡೆದುಕೊಂಡಿದೆ. ಅಭಿಜಿತ್ ಕೂಡ ಒಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆದರೆ ಅವರಿಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ. ಟಿವಿ ವರದಿಗಾರ್ತಿ ಪಾತ್ರ ಮಾಡಿರುವ ಅರ್ಚನಾ ಜೋಯಿಸ್ ಕೂಡ ಕೆಲವು ದೃಶ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ.














