ಮನೆ ಸುದ್ದಿ ಜಾಲ ಬೆಂಗಳೂರು: ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣ ಮಾತ್ರದಲ್ಲಿ ಚಾಲಕ ಸಜೀವ...

ಬೆಂಗಳೂರು: ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣ ಮಾತ್ರದಲ್ಲಿ ಚಾಲಕ ಸಜೀವ ದಹನ

0

ಬೆಂಗಳೂರು: ಚಲಿಸುತ್ತಿದ್ದ ಕಾರು ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣ ಮಾತ್ರದಲ್ಲಿ ಇಡೀ ವಾಹನ ಹೊತ್ತಿ ಉರಿದು ಕರಕಲಾಗಿದ್ದಲ್ಲದೆ, ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲಾಗದೆ ಕಾರು ಚಾಲಕ ಸಜೀವ ದಹನಗೊಂಡಿರುವ ದಾರುಣ ಘಟನೆ ಬೆಂಗಳೂರು ಉತ್ತರ ತಾಲ್ಲೂಕು ಅಂಚೆಪಾಳ್ಯದ ಹತ್ತಿರ ನೆಲಮಂಗಲದ ಟೋಲ್ ಬಳಿಯ ಪಾರ್ಲೆ ಜಿ ಬಿಸ್ಕೆಟ್ ಫ್ಯಾಕ್ಟರಿ ಬಳಿ ಹೆದ್ದಾರಿಯಲ್ಲಿ ಸಂಭವಿಸಿದೆ.

ಎರ್ಟಿಗಾ ಸಿಎನ್‌ಜಿ ಕಾರು ಹೊತ್ತಿ ಉರಿದು ಭಸ್ಮವಾಗಿದೆ. ಬೆಂಕಿ ಹತ್ತಿ ಉರಿದಾಗ ಕಾರಲ್ಲಿದ್ದ ಚಾಲಕ ಕಿರುಚಾಡಿಕೊಂಡಿದ್ದಾನೆ. ಬೆಂಕಿ ದಟ್ಟವಾಗಿದ್ದರಿಂದ ಸ್ಥಳೀಯರಿಗೂ ಸಹಾಯಕ್ಕೆ ಧಾವಿಸಲು ಸಾಧ್ಯವಾಗಿಲ್ಲ. ಪಕ್ಕದಲ್ಲಿ ಸಂಚರಿಸುತ್ತಿದ್ದ ವಾಹನದಲ್ಲಿ, ನಡೆದುಕೊಂಡು ಹೋಗುವವರು ನೋಡಿಕೊಂಡು ಸುಮ್ಮನಾಗುವ ಪರಿಸ್ಥಿತಿಯುಂಟಾಗಿತ್ತು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿ ಶಾಮಕದಳ ಸಿಬ್ಬಂದಿ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಇತ್ತ ಘಟನೆಯಿಂದ ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್‌ ಜಾಮ್ ಉಂಟಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಚಾಲಕರ ಗುರುತು ಪತ್ತೆಯಾಗಿಲ್ಲ.