ಮನೆ ರಾಷ್ಟ್ರೀಯ ಚಳಿಗಾಲದ ಅಧಿವೇಶನ: ಮತ್ತೆ 49 ಸದಸ್ಯರ ಅಮಾನತು

ಚಳಿಗಾಲದ ಅಧಿವೇಶನ: ಮತ್ತೆ 49 ಸದಸ್ಯರ ಅಮಾನತು

0

ನವದೆಹಲಿ: ಡಿ. 13ರಂದು ಲೋಕಸಭೆಯಲ್ಲಿ ಸಂಭವಿಸಿದ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಗೃಹ ಸಚಿವರ ಉತ್ತರಕ್ಕೆ ಒತ್ತಾಯಿಸುತ್ತಿರುವ ವಿರೋಧ ಪಕ್ಷಗಳ 49 ಸದಸ್ಯರನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಂಗಳವಾರ ಅಮಾನತು ಮಾಡಿದ್ದಾರೆ.

ಇದರೊಂದಿಗೆ ಚಳಿಗಾಲದ ಅಧಿವೇಶನದಲ್ಲಿ ಒಟ್ಟು ಅಮಾನತು ಆದ ಸಂಸದರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಸೋಮವಾರ ಕಲಾಪ ಮುಗಿಯುವವರೆಗೆ ರಾಜ್ಯಸಭೆ ಮತ್ತು ಲೋಕಸಭೆಯಿಂದ ಒಟ್ಟು 92 ಸಂಸದರನ್ನು ಅಮಾನತು ಮಾಡಲಾಗಿತ್ತು.

ಮಂಗಳವಾರ ಅಮಾನತು ಆದವರಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ ಫಾರೂಕ್ ಅಬ್ದುಲ್ಲಾ ಹಾಗೂ ಕಾಂಗ್ರೆಸ್ ಮುಖಂಡರಾದ ಶಶಿ ತರೂರ್‌, ಮನೀಶ್ ತಿವಾರಿ ಅವರೂ ಸೇರಿದ್ದಾರೆ.

ಲೋಕಸಭೆಯಲ್ಲಿನ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಅವರ ಉತ್ತರಕ್ಕೆ ಬೇಡಿಕೆ ಇಟ್ಟು ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ‘ದ ಸದಸ್ಯರು ಕಳೆದ ಕೆಲ ದಿನಗಳಿಂದ ತೀವ್ರ ಒತ್ತಡ ಹೇರುತ್ತಿದ್ದಾರೆ. ಫಲಕ ಹಿಡಿದು ಮತ್ತು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಂಸತ್‌ ನ ಭದ್ರತಾ ವೈಫಲ್ಯ ವಿಷಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆಗೆ ಪಟ್ಟು ಹಿಡಿದು ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ 78 ಸದಸ್ಯರನ್ನು ಸೋಮವಾರ ಅಮಾನತು ಮಾಡಲಾಗಿತ್ತು.

ಅಶಿಸ್ತಿನ ವರ್ತನೆ ಹಾಗೂ ಸಭಾಪತಿ ನಿರ್ದೇಶನಗಳನ್ನು ಧಿಕ್ಕರಿಸಿದ ಕಾರಣಕ್ಕೆ ರಾಜ್ಯಸಭೆಯ 45 ಸದಸ್ಯರನ್ನು ಅಮಾನತುಗೊಳಿಸಲಾಗಿದೆ. 34 ಸದಸ್ಯರನ್ನು ಚಳಿಗಾಲದ ಉಳಿದ ಅಧಿವೇಶನದ ಅವಧಿಗೆ ಹೊರ ಹಾಕಲಾಗಿದೆ. 11 ಸದಸ್ಯರ ನಡವಳಿಕೆ ಪ್ರಕರಣವನ್ನು ಸದನದ ಹಕ್ಕುಬಾಧ್ಯತಾ ಸಮಿತಿಗೆ ನೀಡಲಾಗಿದ್ದು, ಆ ವರದಿ ಬರುವವರೆಗೆ ಸದನದಿಂದ ದೂರ ಉಳಿಯುವಂತೆ ಸೂಚಿಸಲಾಗಿದೆ.