ಮನೆ ಮನರಂಜನೆ ಇನಾಮ್ದಾರ್‌’ ಸಿನಿಮಾದ “ಚಂದಾನೆ ಚಂದಾನೆ…’ ಎಂಬ ಹಾಡು ಬಿಡುಗಡೆ

ಇನಾಮ್ದಾರ್‌’ ಸಿನಿಮಾದ “ಚಂದಾನೆ ಚಂದಾನೆ…’ ಎಂಬ ಹಾಡು ಬಿಡುಗಡೆ

0

ಇತ್ತೀಚೆಗಷ್ಟೇ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿರುವ “ಇನಾಮ್ದಾರ್‌’ ಸಿನಿಮಾದ ಟ್ರೇಲರ್‌ ಸೋಶಿಯಲ್‌ ಮೀಡಿಯಾದಲ್ಲಿ ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ಇದರ ನಡುವೆಯೇ ಚಿತ್ರತಂಡ ಸಿನಿಮಾದಲ್ಲಿ ಬರುವ “ಚಂದಾನೆ ಚಂದಾನೆ…’ ಎಂಬ ಹಾಡೊಂದನ್ನು ಬಿಡುಗಡೆ ಮಾಡಿದೆ.

ಬೆಳಗಾವಿಯ ಸರ್ದಾರ್‌ ಗ್ರೌಂಡ್‌ ನ‌ಲ್ಲಿ ನಡೆದ ಅದ್ಧೂರಿ ಸಾರ್ವಜನಿಕ ಸಮಾರಂಭದಲ್ಲಿ ಪ್ರಮೋದ್‌ ಮುತಾಲಿಕ್‌ ಮತ್ತು ಉದ್ಯಮಿ ವಿಠಲ್‌ ಹೆಗಡೆ ಈ ಹಾಡನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಪ್ರಮೋದ್‌ ಮರವಂತೆ ಸಾಹಿತ್ಯ ಮತ್ತು ನಕುಲ್‌ ಅಭಯಂಕರ್‌ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ರೊಮ್ಯಾಂಟಿಕ್‌ ಗೀತೆಗೆ ನಕುಲ್‌ ಅಭಯಂಕರ್‌ ಮತ್ತು ರಮ್ಯಾ ಭಟ್‌ ಧ್ವನಿಯಾಗಿದ್ದಾರೆ. ಹಾಡಿನಲ್ಲಿ ನಾಯಕ ನಟ ರಂಜನ್‌ ಛತ್ರಪತಿ, ನಾಯಕಿ ಚಿರಶ್ರೀ ಅಂಚನ್‌ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ.

 “ಚಂದಾನೆ ಚಂದಾನೆ…’ ಗೀತೆಯ ಬಗ್ಗೆ ಮಾತನಾಡುವ “ಇನಾಮ್ದಾರ್‌’ ಸಿನಿಮಾದ ನಿರ್ದೇಶಕ ಸಂದೇಶ್‌ ಶೆಟ್ಟಿ ಆಜ್ರಿ, “ಸಿನಿಮಾದಲ್ಲಿ ಕಾಡಿನಲ್ಲಿರುವ ಕಪ್ಪು ಸುಂದರಿಯ ಸುತ್ತ ನಡೆಯುವ ಹಾಡು ಇದಾಗಿದೆ. ಈ ಹಾಡಿನಲ್ಲಿ ಆದಿಮಾಸಿ ಜನಾಂಗದ ಭಾವನಾತ್ಮಕ ವಿಷಯಗಳು ಮತ್ತು ಭಾಂಧವ್ಯ ಬೆಸೆಯುವ ದೃಶ್ಯಗಳಿವೆ. ಸಾಹಿತ್ಯ, ಸಂಗೀತ, ಹಾಡಿನ ಚಿತ್ರಣ ಎಲ್ಲವೂ ನೋಡುಗರ ಮನಮುಟ್ಟುವಂತಿದೆ’ ಎಂದು ವಿವರಣೆ ನೀಡುತ್ತಾರೆ.

 “ಈಗಾಗಲೇ ಬಿಡುಗಡೆಯಾಗಿರುವ “ಇನಾಮ್ದಾರ್‌’ ಸಿನಿಮಾದ ಹಾಡುಗಳು, ಟ್ರೇಲರ್‌ ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಕೂಡ ಥಿಯೇಟರ್‌ ನಲ್ಲಿ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬುದು ನಿರ್ಮಾಪಕ ನಿರಂಜನ್‌ ಶೆಟ್ಟಿ ತಲ್ಲೂರು ಅವರ ವಿಶ್ವಾಸದ ಮಾತು.

ಸಮಾರಂಭದಲ್ಲಿ ಹಾಜರಿದ್ದ ನಾಯಕ ರಂಜನ್‌ ಛತ್ರಪತಿ, ನಾಯಕಿ ಚಿರಶ್ರೀ ಅಂಚನ್‌, ನಟರಾದ ಪ್ರಮೋದ್‌ ಶೆಟ್ಟಿ, ಎಂ. ಕೆ. ಮಠ, ರಘು ಪಾಂಡೇಶ್ವರ್‌, ಸಂಜು ಬಸಯ್ಯ ಮೊದಲಾದವರು “ಇನಾಮಾªರ್‌’ ಸಿನಿಮಾದ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು.

 “ಶ್ರೀಕುಂತಿಯಮ್ಮ ಪ್ರೊಡಕ್ಷನ್ಸ್‌’ ಮತ್ತು “ತಸ್ಮೈ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ಇನಾಮ್ದಾರ್‌’ ಚಿತ್ರದ ಟೈಟಲ್‌ಗೆ “ಕಪ್ಪು ಸುಂದರಿಯ ಸುತ್ತ’ ಎಂಬ ಟ್ಯಾಗ್‌ ಲೈನ್‌ ಇದೆ. ಸದ್ಯ ಭರ್ಜರಿಯಾಗಿ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ “ಇನಾಮ್ದಾರ್‌’ ಸಿನಿಮಾವನ್ನು ಇದೇ ಅಕ್ಟೋಬರ್‌ 27ಕ್ಕೆ ತೆರೆಗೆ ತರಲು ಯೋಚನೆ ಹಾಕಿಕೊಂಡಿದೆ ಚಿತ್ರತಂಡ.