ಹೈದರಾಬಾದ್: ಮೊದಲ ಬಾರಿಗೆ ತೆಲಂಗಾಣ ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಪಕ್ಷವು ಇದೀಗ ನೂತನ ಮುಖ್ಯಮಂತ್ರಿಯ ನೇಮಕ ಮಾಡಿದೆ. ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರನ್ನು ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
ಹೊಸದಿಲ್ಲಿಯಲ್ಲಿ ನಡೆದ ಹೈಕಮಾಂಡ್ ಸಭೆಯ ಬಳಿಕ ಈ ನಿರ್ಧಾರ ಹೊರಬಿದ್ದಿದೆ. ತೆಲಂಗಾಣ ಶಾಸಕಾಂಗ ಪಕ್ಷದ ನೂತನ ಸಿಎಲ್ಪಿಯಾಗಿ ರೇವಂತ್ ರೆಡ್ಡಿ ಅವರೊಂದಿಗೆ ಕಣಕ್ಕಿಳಿಯಲು ಕಾಂಗ್ರೆಸ್ ಅಧ್ಯಕ್ಷರು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.
ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ 119 ಸ್ಥಾನಗಳ ಪೈಕಿ 64 ಸ್ಥಾನಗಳ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಪ್ರಸ್ತುತ ಚುನಾವಣೆಯಲ್ಲಿತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (TPCC) ಅಧ್ಯಕ್ಷ ಅನುಮುಲಾ ರೇವಂತ್ ರೆಡ್ಡಿ 32,532 ಮತಗಳಿಂದ ಗೆದ್ದಿದ್ದು ಕಾಂಗ್ರೆಸ್ ಗೆಲುವಿನ ರೂವಾರಿ ಆಗಿ ಹೊರಹೊಮ್ಮಿದ್ದಾರೆ. ಕೊಡಂಗಲ್ ಅಲ್ಲದೆ, ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ (ಕೆಸಿಆರ್) ಕಣಕ್ಕಿಳಿದಿದ್ದ ಕಾಮರೆಡ್ಡಿಯಿಂದ ಕೂಡಾ ರೇವಂತ್ ರೆಡ್ಡಿ ಸ್ಪರ್ಧಿಸಿದ್ದರು. ಆದಾಗ್ಯೂ, ಬಿಜೆಪಿಯ ವೆಂಕಟ ರಮಣ ರೆಡ್ಡಿ ಮುಂದೆ ಈ ಪ್ರಮುಖ ನಾಯಕರು ಪರಾಭವಗೊಂಡರು.
54ರ ಹರೆಯದ ನಾಯಕ ರೇವಂತ್ ರೆಡ್ಡಿ ಅವರು ಜೂನ್ 2021 ರಲ್ಲಿ ತೆಲುಗು ದೇಶಂ ಪಕ್ಷವನ್ನು (ಟಿಡಿಪಿ) ತೊರೆದು ಕಾಂಗ್ರೆಸ್ ಗೆ ಸೇರಿ, ಅಲ್ಪಾವಧಿಯಲ್ಲಿ ಕಾಂಗ್ರೆಸ್ ಗೆ ಪ್ರಭಾವಶಾಲಿ ವಿಜಯವನ್ನು ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.














