ಮನೆ ಅಪರಾಧ ಹೆಣ್ಣು ಭ್ರೂಣ  ಪತ್ತೆ ಮಾಡಿ ಗರ್ಭಪಾತ: ನಾಲ್ವರ ಬಂಧನ

ಹೆಣ್ಣು ಭ್ರೂಣ  ಪತ್ತೆ ಮಾಡಿ ಗರ್ಭಪಾತ: ನಾಲ್ವರ ಬಂಧನ

0

ಬೆಂಗಳೂರು: ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡಿ ಗರ್ಭಪಾತ ಮಾಡಿಸುತ್ತಿದ್ದ ದಂಧೆಯನ್ನು ಪತ್ತೆ ಹಚ್ಚಿರುವ ಬೈಯಪ್ಪನಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಶಿವಲಿಂಗೇಗೌಡ, ನಯನ್ ಕುಮಾರ್, ನವೀನ್ ಕುಮಾರ್, ವೀರೇಶ್ ಎಂದು ಗುರುತಿಸಲಾಗಿದೆ.

ಕಳೆದ ಅಕ್ಟೋಬರ್​ 15ರಂದು ಪಿಎಸ್ಐ ಮಂಜುನಾಥ್ ನೇತೃತ್ವದ ತಂಡ ರಾತ್ರಿ ಹೊತ್ತು ಗಸ್ತು ತಿರುಗುತ್ತಿತ್ತು. ಈ ವೇಳೆ ಅನುಮಾನಾಸ್ಪದವಾಗಿ ಕಾರು ಚಲಾಯಿಸಿಕೊಂಡು ಬಂದ ವ್ಯಕ್ತಿಗೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದರಿಂದ ಅನುಮಾನಗೊಂಡ ಪೊಲೀಸರು ಬೈಕ್‌ ನಲ್ಲಿ ಕಾರನ್ನು ಬೆನ್ನಟ್ಟಿ ತಡೆದಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಶಿವಲಿಂಗೇಗೌಡ, ನಯನ್ ಕುಮಾರ್ ಹಾಗೂ ಗರ್ಭಿಣಿಯನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ ಸಮರ್ಪಕವಾಗಿ ಉತ್ತರಿಸದ ಕಾರಣ ಇವರನ್ನು ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಪಾಂಡವಪುರ ಬಳಿಯ ವೀರೇಶ್ ಹಾಗೂ ಇನ್ನಿತರರು ಭ್ರೂಣ ಪತ್ತೆ ಮಾಡಲು ಸ್ಕ್ಯಾನಿಂಗ್ ಮಿಷನ್​ ಇಟ್ಟುಕೊಂಡಿದ್ದಾರೆ. ಸ್ಕ್ಯಾನ್​ ವೇಳೆ ಹೆಣ್ಣು ಮಗು ಎಂದು ತಿಳಿದುಬಂದರೆ ಗರ್ಭಪಾತ ಮಾಡಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ಇಲ್ಲಿ ನಡೆಯುತ್ತಿರುವ ದಂಧೆ ಬಗ್ಗೆ ಗೊತ್ತಾಗುತ್ತಿದ್ದಂತೆ ಕಾರ್ಯಾಚರಣೆ ಕೈಗೊಂಡ ಇನ್‌ ಸ್ಪೆಕ್ಟರ್ ಪ್ರಶಾಂತ್ ನೇತೃತ್ವದ ತಂಡ ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದೆ. ದಾಳಿ ವೇಳೆ ಹಲವರು ಪರಾರಿಯಾಗಿದ್ದು, ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಣ್ಣು ಭ್ರೂಣ ಪತ್ತೆ ದಂಧೆ ಬೆಳಕಿಗೆ ಬಂದ ಹಿನ್ನೆಲೆ ಪ್ರಕರಣದ ಉನ್ನತ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.

ಭ್ರೂಣ ಪತ್ತೆ ಹಚ್ಚಲು ಪಾಂಡವಪುರ ಬಳಿಯ ಅಲೆಮನೆಯೇ ಸ್ಕ್ಯಾನಿಂಗ್ ಸೆಂಟರ್ ಆಗಿ ಆರೋಪಿಗಳು ಪರಿವರ್ತಿಸಿಕೊಂಡಿದ್ದರು. ಮಂಡ್ಯ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಈ ದಂಧೆ ಸಕ್ರಿಯವಾಗಿದ್ದು ಭ್ರೂಣ ಪತ್ತೆಗೆ 15 ರಿಂದ 20 ಸಾವಿರ ಹಣ ಪಡೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ಆರೋಪಿ ಶಿವಲಿಂಗೇಗೌಡಗೆ ಈ ಹಿಂದೆ ಲ್ಯಾಬ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ನಾಪತ್ತೆಯಾಗಿರುವ ವೀರೇಶ್ ಚಿಕ್ಕಪ್ಪ ಡಾ.ಮಲ್ಲಿಕಾರ್ಜುನ್ ಎಂಬುವರು ವೈದ್ಯರಾಗಿದ್ದು, ದಂಧೆಗೆ ಸಾಥ್ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ.